ಬೆಂಗಳೂರಿನ ಕಾವೇರಿ ನೀರಿನ ಪೈಪ್‌ಲೈನ್ ಕುಸಿದಿದ್ದರಿಂದ, ಬಿ.ಡಬ್ಲ್ಯೂ.ಎಸ್.ಎಸ್.ಬಿ ತುರ್ತು ದುರಸ್ತಿ ಕಾಮಗಾರಿ ಕೈಗೊಂಡಿದೆ. ಇದರ ಪರಿಣಾಮವಾಗಿ, ಸೆಪ್ಟೆಂಬರ್ 19 ಮತ್ತು 20 ರಂದು ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಲು ಜಲಮಂಡಳಿ ಮನವಿ.

ಬೆಂಗಳೂರು (ಸೆ.19): ಬೆಂಗಳೂರು ನಗರದ ನಾಗರಭಾವಿ ಬಿ.ಡಿ.ಎ. ಕಾಂಪ್ಲೆಕ್ಸ್ ಬಳಿ ಇರುವ 600 ಮಿಮೀ ವ್ಯಾಸದ ಪ್ರಮುಖ ಕಾವೇರಿ ನೀರಿನ ಪೈಪ್‌ಲೈನ್ ಕುಸಿದಿರುವ ಹಿನ್ನೆಲೆಯಲ್ಲಿ ತುರ್ತು ಪುನಶ್ಚೇತನ ಕಾಮಗಾರಿಯನ್ನು ಬೆಂಗಳೂರು ನೀರಿನ ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿ.ಡಬ್ಲ್ಯೂ.ಎಸ್.ಎಸ್.ಬಿ) ಕೈಗೊಂಡಿದೆ. ಈ ಕಾಮಗಾರಿಯ ಪರಿಣಾಮವಾಗಿ ಸೆಪ್ಟೆಂಬರ್ 19 ಹಾಗೂ 20ರಂದು ಎರಡು ದಿನಗಳ ಕಾಲ ನಗರದ ಹಲವಾರು ಭಾಗಗಳಿಗೆ ಕಾವೇರಿ ನೀರಿನ ಸರಬರಾಜು ಸ್ಥಗಿತಗೊಳ್ಳಲಿದೆ.

Add Asianetnews Kannada as a Preferred SourcegooglePreferred

ಬಿ.ಡಬ್ಲ್ಯೂ.ಎಸ್.ಎಸ್.ಬಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಬಿ.ಬಿ.ಎಂ.ಪಿ ಕೈಗೊಂಡ ಕಾಮಗಾರಿಯ ಪರಿಣಾಮ ಪೈಪ್‌ಲೈನ್ ಕುಸಿದಿದ್ದು, ತುರ್ತು ದುರಸ್ತಿ ಕಾರ್ಯ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸಿಬ್ಬಂದಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

ನೀರಿನ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:

ಪಶ್ಚಿಮ-2-2 ಉಪವಿಭಾಗ ವ್ಯಾಪ್ತಿ: ನಾಗರಭಾವಿ 1ರಿಂದ 14ನೇ ಹಂತ, ವಿನಾಯಕ ಬಡಾವಣೆ, ಕೊಟ್ಟಿಗೆಪಾಳ್ಯ, ಸಜ್ಜೆಪಾಳ್ಯ, ಮಾಳಗಾಳ, ಸುಮ್ಮನಹಳ್ಳಿ, ನರಸಿಂಹಯ್ಯನ ಪಾಳ್ಯ, ಎಂ.ಪಿ.ಎಂ ಬಡಾವಣೆ, ಐ.ಟಿ.ಐ ಬಡಾವಣೆ, ಮಲ್ಲತಹಳ್ಳಿ, ಗೌರಮ್ಮ ಬಡಾಣೆ, ದೀಪಾ ಕಾಂಪ್ಲೆಕ್ಸ್ ರಸ್ತೆ, ಎನ್.ಜಿ.ಇ.ಎಫ್ ಭಾಗಶಃ ಪ್ರದೇಶಗಳು, ಗಂಗಾಧರಪ್ಪ ಬಡಾವಣೆ, ಈರನಪಾಳ್ಯ, ಪೂರ್ಣಚಂದ್ರ ಬಡಾವಣೆ, ಹೊನ್ನಪ್ಪ ಬಡಾವಣೆ.

ಪಶ್ಚಿಮ-1-2 ಉಪವಿಭಾಗ: ಭೈರವೇಶ್ವರನಗರ, ಕಲ್ಯಾಣನಗರ, ನಾಗರಭಾವಿ ಬಿಡಿಎ ಲೇಔಟ್, ಕೋಕೊನೆಟ್ ಗಾರ್ಡ್‌ನ್, ಗಾರ್ಡ್‌ನ್ ವಿಲಾಸ್, ಶಕ್ತಿ ಗಾರ್ಡ್‌ನ್, ಪಂಚಶೀಲಾನಗರ, ಮೂಡಲಪಾಳ್ಯ, ಸಂಜೀವಿನಿನಗರ, ಹೊಯ್ಸಳನಗರ, ಕಾವೇರಿ ಲೇಔಟ್, ಸುಬ್ಬನ ಗಾರ್ಡ್‌ನ್, ಅನ್ನಪೂರ್ಣೇಶ್ವರಿನಗರ, ಕೆನರಾ ಬ್ಯಾಂಕ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಇದರ ಜೊತೆಗೆ ವಿಜಯನಗರ, ಬನವಾಸಿ ರಸ್ತೆ, ಕೋರಮಂಗಲ, ಗಾಂಧಿನಗರ ಮತ್ತು ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತಲಿನ ಪ್ರದೇಶಗಳಿಗೂ ನೀರು ವ್ಯತ್ಯಯವಾಗಲಿದೆ.

ಸಾರ್ವಜನಿಕರಿಗೆ ಬಿ.ಡಬ್ಲ್ಯೂ.ಎಸ್.ಎಸ್.ಬಿ ಮನವಿ:

ತುರ್ತು ದುರಸ್ತಿ ಕಾರ್ಯದಿಂದ ಉಂಟಾಗುವ ತಾತ್ಕಾಲಿಕ ತೊಂದರೆಯನ್ನು ಮನಗಂಡು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಹಾಗೂ ಅವಶ್ಯಕತೆಗಾಗಿ ಮುಂಚಿತವಾಗಿ ನೀರನ್ನು ಸಂಗ್ರಹಿಸಿಡುವಂತೆ ಬಿ.ಡಬ್ಲ್ಯೂ.ಎಸ್.ಎಸ್.ಬಿ ಮನವಿ ಮಾಡಿದೆ. ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದೆ.