ಕೊಡಗಿನ ಕೊಂಡಗೇರಿ ಸುನ್ನೀ ಮುಸ್ಲಿಂ ಜಮಾಅತ್, ಗೋವು ಕಳವು ಪ್ರಕರಣದಲ್ಲಿ ಭಾಗಿಯಾದ ಮೂವರು ಸದಸ್ಯರನ್ನು ಸಮುದಾಯದಿಂದ ಬಹಿಷ್ಕರಿಸಿದೆ. ಈ ಮೂವರೊಂದಿಗೆ ಯಾವುದೇ ವ್ಯವಹಾರ ಅಥವಾ ಸಾಮಾಜಿಕ ಸಂಬಂಧ ಇಟ್ಟುಕೊಳ್ಳದಂತೆ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದು, ಅವರ ಧಾರ್ಮಿಕ ಕಾರ್ಯಕ್ರಮಗಳನ್ನೂ ಬಹಿಷ್ಕರಿಸಲಾಗಿದೆ.

ಕೊಡಗು (ಸೆ.17): ಹಸುಗಳನ್ನು (ಗೋವು) ಕಳವು ಮಾಡುವುದು ಮತ್ತು ಅಕ್ರಮ ಸಾಗಣೆಯಲ್ಲಿ ಭಾಗಿಯಾದ ಮೂವರು ಸದಸ್ಯರಿಗೆ ಕೊಡಗಿನ ಕೊಂಡಗೇರಿ ಸುನ್ನೀ ಮುಸ್ಲಿಂ ಜಮಾಅತ್ ಬಹಿಷ್ಕಾರ ಶಿಕ್ಷೆ ವಿಧಿಸಿದೆ. ಈ ಮೂವರನ್ನು ಜಮಾಅತ್ ಸದಸ್ಯತ್ವದಿಂದ ಹೊರಹಾಕಿದ್ದು, ಇವರೊಂದಿಗೆ ಯಾವುದೇ ವ್ಯವಹಾರ ಅಥವಾ ಸಂಬಂಧ ಇಟ್ಟುಕೊಳ್ಳದಂತೆ ಸಮುದಾಯಕ್ಕೆ ಎಚ್ಚರಿಕೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕಠಿಣ ನಿರ್ಧಾರಕ್ಕೆ ಕಾರಣ, ಇತ್ತೀಚೆಗೆ ವಿರಾಜಪೇಟೆ ತಾಲ್ಲೂಕಿನ ಮೈತಾಡಿ ಗ್ರಾಮದಲ್ಲಿ ನಡೆದ ಗೋವು ಕಳವು ಪ್ರಕರಣ. ಮೈತಾಡಿ ಗ್ರಾಮದ ನಿವಾಸಿ ಎಂ. ಭೀಮಯ್ಯ ಎಂಬುವರ ಹಸುವನ್ನು ಕದ್ದ ಆರೋಪದ ಮೇಲೆ ಎ.ಎ. ಶಾಹಿದ್, ಬಿ.ಎಂ. ಹಾರಿಸ್ ಮತ್ತು ಕೆ.ಎ. ಆಶಿಕ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದರು. ಶರೀಅತ್ ಕಾನೂನು ಮತ್ತು ಸಮುದಾಯದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ ಕಾರಣ, ಜಮಾಅತ್ ಈ ಮೂವರ ಸದಸ್ಯತ್ವವನ್ನು ರದ್ದುಪಡಿಸಿದೆ.

ಬಹಷ್ಕಾರದ ಕಠಿಣ ನಿಯಮಗಳು:

ಜಮಾಅತ್ ಸಮಿತಿಯು ಹೊರಡಿಸಿರುವ ಅಧಿಕೃತ ಪತ್ರದಲ್ಲಿ ಈ ಮೂವರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ:

  • ವ್ಯವಹಾರ ನಿಷೇಧ: ಈ ಮೂವರೊಂದಿಗೆ ಯಾರೂ ಯಾವುದೇ ರೀತಿಯ ವ್ಯವಹಾರ ನಡೆಸುವಂತಿಲ್ಲ. ಒಂದು ವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
  • ಸಾಮಾಜಿಕ ಬಹಿಷ್ಕಾರ: ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸುವಂತಿಲ್ಲ. ಅವರೊಂದಿಗೆ ಕಾಣಿಸಿಕೊಂಡರೆ ಅಥವಾ ಸಾರ್ವಜನಿಕವಾಗಿ ಸಂಬಂಧ ಹೊಂದಿದ್ದರೆ, ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
  • ಧಾರ್ಮಿಕ ಕಾರ್ಯಕ್ರಮಗಳ ಬಹಿಷ್ಕಾರ: ಮಸೀದಿಯ ಮೌಲ್ವಿಗಳು ಈ ಮೂವರ ಕುಟುಂಬಗಳಲ್ಲಿ ನಡೆಯುವ ಮದುವೆ, ಮುಂಜಿ ಅಥವಾ ಯಾವುದೇ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಲಾಗಿದೆ.

ಈ ಮೂಲಕ, ಜಮಾಅತ್ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಕಠಿಣ ಸಂದೇಶ ರವಾನಿಸಿದೆ. ಈ ಕ್ರಮವು ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುವಲ್ಲಿ ಧಾರ್ಮಿಕ ಸಂಸ್ಥೆಗಳು ವಹಿಸಬಹುದಾದ ಪಾತ್ರವನ್ನು ಎತ್ತಿ ತೋರಿಸುತ್ತದೆ.