ದೀಪಾವಳಿ ಹಬ್ಬದ ಪಟಾಕಿ ಸಿಡಿಸುವ ಸಡಗರ, ಸಂಭ್ರಮದ ನಡುವೆ ನಗರದಲ್ಲಿ ದುರ್ಘಟನೆಗಳು ಕೂಡ ವರದಿಯಾಗಿದ್ದು, ಐವರು ಮಕ್ಕಳು ಸೇರಿದಂತೆ 14 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಪಟಾಕಿ ಸಿಡಿಸುವವರಿಗಿಂತ ನೋಡುತ್ತಾ ನಿಂತವರು ಮತ್ತು ರಸ್ತೆ ಬದಿಯಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿರುವವರೇ ಹೆಚ್ಚು ಇದ್ದಾರೆ.

ಬೆಂಗಳೂರು : ದೀಪಾವಳಿ ಹಬ್ಬದ ಪಟಾಕಿ ಸಿಡಿಸುವ ಸಡಗರ, ಸಂಭ್ರಮದ ನಡುವೆ ನಗರದಲ್ಲಿ ದುರ್ಘಟನೆಗಳು ಕೂಡ ವರದಿಯಾಗಿದ್ದು, ಐವರು ಮಕ್ಕಳು ಸೇರಿದಂತೆ 14 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಪಟಾಕಿ ಸಿಡಿಸುವವರಿಗಿಂತ ನೋಡುತ್ತಾ ನಿಂತವರು ಮತ್ತು ರಸ್ತೆ ಬದಿಯಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿರುವವರೇ ಹೆಚ್ಚು ಇದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೆಯೊಂದರಲ್ಲಿ ಪಟಾಕಿ ಹಚ್ಚುವಾಗ ಕಣ್ಣಿಗೆ ಕಿಡಿಗಳು ಸಿಡಿದು 3 ವರ್ಷದ ಬಾಲಕನ ಕಣ್ಣಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ನಾರಾಯಣ ನೇತ್ರಾಲಯದಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಪಟಾಕಿ ಸಿಡಿತದಿಂದ ಎಗರಿ ಬಂದ ಪಟಾಕಿ ಕಣಗಳು 12 ವರ್ಷದ ಬಾಲಕಿಯ ಕಣ್ಣಿಗೆ ಸಿಡಿದಿವೆ. ಪರಿಣಾಮ ಬಾಲಕಿಯ ಕಾರ್ನಿಯಾ ಭಾಗಕ್ಕೆ ಲಘು ಪ್ರಮಾಣದ ಹಾನಿಯಾಗಿದೆ. ಪಟಾಕಿಯ ಕಣಗಳನ್ನು ಹೊರ ತೆಗೆಯಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ನಾರಾಯಣ ಆಸ್ಪತ್ರೆ ತಿಳಿಸಿದೆ.

ಸೋಮವಾರ ಮಧ್ಯಾಹ್ನ 11 ವರ್ಷದ ಬಾಲಕನೊಬ್ಬ ಬಿಜ್ಲಿ ಪಟಾಕಿ ಸಿಡಿಸುವಾಗ ಪಟಾಕಿ ಕಣ್ಣಿಗೆ ಸಿಡಿದು ತೀವ್ರ ಪ್ರಮಾಣದ ಗಾಯಗಳಾಗಿವೆ. ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಕಣ್ಣಿಗೆ ಲಘು ಪ್ರಮಾಣದ ಗಾಯಗಳಾಗಿರುವ 12 ಮತ್ತು 14 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರಿಗೆ ಚಿಕಿತ್ಸೆ ನೀಡಲಾಗಿದೆ. ಮೂವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇನ್ನು ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ ಐವರು ಪಟಾಕಿ ಸಿಡಿತದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.ಪಟಾಕಿ ಸಿಡಿಸುವಾಗ ಜಾಗ್ರತೆ ವಹಿಸಬೇಕು. ಅದರಲ್ಲೂ ಮಕ್ಕಳು ಪಟಾಕಿ ಸಿಡಿಸುವಾಗ ಪಾಲಕರು ಸಮೀಪದಲ್ಲೇ ಇದ್ದು ಎಚ್ಚರಿಕೆ ವಹಿಸಬೇಕು ಎಂದು ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ನರೇನ್‌ ಶೆಟ್ಟಿ ಸಲಹೆ ನೀಡಿದ್ದಾರೆ.