ಧರ್ಮಸ್ಥಳದ ಅಸ್ತಿಪಂಜರ ಪ್ರಕರಣದಲ್ಲಿ ಹೆಗಡೆ ಪರಿವಾರದ ಬೆಂಬಲಕ್ಕೆ ಶಿರಸಿಯ ಸೋಂದಾ ಜೈನ ಮಠದ ಸ್ವಾಮೀಜಿ ನಿಂತಿದ್ದಾರೆ. ಅಹಿಂಸಾ ಧರ್ಮ ಪಾಲಿಸುವವರು ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. SIT ತನಿಖೆಗೆ ಒತ್ತಡ ಬರಬಾರದು ಎಂದು ಸಲಹೆ ನೀಡಿದ್ದಾರೆ.

ಉತ್ತರ ಕನ್ನಡ (ಆ.11): ಅಹಿಂಸಾ ಧರ್ಮವನ್ನು ಪಾಲನೆ ಮಾಡುವವರು ಕೊಲೆ ಮಾಡುವಷ್ಟು ಕ್ರೂರರಲ್ಲ. ಮನಸ್ಸಿನಲ್ಲಿಯೂ ಯಾರನ್ನೂ ದ್ವೇಷ ಮಾಡದವರು ಕೊಲೆಗೆ ಇಳಿಯಲು ಸಾಧ್ಯವಿಲ್ಲ. ಹೆಗಡೆ ಪರಿವಾರವನ್ನು ಗುರಿಯಾಗಿಸಿ ತಪ್ಪು ಹೇಳಿಕೆ ನೀಡುತ್ತಿದ್ದಾರೆ ಎಂದು ಶಿರಸಿಯ ಸೋಂದಾ ಜೈನ ಮಠದ ಜಗದ್ಗುರು 'ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ ಸ್ವಾಮೀಜಿ ಹೇಳಿದರು.

Add Asianetnews Kannada as a Preferred SourcegooglePreferred

ಧರ್ಮಸ್ಥಳದಲ್ಲಿ ಅಸ್ತಿಪಂಜರಗಳ ಹುಡುಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿರಸಿಯ ಸೋಂದಾ ಜೈನ ಮಠದ ಜಗದ್ಗುರು 'ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ ಸ್ವಾಮೀಜಿ' ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಪರಿವಾರದ ಬೆಂಬಲಕ್ಕೆ ನಿಂತಿದ್ದಾರೆ. ಕೆಲವರು ಅತೃಪ್ತಿಯಿಂದ ಹೆಗಡೆ ಪರಿವಾರವನ್ನು ಗುರಿಯಾಗಿಸಿ ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ಅಹಿಂಸಾ ಧರ್ಮವನ್ನು ಪಾಲನೆ ಮಾಡುವವರು ಕೊಲೆ ಮಾಡುವಷ್ಟು ಕ್ರೂರರಲ್ಲ. ಮನಸ್ಸಿನಲ್ಲಿಯೂ ಯಾರನ್ನೂ ದ್ವೇಷ ಮಾಡದವರು ಕೊಲೆಗೆ ಇಳಿಯಲು ಸಾಧ್ಯವಿಲ್ಲ" ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು. ಹಲವು ವರ್ಷಗಳಿಂದಲೂ ಇಂತಹ ಘಟನೆಗಳು ನಡೆಯುತ್ತಲೇ ಬರುತ್ತಿವೆ ಎಂದು ಹೇಳಿದರು.

SIT ತನಿಖೆಗೆ ಒತ್ತಡ ಬರಬಾರದು:

ಈ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿರುವ ಕ್ರಮವನ್ನು ಸ್ವಾಮೀಜಿ ಸ್ವಾಗತಿಸಿದರು. 'SIT ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಮತ್ತು ಅವರಿಗೆ ಯಾವುದೇ ಒತ್ತಡ ಬರಬಾರದು. ಈ ಬಗ್ಗೆ ತನಿಖೆ ನಡೆಯುತ್ತಿರುವಾಗ ಯಾರೂ ಮಾತನಾಡುವುದು ಸರಿಯಲ್ಲ. ನಾವು ತೀರ್ಪು ನೀಡುವ ಬದಲು ತನಿಖೆಯ ನಂತರ ನ್ಯಾಯಾಂಗವು ನೀಡುವ ತೀರ್ಪನ್ನು ಸ್ವಾಗತಿಸಬೇಕು' ಎಂದು ಸಲಹೆ ನೀಡಿದರು.

ಸ್ವಾಮೀಜಿಯವರು, ಹೆಗಡೆ ಪರಿವಾರದ ಮನೋಸ್ಥೈರ್ಯ ಹೆಚ್ಚಾಗಲಿ ಎಂದು ದೇವತೆಗಳಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು. 'ಶ್ರೀ ಕ್ಷೇತ್ರ ಯಾವಾಗಲೂ ಹೆಗಡೆ ಪರಿವಾರದ ಜತೆಯಿದೆ. ಮುಂದಿನ ದಿನಗಳಲ್ಲಿ ಅವರು ಸುಖದಿಂದ ಇರಲು ನಾವು ಪ್ರಾರ್ಥಿಸುತ್ತೇವೆ' ಎಂದು ಭರವಸೆ ನೀಡಿದರು.