ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳ ಕಾರು ಚಾಲಕ ಬಾಬು ಆತ್ಮಹ*ತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್‌ನಲ್ಲಿ ಸಂಸದ ಡಾ. ಕೆ. ಸುಧಾಕರ್ ಮತ್ತು ಅವರ ಬೆಂಬಲಿಗರ ಹೆಸರು ಉಲ್ಲೇಖಿಸಿರುವುದು ತೀವ್ರ ಸಂಚಲನ ಮೂಡಿಸಿದೆ. ₹40 ಲಕ್ಷ ವಂಚನೆ ಆರೋಪ ಕೇಳಿಬಂದಿದೆ.

ಚಿಕ್ಕಬಳ್ಳಾಪುರ (ಆ.07): ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳ ಕಾರು ಚಾಲಕ ಬಾಬು (33) ಎಂಬುವವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದು, ಅವರ ಡೆತ್ ನೋಟ್‌ನಲ್ಲಿ ಸಂಸದ ಡಾ. ಕೆ. ಸುಧಾಕರ್ ಮತ್ತು ಅವರ ಬೆಂಬಲಿಗರ ಹೆಸರು ಉಲ್ಲೇಖಿಸಿರುವುದು ಭಾರೀ ಸಂಚಲನ ಮೂಡಿಸಿದೆ.

Add Asianetnews Kannada as a Preferred SourcegooglePreferred

ಡೆತ್ ನೋಟ್‌ನಲ್ಲಿ ಗಂಭೀರ ಆರೋಪ:

ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಬಾಬು, ಆತ್ಮಹ*ತ್ಯೆಗೆ ಕಾರಣರಾದವರ ಹೆಸರುಗಳನ್ನು ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಅದರ ಪ್ರಕಾರ, 'ಸುಧಾಕರ್ ಅವರು ಸಚಿವರಾಗಿದ್ದಾಗ, ಅವರ ಬೆಂಬಲಿಗರಾದ ನಾಗೇಶ್ ಎನ್. ಮತ್ತು ಮಂಜುನಾಥ್ ನನಗೆ ಕಾಯಂ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇದಕ್ಕಾಗಿ ₹40 ಲಕ್ಷ ನೀಡುವಂತೆ ಕೇಳಿದ್ದರು. ನಾನು ನನ್ನ ಬಳಿ ಇದ್ದ ಹಣದ ಜೊತೆಗೆ ಸಾಲ ಮಾಡಿ ₹25 ಲಕ್ಷ ನೀಡಿದ್ದೆ. ಆದರೆ ಅವರು ಕೆಲಸ ಕೊಡಿಸದೆ ವಂಚಿಸಿದ್ದಾರೆ' ಎಂದು ಬಾಬು ಬರೆದಿದ್ದಾರೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಉನ್ನತ ಶಿಕ್ಷಣ ಸಚಿವರಿಂದ ತನಿಖೆಗೆ ಒತ್ತಾಯ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, 'ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಯವರ ಕಾರು ಚಾಲಕ ಬಾಬು ಆತ್ಮಹ*ತ್ಯೆ ಮಾಡಿಕೊಂಡಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಡೆತ್ ನೋಟ್‌ನಲ್ಲಿ ಸಂಸದ ಡಾ. ಕೆ. ಸುಧಾಕರ್ ಮತ್ತು ಅವರ ಬೆಂಬಲಿಗರ ಹೆಸರನ್ನು ಬರೆದಿದ್ದಾರೆ. ಲೋಕಸಭಾ ಸದಸ್ಯರ ಹೆಸರು ಉಲ್ಲೇಖವಾಗಿರುವುದರಿಂದ, ಕಾನೂನಿನ ಪ್ರಕಾರ ಸುದೀರ್ಘ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಯಾರೇ ಆಗಲಿ, ತನಿಖೆ ನಡೆಸಿ ಸತ್ಯ ಹೊರತರಬೇಕು' ಎಂದು ಒತ್ತಾಯಿಸಿದ್ದಾರೆ.

ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಂದಿನ ತನಿಖೆಗಳು ಹೆಚ್ಚು ನಿರ್ಣಾಯಕವಾಗಲಿವೆ.