ಆಳ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ತೂಫಾನಿಗೆ ಸಿಲುಕಿದ್ದ ಗೋವಾದ “ಐಎಫ್‌ಬಿ ಸಂತ ಆಂಟನಿ” ಬೋಟ್‌ನಲ್ಲಿದ್ದ 31 ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ ಯಶಸ್ವಿಯಾಗಿ ರಕ್ಷಿಸಿದೆ.   ಮೀನುಗಾರರನ್ನು ರಕ್ಷಿಸಿದ ನಂತರ ಹಾನಿಗೊಳಗಾದ ಬೋಟ್‌ನ್ನು ಹೊನ್ನಾವರ ಬಂದರಿಗೆ ಎಳೆದು ತರಲಾಯಿತು.

ಹೊನ್ನಾವರ/ಗೋವಾ: ಆಳ ಸಮುದ್ರದಲ್ಲಿ ತೂಫಾನಿನ ತೀವ್ರತೆಗೆ ಸಿಲುಕಿ ಅಪಾಯದಲ್ಲಿದ್ದ ಗೋವಾದ ಮೀನುಗಾರಿಕಾ ಬೋಟ್ “ಐಎಫ್‌ಬಿ ಸಂತ ಆಂಟನಿ” ಯಲ್ಲಿ ಸಿಲುಕಿದ್ದ 31 ಮಂದಿ ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಅಕ್ಟೋಬರ್ 24ರಂದು ಈ ಮೀನುಗಾರಿಕಾ ಬೋಟ್‌ನೊಂದಿಗೆ ಸಂಪರ್ಕ ಕಳೆದು ಹೋಗಿದ್ದ ಹಿನ್ನೆಲೆಯಲ್ಲಿ, ಅಧಿಕಾರಿಗಳು ತಕ್ಷಣ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮುದ್ರದ ಮಧ್ಯೆ ಅಪಾಯ

ಗೋವಾದ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲುಗಳ (ಸುಮಾರು 185 ಕಿ.ಮೀ.) ದೂರದಲ್ಲಿ ಈ ಬೋಟ್ ಸಿಲುಕಿಕೊಂಡಿತ್ತು. ಬೋಟ್‌ನ ಸ್ಟೀರಿಂಗ್ ಹಾಗೂ ಗೇರ್ ವ್ಯವಸ್ಥೆ ವೈಫಲ್ಯಗೊಂಡಿದ್ದರಿಂದ, ಸಮುದ್ರದ ಪ್ರಬಲ ಅಲೆಗಳು ಮತ್ತು ತೀವ್ರ ಗಾಳಿಯಲ್ಲಿ ಅದು ನಿಯಂತ್ರಣ ತಪ್ಪಿ ಅಪಾಯಕ್ಕೆ ಸಿಲುಕಿತ್ತು. ಈ ಸಂದರ್ಭ ತಟ ರಕ್ಷಣಾ ಪಡೆಯ ಡಾರ್ನಿಯರ್ ಗಸ್ತು ವಿಮಾನವು ನಿಯಮಿತ ಗಸ್ತು ಸಮಯದಲ್ಲಿ ಆಳ ಸಮುದ್ರದಲ್ಲಿ ಬೋಟ್‌ನ ಚಲನವಲನ ಪತ್ತೆಹಚ್ಚಿತು. ತಕ್ಷಣವೇ ಮಾಹಿತಿ ಐಸಿಜಿಎಸ್ ಕಸ್ತೂರಬಾ ಗಾಂಧಿ ಹಡಗಿಗೆ ರವಾನಿಸಲಾಯಿತು.

ಕೋಸ್ಟ್ ಗಾರ್ಡ್‌ನ ಸಾಹಸೋಚಿತ ಕಾರ್ಯಾಚರಣೆ

ತೀವ್ರ ಹವಾಮಾನ, ಭಾರೀ ಮಳೆ ಮತ್ತು ಅಲೆಗಳ ಮಧ್ಯೆಯೂ ಭಾರತೀಯ ತಟ ರಕ್ಷಣಾ ಪಡೆಯ ಯೋಧರು ನಿರ್ಭೀತಿಯಾಗಿ ಕಾರ್ಯಾಚರಣೆ ನಡೆಸಿದರು. ಕಸ್ತೂರಬಾ ಗಾಂಧಿ ಹಡಗು ತ್ವರಿತವಾಗಿ ಸ್ಥಳಕ್ಕೆ ತೆರಳಿ ಬೋಟ್‌ನಲ್ಲಿ ಸಿಲುಕಿದ್ದ 31 ಮೀನುಗಾರರನ್ನೆಲ್ಲ ಸುರಕ್ಷಿತವಾಗಿ ರಕ್ಷಿಸಿತು. ರಕ್ಷಣಾ ಕಾರ್ಯದ ಬಳಿಕ, ಹಾನಿಗೊಂಡಿದ್ದ “ಐಎಫ್‌ಬಿ ಸಂತ ಆಂಟನಿ” ಮೀನುಗಾರಿಕಾ ಬೋಟ್‌ನ್ನು ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆದುಕೊಂಡು ಬರುವಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮೀನುಗಾರರಿಂದ ಕೃತಜ್ಞತೆ

ತಮ್ಮ ಜೀವ ಉಳಿಸಿದ ತಟ ರಕ್ಷಣಾ ಪಡೆಯ ಧೈರ್ಯ, ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಗೆ ಮೀನುಗಾರರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಮತ್ತೆ ಭಾರತೀಯ ತಟ ರಕ್ಷಣಾ ಪಡೆಯ ಸಮುದ್ರದ ಮಧ್ಯೆ ಜೀವ ರಕ್ಷಣೆ ಕಾರ್ಯಗಳಲ್ಲಿ ನೀಡುತ್ತಿರುವ ತ್ಯಾಗ ಮತ್ತು ಸಾಹಸಾತ್ಮಕ ಸೇವೆಯನ್ನು ಮೆರೆಯಿಸಿದೆ.