ಧರ್ಮಸ್ಥಳದಲ್ಲಿ ನಡೆದ ಸತ್ಯ ದರ್ಶನ ಸಮಾವೇಶದಲ್ಲಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ವಿರುದ್ಧದ ಷಡ್ಯಂತ್ರದ ಕುರಿತು ಮಾತನಾಡಿದ್ದು, ಎಸ್ಐಟಿ ತನಿخೆಗೆ ಕೃತಜ್ಞತೆ ಸಲ್ಲಿಸಿದರು. ಭಕ್ತರ ಭಕ್ತಿಯೇ ಕ್ಷೇತ್ರದ ಶಕ್ತಿ ಎಂದ ಅವರು, ಸವಾಲುಗಳ ನಡುವೆಯೂ ಧರ್ಮಸ್ಥಳ ಇನ್ನಷ್ಟು ಬೆಳಗಲಿದೆ ಎಂದರು.

ಧರ್ಮಸ್ಥಳದಲ್ಲಿ ನಡೆದ ಸತ್ಯ ದರ್ಶನ ಸಮಾವೇಶದಲ್ಲಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಭಕ್ತರಿಗೆ ಸಂದೇಶ ನೀಡಿದರು. ನೀವೆಲ್ಲರೂ ನಮ್ಮ ಕುಟುಂಬದ ಸದಸ್ಯರಂತೆ. ನಾನು ತಮಿಳುನಾಡಿನಲ್ಲಿ ಒಂದು ಹೋಮ ವೀಕ್ಷಿಸಿದ್ದೆ, ಆದರೆ ಇಷ್ಟು ದೊಡ್ಡ ಹೋಮವನ್ನು ಇಂದು ಇಲ್ಲಿ ನೋಡುತ್ತಿದ್ದೇನೆ. ಇದರಿಂದ ತುಂಬಾ ಸಂತೋಷವಾಗಿದೆ. ಹೋಮದ ಫಲವಾಗಿ ಉತ್ತಮ ಮಳೆಯಾಗುತ್ತಿದೆ, ದೇವರು ಕೂಡ ಸಂತೃಪ್ತರಾಗಿದ್ದಾರೆ ಎಂದು ಹೇಳಿದರು. ಬಳಿಕ ಮಾತನಾಡಿದ ಅವರು “ಸತ್ಯ ದರ್ಶನ ಈಗಾಗಲೇ ನಡೆಯುತ್ತಿದೆ. ನೀವು ನಿಮ್ಮ ಬಗ್ಗೆ ಪ್ರಾರ್ಥನೆ ಮಾಡಿಕೊಳ್ಳಿ. ನನಗಾಗಿ ಪ್ರಾರ್ಥನೆ ಮಾಡುವ ಅಗತ್ಯವಿಲ್ಲ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ನನ್ನ ಹಾರೈಕೆ” ಎಂದು ಮನವಿ ಮಾಡಿದರು.

Add Asianetnews Kannada as a Preferred SourcegooglePreferred

ಪಾದಯಾತ್ರೆಯಿಂದ ಚಂಡಿಕಾಯಾಗದವರೆಗೆ

ಪಾದಯಾತ್ರೆಯಿಂದ ಪ್ರಾರಂಭವಾದ ಈ ಸಾಂತ್ವನದ ಮಾತುಗಳು ಇಂದು ಚಂಡಿಕಾಯಾಗದವರೆಗೆ ತಲುಪಿವೆ. ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಜನರು ಬಂದು ಬೆಂಬಲ ತೋರಿಸಿದ್ದಾರೆ. ನಮ್ಮ ತಾಲೂಕಿನಿಂದ ಜನರು ಬರಲಿಲ್ಲ ಎಂಬ ಮಾತು ಮೊದಲು ಇದ್ದರೂ, ಇಂದು ಬೆಳ್ತಂಗಡಿ ತಾಲೂಕಿನ ಜನರು ಸಹ ಆಗಮಿಸಿ ಕೃತಜ್ಞತೆ ತೋರಿದ್ದಾರೆ ಎಂದು ತಿಳಿಸಿದರು.

ಎಸ್ಐಟಿ ತನಿಖೆಗೆ ಕೃತಜ್ಞತೆ

ಸಮಾವೇಶದಲ್ಲಿ ಧರ್ಮಸ್ಥಳ ಎಸ್ಐಟಿ ತನಿಖೆ ಕುರಿತು ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿ , ಎಸ್ಐಟಿ ರಚಿಸಿದಕ್ಕಾಗಿ ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅದು ಇಲ್ಲದಿದ್ದರೆ ಇಷ್ಟು ಸತ್ಯಗಳು ಹೊರಬರುತ್ತಿರಲಿಲ್ಲ. ಮೊದಲ ದಿನವೇ ನಾವು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದೇವೆ. ಈ ಷಡ್ಯಂತ್ರದ ಹಿಂದೆ ಯಾರು ಇದ್ದಾರೆ ಎಂಬುದು ಇದೀಗ ಹೊರಬಂದಿದೆ ಎಂದರು.

ಭಕ್ತಿಯ ಶಕ್ತಿ ಮತ್ತು ಧರ್ಮಸ್ಥಳದ ಬೆಳಕು

ಕ್ಷೇತ್ರವನ್ನು ಮುಚ್ಚಬೇಕು, ಜನ ಇಲ್ಲಿಗೆ ಬರಬಾರದು ಎಂಬ ಉದ್ದೇಶದಿಂದ ಕೆಲವು ಷಡ್ಯಂತ್ರಗಳು ನಡೆದಿದ್ದರೂ, ಭಕ್ತರು ತಮ್ಮ ಭಕ್ತಿಯಿಂದ ಬರುತ್ತಾರೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಚಿನ್ನವನ್ನು ಬೆಂಕಿಗೆ ಹಾಕಿದರೆ ಅದು ಇನ್ನಷ್ಟು ಕಂಗೊಳಿಸುವಂತೆ, ಧರ್ಮಸ್ಥಳವೂ ಈ ಸವಾಲಿನ ನಡುವೆ ಇನ್ನಷ್ಟು ಬೆಳಗುತ್ತಿದೆ ಎಂದು ಹೆಗ್ಗಡೆ ಹೇಳಿದರು.

ಭವಿಷ್ಯದ ಯೋಜನೆಗಳ ಕುರಿತ ಚಿಂತನೆ

ಮುಂದುವರೆಸಿ ಮಾತನಾಡಿದ ಹೆಗ್ಗಡೆ ಕಳೆದ ಎರಡು ದಿನಗಳಿಂದ ಮನಸ್ಸಿಗೆ ಶಾಂತಿ ಇರಲಿಲ್ಲ. ಆದರೆ ಈಗ ಮತ್ತೆ ಚಿಂತನೆ ಆರಂಭವಾಗಿದೆ. ಇನ್ನಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಯೋಜನೆ ರೂಪಿಸುತ್ತಿದ್ದೇನೆ. ಮುಂದೆಯೂ ಈ ಕ್ಷೇತ್ರದಿಂದ ಸದಾ ಸತ್ಕಾರ್ಯಗಳು ನಡೆಯಲಿ ಎಂದು ಭಕ್ತರಿಗೆ ವಿಶ್ವಾಸ ವ್ಯಕ್ತಪಡಿಸಿದರು. ಧರ್ಮಸ್ಥಳ ಸತ್ಯ ದರ್ಶನ ಸಮಾವೇಶವು ಭಕ್ತರಲ್ಲಿ ಉತ್ಸಾಹ, ಭರವಸೆ ಮತ್ತು ಆತ್ಮವಿಶ್ವಾಸ ತುಂಬಿದ್ದು, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಭಾವನಾತ್ಮಕ ಸಂದೇಶ ಧರ್ಮಸ್ಥಳದ ಭವಿಷ್ಯದ ಕಾರ್ಯಗಳಿಗೆ ಹೊಸ ದಿಕ್ಕು ತೋರಿಸಿದೆ.