ಬೆಂಗಳೂರು ಮೆಟ್ರೋ ನೀಲಿ ಮಾರ್ಗದ ಚಿಕ್ಕಜಾಲದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನಿಲ್ದಾಣಗಳ ಸ್ಥಳ ಆಯ್ಕೆ ಸರ್ಕಾರದ ವ್ಯಾಪ್ತಿಯಲ್ಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.   

ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಬೆಂಗಳೂರು ಮೆಟ್ರೋ ನೀಲಿ ಮಾರ್ಗದಲ್ಲಿ ಚಿಕ್ಕಜಾಲದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ತೆಗೆದುಕೊಳ್ಳುವುದನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ನಿಲ್ದಾಣಗಳ ಸ್ಥಳ ಆಯ್ಕೆ ಹಾಗೂ ಸಂಖ್ಯೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ರಾಜ್ಯ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳ ವ್ಯಾಪ್ತಿಯಲ್ಲಿದ್ದು, ಅದು ನ್ಯಾಯಾಂಗದ ಹಸ್ತಕ್ಷೇಪಕ್ಕೆ ಒಳಪಟ್ಟ ವಿಷಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Add Asianetnews Kannada as a Preferred SourcegooglePreferred

ನ್ಯಾಯಾಲಯದ ಅಭಿಪ್ರಾಯ

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ಪೀಠವು, “ಮೆಟ್ರೋ ನಿಲ್ದಾಣಗಳ ಅವಶ್ಯಕತೆ ಮತ್ತು ಅವುಗಳ ಸ್ಥಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಇಂತಹ ಯೋಜನಾ ನಿರ್ಧಾರಗಳನ್ನು ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ನ್ಯಾಯಾಂಗ ಪರಿಶೀಲಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದೆ.

ನಿವಾಸಿಗಳ ಮನವಿ ಪರಿಶೀಲನೆಗೆ ಸೂಚನೆ

ಆದಾಗ್ಯೂ, 2022ರಲ್ಲಿ ಚಿಕ್ಕಜಾಲ ನಿಲ್ದಾಣಕ್ಕಾಗಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ ಲಿಖಿತ ಮನವಿಯನ್ನು ಪರಿಶೀಲಿಸಿ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಇದೇ ರೀತಿಯ ಆದೇಶವನ್ನು ಜುಲೈ ತಿಂಗಳಲ್ಲಿಯೂ ಹೊರಡಿಸಲಾಗಿತ್ತು. ಅಂದಾಗ, ಚಿಕ್ಕಜಾಲದ ಹತ್ತಿರದ ಬೆಟ್ಟಹಲಸೂರಿನಲ್ಲಿ ನಿಲ್ದಾಣ ನಿರ್ಮಾಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಅರ್ಜಿದಾರರ ವಾದ

  • ಸಿ.ಆರ್. ನವೀನ್ ಕುಮಾರ್ ಹಾಗೂ ಚಿಕ್ಕಜಾಲದ ಇತರ ಆರು ನಿವಾಸಿಗಳು ಸಲ್ಲಿಸಿದ ಪಿಐಎಲ್‌ನಲ್ಲಿ,
  • ಮೂಲತಃ ನೀಲಿ ಮಾರ್ಗದ ಹಂತ 2B ಯೋಜನೆ ಅಡಿಯಲ್ಲಿ ಚಿಕ್ಕಜಾಲದಲ್ಲಿ ನಿಲ್ದಾಣವನ್ನು ಬಿಎಮ್‌ಆರ್‌ಸಿಎಲ್‌ ಯೋಜಿಸಿತ್ತು,
  • ಈ ಮಾರ್ಗವು ಪೂರ್ವ ಬೆಂಗಳೂರು ಕೆಆರ್ ಪುರಂ ಅನ್ನು ಉತ್ತರ ಭಾಗದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುವ ಮಹತ್ವದ ಲೈನ್ ಆಗಿದೆ ಎಂದು ವಾದಿಸಿದರು.
  • ಆದರೆ ನಂತರ ನಿಲ್ದಾಣವನ್ನು ಕೈಬಿಟ್ಟಿರುವ ನಿರ್ಧಾರ ಅಸಂಗತ ಹಾಗೂ ಅನಿಯಂತ್ರಿತವಾಗಿದೆ ಎಂದು ಅರ್ಜಿದಾರರು ದೂರಿದರು. ಹೀಗಾಗಿ ಚಿಕ್ಕಜಾಲ ನಿಲ್ದಾಣ ನಿರ್ಮಾಣ ಮಾಡುವವರೆಗೆ ಬ್ಲೂ ಲೈನ್ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಪೀಠದ ಅಂತಿಮ ತೀರ್ಪು

ವಾದ ಆಲಿಸಿದ ನ್ಯಾಯಾಲಯದ ವಿಭಾಗೀಯ ಪೀಠ, ಈ ಬೇಡಿಕೆಯನ್ನು ತಳ್ಳಿ ಹಾಕಿದ್ದು, ಯೋಜನಾ ಹಾಗೂ ನೀತಿ ನಿರ್ಧಾರಗಳು ಸಂಪೂರ್ಣವಾಗಿ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ. ಇಂತಹ ವಿಷಯಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ.