ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾಗಿದ್ದಾರೆ. ಚಿಕಿತ್ಸೆ ಮುಂದುವರೆದಿದ್ದರೂ, ಇಂದು ಸಂಜೆ ಮಹಾಮನೆಯಲ್ಲಿ ಕೊನೆಯುಸಿರೆಳೆದರು. ಕಲ್ಯಾಣ ಕರ್ನಾಟಕದ ಶಿಕ್ಷಣ ಕ್ರಾಂತಿಯ ಹರಿಕಾರರಾಗಿದ್ದರು.
ಕಲಬುರಗಿ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾಗಿದ್ದಾರೆ. ಇಂದು ಸಂಜೆಯಷ್ಟೇ ಆಸ್ಪತ್ರೆಯಿಂದ ಡಿಸ್ವಾರ್ಜ್ ಮಾಡಿಕೊಂಡು ಮಹಾಮನೆಗೆ ಶಿಫ್ಟ್ ಮಾಡಲಾಗಿತ್ತು. ಮನೆಯಲ್ಲಿಯೇ ಆಸ್ಪತ್ರೆಯಲ್ಲಿನ ಸಕಲ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಮೂಡಿಸಿದ್ದ ಡಾ. ಶರಣಬಸವಪ್ಪ ಅಪ್ಪಾ ಅವರು ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾಧಿಪತಿಯಾಗಿದ್ದರು. ಆಸ್ಪತ್ರೆ ಚಿಕಿತ್ಸೆ ಬಿಟ್ಟು ಮನೆಗೆ ಶಿಫ್ಟ್ ಮಾಡಿರುವುದರಿಂದ ಅಪ್ಪಾ ಅವರ ಆರೋಗ್ಯದ ಬಗ್ಗೆ ಭಕ್ತರಲ್ಲಿ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆ ಮಹಾಮನೆ ಆವರಣದಲ್ಲಿಯೇ ಕುಳಿತಿದ್ದರು.
ಡಾ. ಶರಣಬಸವಪ್ಪ ಅಪ್ಪನವರು ನಿಧನಕ್ಕೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಎಕ್ಸ್ ಖಾತೆಯಲ್ಲಿ ಅಪ್ಪಾ ಅವರ ಬಗ್ಗೆ ಬರೆದುಕೊಂಡು ಸಂತಾಪದ ನುಡಿಗಳನ್ನಾಡಿದ್ದಾರೆ. ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಧರ್ಮ ಜಾಗೃತಿ, ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಅವರ ನಿಧನದಿಂದ ಒಬ್ಬ ಶ್ರೇಷ್ಠ ಕಾಯಕಯೋಗಿ ಗುರುಗಳನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆಶೀರ್ವಾದ ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತಾ, ಅವರ ಅಪಾರ ಭಕ್ತರಿಗೆ, ಶಿಷ್ಯರಿಗೆ, ಗುರುಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಕಂಬನಿ ಮಿಡಿದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ
ಶರಣರ ನಾಡಾದ ಕಲಬುರಗಿಯಲ್ಲಿ ಶರಣ ಪರಂಪರೆಯ ಪ್ರಮುಖ ಕೇಂದ್ರವಾಗಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಶರಣಬಸಪ್ಪ ಅಪ್ಪಾ ಅವರು ಲಿಂಗಕ್ಯರಾಗಿರುವುದು ಅತೀವ ನೋವಿನ ವಿಷಯವಾಗಿದೆ. ಕಾಯಕ ಜೀವಿಯಾಗಿ, ಮಹಾ ದಾಸೋಹಿಯಾಗಿ, ಶರಣಪರಂಪರೆಯ ಉದಾತ್ತ ಚಿಂತನೆಗಳ ವಕ್ತಾರರಾಗಿ, ಕಲಬುರಗಿ ಜನತೆಗೆ ತಾತ್ವಿಕ ಮಾರ್ಗದರ್ಶಕರಾಗಿದ್ದ ಶ್ರೀಗಳು ಸಮಸ್ತ ಜನರ ಏಳಿಗೆ ಬಯಸುತ್ತಾ, ಜಿಲ್ಲೆಯ ಸೌಹಾರ್ಧ ಪರಂಪರೆಗೆ ಶಕ್ತಿಯಾಗಿದ್ದರು.
ನಾನು ಅವರಿಂದ ರಾಜಕೀಯ ಮೌಲ್ಯಗಳ, ಬದುಕಿನ ಮೌಲ್ಯಗಳ ಅರಿವನ್ನು ಪಡೆದಿದ್ದೇನೆ, ನನಗೆ ಅವರು ಬಹುದೊಡ್ಡ ಪ್ರೇರಕ ಶಕ್ತಿಯಾಗಿ, ಮಾರ್ಗದರ್ಶಕರಾಗಿ ಮುನ್ನಡೆಸಿದವರಾಗಿದ್ದರು, ಇಂದು ಅವರಿಲ್ಲ ಎಂದು ಕಲ್ಪಿಸಿಕೊಳ್ಳುವುದು ನನಗೆ ಅತ್ಯಂತ ಕಷ್ಟದ ಸನ್ನಿವೇಶ. ಬಂದೆನವಾಜ್ ದರ್ಗಾದ ಡಾ. ಸಯ್ಯದ್ ಶಾ ಖುಸ್ರೋ ಹುಸೇನಿಯವರು ಮತ್ತು ಶರಣಬಸವೇಶ್ವರ ಮಠದ ಪೂಜ್ಯ ಶರಣಬಸಪ್ಪ ಅಪ್ಪಾ ಈ ಇಬ್ಬರೂ ಕಲಬುರಗಿಯ ಭಾವೈಕ್ಯತೆಗೆ ಎರಡು ಕಣ್ಣುಗಳಂತಿದ್ದವರು, ಒಂದು ವರ್ಷದ ಅವಧಿಯಲ್ಲಿ ಈ ಇಬ್ಬರೂ ಮಹನೀಯರನ್ನು ಕಳೆದುಕೊಳ್ಳುವ ಮೂಲಕ ಎರಡು ಕಣ್ಣುಗಳನ್ನು ಕಳೆದುಕೊಂಡು ಕತ್ತಲಲ್ಲಿ ನಿಂತಂತೆ ಭಾಸವಾಗುತ್ತಿದೆ.
ಸದಾ ಸಮಾಜದ ಔನತ್ಯವನ್ನು ಬಯಸುತ್ತಿದ್ದ ಶ್ರೀ ಡಾ. ಶರಣಬಸಪ್ಪಾ ಅಪ್ಪ ಅವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದುದು, ವಿದ್ಯೆ ಎಂಬುದು ಅಭ್ಯಾಸಿಗನ ಕೈವಶ. ಅದು ಕೇವಲ ಉಳ್ಳವರ ಸೊತ್ತಲ್ಲ ಎಂಬ ಆಶಯದೊಂದಿಗೆ ತಮ್ಮ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸರ್ವರಿಗೂ ಜ್ಞಾನದಾಸೋಹ ನೀಡಿದ್ದಾರೆ.
91 ವರ್ಷಗಳ ತುಂಬು ಜೀವನದಲ್ಲಿ ಅವರು ಸಮಾಜಕ್ಕೆ ನೀಡಿದ್ದು ಅಪಾರ. ಕಲಬುರಗಿ ಜಿಲ್ಲೆಯ ಜನತೆಯ ಏಳಿಗೆಯಲ್ಲಿ ಅವರ ಈ ಜ್ಞಾನದಾಸೋಹವು ಪ್ರಮುಖ ಮೆಟ್ಟಿಲಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಮಹಾ ದಾಸೋಹಿ ಶ್ರೀ ಶರಣಬಸಪ್ಪ ಅಪ್ಪಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ನಾನೂ ಸೇರಿದಂತೆ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ, ಎಲ್ಲರಿಗೂ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೊರಕಲಿ ಎಂದು ಆಶಿಸುತ್ತೇನೆ. ಶ್ರೀಗಳು ನೀಡಿದ ಮಾರ್ಗದರ್ಶನವು ನಮ್ಮೆಲ್ಲರಿಗೂ ಸದಾ ಪ್ರೇರಕ ಶಕ್ತಿಯಾಗಿರಲಿದೆ ಎಂದು ಭಾವಿಸಿದ್ದೇನೆ.
