ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೀಮಾ ನದಿಗೆ ಅಪಾರ ನೀರು ಬಿಡುಗಡೆ ಮಾಡಲಾಗಿದ್ದು, ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು, ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ತೀರದ ಗ್ರಾಮಗಳು ಜಲಾವೃತಗೊಂಡಿದೆ.

ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ನಿರ್ಮಾಣವಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನದಿತೀರದ ಹಳ್ಳಿಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಾಜ್ಯಸರ್ಕಾರ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.

Add Asianetnews Kannada as a Preferred SourcegooglePreferred

ಕಲಬುರಗಿ – ತುಂಬಿ ತುಳುಕುತ್ತಿದೆ ಸೊನ್ನ ಬ್ಯಾರೇಜ್

ಆಫಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಇರುವ ಬ್ಯಾರೇಜ್‌ ಈಗ ಸಂಪೂರ್ಣ ಭರ್ತಿಯಾಗಿದ್ದು ಸಾಮರ್ಥ್ಯ ತಲುಪಿದೆ. ಒಟ್ಟು 3.166 ಟಿಎಂಸಿ ಸಾಮರ್ಥ್ಯ ಹೊಂದಿರುವ ಈ ಬ್ಯಾರೇಜ್‌ಗೆ ಪ್ರಸ್ತುತ 3.30 ಲಕ್ಷ ಕ್ಯೂಸೆಕ್ಸ್ ನೀರಿನ ಒಳಹರಿವು ಆಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಹೊರಹರಿವು ನಡೆಯುತ್ತಿದೆ. ಇದರ ಪರಿಣಾಮವಾಗಿ ಬ್ಯಾರೇಜ್‌ನ ಕೆಳಭಾಗದ ಹಲವಾರು ಹಳ್ಳಿಗಳಲ್ಲಿ ನೀರು ನುಗ್ಗಿದೆ. ಭೀಮಾ ನದಿಯ ನೀರು ದೇವಣಗಾಂವ ಸೇತುವೆ ಮಟ್ಟಕ್ಕೆ ಹರಿಯುತ್ತಿದ್ದು, ಇನ್ನೊಂದು ಅಡಿ ನೀರು ಹೆಚ್ಚಾದರೆ ಕಲಬುರಗಿ–ವಿಜಯಪುರ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ರಾಯಚೂರು – ಕೃಷ್ಣ ನದಿ ತೀರದ ರೈತರ ಗೋಳಾಟ

ರಾಯಚೂರು ತಾಲೂಕಿನ ಕಾಡ್ಲೂರು ಬಳಿ ಭೀಮಾ ಹಾಗೂ ಕೃಷ್ಣ ನದಿಗಳ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಿದ ಪರಿಣಾಮ ತೀರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದೆ. ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಆತಂಕಕ್ಕೆ ಸಿಲುಕಿದ್ದು, ನೂರಾರು ಎಕರೆ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಭತ್ತದ ಬೆಳೆ, ಪೈಪ್, ಮೋಟಾರ್ ಮತ್ತು ಟ್ರಾನ್ಸ್‌ಫಾರ್ಮರ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ರೈತರು ಕಂಗಾಲಾಗಿದ್ದಾರೆ. ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದಿರುವುದರಿಂದ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿ – ಅನ್ನ ನೀರಿಲ್ಲದೆ ಕಣ್ಣೀರಿಟ್ಟ ಜನ

ಯಾದಗಿರಿ ಜಿಲ್ಲೆ ಪ್ರವಾಹದ ಭೀಕರ ಸ್ಥಿತಿಯನ್ನು ಎದುರಿಸುತ್ತಿದೆ. ಜಿಲ್ಲೆಯ ಹಲವಾರು ಹಳ್ಳಿಗಳು, ವಿಶೇಷವಾಗಿ ಯಾದಗಿರಿ ನಗರ ಹಾಗೂ ಅದರ ಹೊರವಲಯಗಳು ನೀರಿನ ಮಳೆಹನಿಯಿಂದ ನಲುಗುತ್ತಿವೆ.

ಹಿನ್ನೀರಿಗೆ ಸಿಲುಕಿದ ವ್ಯಕ್ತಿಯ ರಕ್ಷಣಾ ಕಾರ್ಯ

ಯಾದಗಿರಿ ನಗರದ ಹೊರಭಾಗದಲ್ಲಿರುವ ಭೀಮಾ ನದಿಯ ತೀರದಲ್ಲಿ ಒಬ್ಬ ವ್ಯಕ್ತಿ ಪ್ರವಾಹದ ನೀರಿನಲ್ಲಿ ಸಿಲುಕಿ ಗಂಟೆಗಟ್ಟಲೆ ಸಹಾಯಕ್ಕಾಗಿ ಅಂಗಲಾಚಿದ. ಸ್ಥಳೀಯ ಧೈರ್ಯಶಾಲಿ ಯುವಕ ಈಜಾಡಿ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದನು. ಯುವಕನ ಸಾಹಸ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗತ ಎರಡು ದಿನಗಳಿಂದ ಯಾದಗಿರಿ ನಗರದಲ್ಲಿ ಪ್ರವಾಹದ ನೀರು ಆವರಿಸಿರುವುದರಿಂದ ವೀರಭದ್ರೇಶ್ವರ ಹಾಗೂ ವಿಶ್ವರಾಧ್ಯ ಬಡಾವಣೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನೀರು ನುಗ್ಗಿ, ಅನೇಕ ಕುಟುಂಬಗಳು ಮೆಟ್ಟಿಲುಗಳ ಮೇಲೂ ಮನೆಯ ಮೇಲ್ಛಾವಣಿಗಳ ಮೇಲೂ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ನಿದ್ದೆ ಮಾಡದೆ ಪರದಾಡುತ್ತಿರುವ ಜನರು, ವಿದ್ಯುತ್ ಇಲ್ಲದ ಕಾರಣ ಸಂಪರ್ಕವೂ ಕಡಿತಗೊಂಡಿದೆ. ಚಿಕ್ಕಮಕ್ಕಳುಳ್ಳ ಕುಟುಂಬಗಳು ಭಯಭೀತರಾಗಿದ್ದು, ಕೆಲವರು ಸಂಬಂಧಿಕರ ಮನೆಗಳಿಗೆ ಶಿಫ್ಟ್ ಆಗಿದ್ದಾರೆ. ಒಬ್ಬ ವೃದ್ಧನು ಬೆಡ್‌ಶೀಟ್ ಹಿಡಿದು ಬಾಡಿಗೆ ಮನೆಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸಿದ್ದಾನೆ. ನಿವಾಸಿಗಳ ಪ್ರಕಾರ, ಪ್ರವಾಹದ ನೀರು ಪ್ರತಿ ಗಂಟೆಗೆ ಹೆಚ್ಚಾಗುತ್ತಿದೆ.

ವೀರಭದ್ರೇಶ್ವರ ಬಡಾವಣೆಯ ನೂರಾರು ಮನೆಗಳು ಜಲಾವೃತಗೊಂಡಿದ್ದು, ಹತ್ತಾರು ಕುಟುಂಬಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಈ ಕುಟುಂಬಗಳನ್ನು SDRF ಸಿಬ್ಬಂದಿ ಬೋಟ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಮನೆಗಳಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಹೊರತೆಗೆಯುವ ವೇಳೆ ಹಲವರು ಕಣ್ಣೀರಾಕಿದರು. ಕಳೆದ ಮೂರು ದಿನಗಳಿಂದ ಆಹಾರ, ಕುಡಿಯುವ ನೀರು, ವಿದ್ಯುತ್ ಇಲ್ಲದೇ ನರಳುತ್ತಿರುವ ಕುಟುಂಬಗಳು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.

ಪ್ರವಾಹದಲ್ಲಿ ಸಿಲುಕಿದ ಮಹಿಳೆಯೊಬ್ಬಳು ಸುವರ್ಣ ನ್ಯೂಸ್ ಕ್ಯಾಮೆರಾ ಮುಂದೆ ಕಣ್ಣೀರಿಟ್ಟು ಮಾತನಾಡಿ, “ಮೂರು ದಿನಗಳಿಂದ ಊಟ-ನೀರು ಇಲ್ಲದೆ ನರಳುತ್ತಿದ್ದೇವೆ. ಕರೆಂಟ್ ಇಲ್ಲದ ಕಾರಣ ನಿದ್ದೆಯೂ ಮಾಡಿಲ್ಲ, ಸಂಪರ್ಕವೂ ಇಲ್ಲ. ನಮ್ಮ ಪರಿಸ್ಥಿತಿ ಯಾರಿಗೂ ಬಾರದಿರಲಿ” ಎಂದು ನೋವು ಹಂಚಿಕೊಂಡರು.

ವಿಜಯಪುರ ಪ್ರವಾಹ 

ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಭೀಮಾ ನದಿ ಪ್ರವಾಹ ಹೆಚ್ಚಾಗಿದೆ. ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ನದಿಯ ನೀರು ಸೇತುವೆ ಮೇಲೆ ಹರಿಯುತ್ತಿರುವುದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಮೀನಿನಲ್ಲಿ ವಾಸಿಸುತ್ತಿದ್ದ 15ಕ್ಕೂ ಹೆಚ್ಚು ಕುಟುಂಬಗಳು ಬೋಟ್ ಮೂಲಕ ಗ್ರಾಮಕ್ಕೆ ಸಂಚರಿಸುತ್ತಿದ್ದು, ಸ್ಥಳೀಯ ಮೀನುಗಾರರ ಬೋಟ್‌ಗಳೇ ಅವಲಂಬನೆಯಾಗಿವೆ. ಆದರೆ ಲೈಫ್ ಜಾಕೆಟ್‌ಗಳಿಲ್ಲದ ಕಾರಣ ಜನರ ಸುರಕ್ಷತೆ ಪ್ರಶ್ನಾರ್ಹವಾಗಿದೆ.

ಜಿಲ್ಲಾಡಳಿತದಿಂದ ಬೋಟ್ ವ್ಯವಸ್ಥೆ ಮಾಡುವ ಭರವಸೆ ನೀಡಿದರೂ ತಕ್ಷಣದ ಕ್ರಮ ಕೈಗೊಳ್ಳದಿರುವುದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ, ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲ್ ಸುದ್ದಿಗೋಷ್ಟಿ ನಡೆಸಿ ಪ್ರವಾಹ ಪರಿಸ್ಥಿತಿ ಕುರಿತು ಜಿಲ್ಲಾ ಆಡಳಿತಕ್ಕೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಮಹಾರಾಷ್ಟ್ರದಿಂದ ನಿರಂತರವಾಗಿ ಹೊರಬರುತ್ತಿರುವ ನೀರಿನ ಹೊಳೆ, ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಪ್ರವಾಹದ ಭೀತಿಯನ್ನು ಹೆಚ್ಚಿಸಿದೆ. ನೂರಾರು ಮನೆಗಳು ಜಲಾವೃತವಾಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ರೈತರು, ಗ್ರಾಮಸ್ಥರು ಮತ್ತು ನಗರ ಪ್ರದೇಶದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಮತ್ತು ಆಡಳಿತ ತ್ವರಿತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.