ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಲಾಲ್ ಪ್ರಮಾಣೀಕೃತ ಪದಾರ್ಥಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಹಲಾಲ್ನಿಂದ ಬರುವ ಹಣವನ್ನು ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ.
ವಿಜಯಪುರ: ಹಲಾಲ್ ಪದಾರ್ಥ ಹಾಗೂ ಸೇವೆಗಳನ್ನು ಪ್ರಮಾಣೀಕರಿಸುವ ಸಂಸ್ಥೆಗಳನ್ನು ಹಾಗೂ ಹಲಾಲ್ ನಲ್ಲಿನ ಪದಾರ್ಥಗಳನ್ನು ನಿಷೇಧಗೊಳಿಸಬೇಕೆಂದು ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಹಲಾಲ್ ಹೆಸರಿನಲ್ಲಿ ಹಣ ಸಂಗ್ರಹ
ಹಲಾಲ್ ಹೆಸರಿನಲ್ಲಿ ಸ್ವೀಕರಿಸುವ ಹಣದಿಂದ ಉಗ್ರ ಚಟುವಟಿಕೆಗಳಿಗೆ, ಉಗ್ರರ ಕಾನೂನು ನೆರವಿಗೆ ಹಾಗೂ ರಾಷ್ಟ್ರದಲ್ಲಿ ದೊಂಬಿ, ಅಶಾಂತಿ ಹರಡಿಸಲು ಉಪಯೋಗಿಸಲಾಗುತ್ತಿದೆ. ಆಹಾರ ಹಾಗೂ ಸೇವೆಗಳ ಗುಣಮಟ್ಟವನ್ನು ಪರಿಶೀಲಿಸಲು ಸರ್ಕಾರದ ಸಂಸ್ಥೆಗಳಾದ ಎಪ್.ಎಸ್.ಎಸ್.ಎ.ಎಲ್ ಹಾಗೂ ಐಎಸ್ ಐ, ಎಪಿಇಡಿಎ ಇರುವಾಗ ಹಲಾಲ್ ಪ್ರಮಾಣೀಕರಿಸುವ ಸಂಸ್ಥೆಗಳ ಅವಶ್ಯಕತೆ ಇಲ್ಲ ಹಾಗೂ ಇದು ನಮ್ಮ ಸಂವಿಧಾನದ ಆಶಯಕ್ಕೆ ವಿರೋಧವಾದದ್ದು.
ದೇಶದಾದ್ಯಂತ ಹಲಾಲ್ ಪದಾರ್ಥ ನಿಷೇಧಕ್ಕೆ ಆಗ್ರಹ
ಧರ್ಮದ ಆಧಾರದ ಮೇಲೆ ಪದಾರ್ಥಗಳು ಹಾಗು ಸೇವೆಗಳನ್ನು ಪ್ರಮಾಣೀಕರಿಸುವುದರಿಂದ ಒಂದು ಧರ್ಮಕ್ಕೆ ಏಕಸ್ವಾಮ್ಯತೆ ಉಂಟಾಗುವ ಕಾರಣ ಅದರಿಂದ ಬೇರೆ ಧರ್ಮದ ತಯಾರಕರಿಗೆ ನಷ್ಟವುಂಟಾಗುತ್ತದೆ. ಈಗಾಗಲೇ, ಉತ್ತರ ಪ್ರದೇಶದಲ್ಲಿ ಹಲಾಲ್ ಪದಾರ್ಥಗಳು ಹಾಗೂ ಪ್ರಮಾಣೀಕರಿಸುವ ಏಜನ್ಸಿ ಗಳನ್ನು ನಿಷೇದ ಮಾಡಿದಂತೆ, ದೇಶದಾದ್ಯಂತ ಹಲಾಲ್ ಪದಾರ್ಥ ಹಾಗೂ ಅದನ್ನು ಪ್ರಮಾಣೀಕರಿಸುವ ಏಜೆನ್ಸಿಗೆ ನಿಷೇದ ಹೇರಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
