ವಿರೂಪಗೊಳಿಸಿದವರ ಹಿಡಿಯುವ ಬದಲು ಕಾಳಿ ಮೂರ್ತಿಯನ್ನೇ ಪಶಕ್ಕೆ ಪಡೆದ ಬಂಗಾಳ ಪೊಲೀಸ್, ಬಿಜೆಪಿ ಗರಂ ಆಗಿದೆ. ಕಳೆದ ವರ್ಷ ಬೆಂಗಳೂರಲ್ಲಿ ಗಣೇಶ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವ್ಯಾನ್‌ನಲ್ಲಿ ಠಾಣೆಗೆ ಕೊಂಡೊಯ್ದಿದ್ದರು. ಈ ಘಟನೆ ಬಂಗಾಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಕೋಲ್ಕತಾ (ಅ.22) ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರತಿಭಟನೆ ಭುಗಿಲೆದ್ದಿದೆ. ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ಕಾರಣ ಕಾಳಿ ಮೂರ್ತಿಯನ್ನು ಬಂಧಿಸಿದ ಪೊಲೀಸರು ವ್ಯಾನ್‌ಗೆ ತುಂಬಿ ಠಾಣೆಗೆ ಕರೆದೊಯ್ದಿದ್ದಾರೆ. ಕಾಳಿ ಮಾತೆ ಮೂರ್ತಿಯನ್ನು ಧ್ವಂಸಗೊಳಿಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಈ ಘಟನೆ ನಡೆದಿದೆ. ಕಾಳಿ ಮೂರ್ತಿಯನ್ನೇ ಪೊಲೀಸ್ ವ್ಯಾನ್‌ಗೆ ತುಂಬಿ ಕೊಂಡೊಯ್ಯುತ್ತಿರುವ ದೃಶ್ಯವನ್ನು ಪೋಸ್ಟ್ ಮಾಡಿರುವ ಬಿಜೆಪಿ, ಇದಕ್ಕಿಂತ ಅವಮಾನ, ದುಸ್ಥಿತಿ ಇನ್ನೇನಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.

Add Asianetnews Kannada as a Preferred SourcegooglePreferred

ಬಿಜೆಪಿ ವಕ್ತಾರ ಟ್ವೀಟ್ ಮೂಲಕ ಆಕ್ರೋಶ

ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಘಟನೆ ಕುರಿತು ಟ್ವೀಟ್ ಮಾಡಿದ್ದಾರೆ. ದ್ವಂಸಗೊಂಡಿರುವ ಕಾಳಿ ಮಾತೆ ಮೂರ್ತಿಯನ್ನಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಭಕ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಳಿ ಮಾತೆ ಮೂರ್ತಿಯನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಪೊಲೀಸರು ಆರೋಪಿಗಳನ್ನು ಹಿಡಿಯುವ ಬದಲು ಕಾಳಿ ಮಾ ಮೂರ್ತಿಯನ್ನೇ ವಶಕ್ಕೆ ಪಡೆದಿದ್ದಾರೆ. ಶೇಮ್ ಶೇಮ್ ಎಂದು ಅಮಿತ್ ಮಾಳವಿಯಾ ಟ್ವೀಟ್ ಮೂಲಕ ಹೇಳಿದ್ದಾರೆ.

ಆರೋಪಿಗಳ ಕೊಂಡೊಯ್ಯುವ ವಾಹನದಲ್ಲಿ ಕಾಳಿ ಮಾತೆ

ಮಮತಾ ಬ್ಯಾನರ್ಜಿ ಸರ್ಕಾರ ಆರೋಪಿಗಳನ್ನು, ವಶಕ್ಕೆ ಪಡೆದವರನ್ನು ಕೊಂಡೊಯ್ಯುವ ಪೊಲೀಸ್ ವಾಹನದಲ್ಲಿ ಪೂಜ್ಯವಾಗಿ ಆರಾಧಿಸುವ ಕಾಳಿ ಮಾತೆಯನ್ನು ತುಂಬಿಸಿ ಕೊಂಡೊಯ್ದಿದೆ. ಹಿಂದೂಗಳ ನಂಬಿಕೆಗೆ ಘಾಸಿಗೊಳಿಸಿರುವುದು ಅತೀ ದೊಡ್ಡ ಅಪರಾಧ. ಚಂದಾನಗರ ಗ್ರಾಮದಲ್ಲಿ ದೇವಸ್ಥಾನದ ಕಾಳಿ ಮಾತೆ ಮೂರ್ತಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಕಾಳಿ ಮೂರ್ತಿಯ ತಲೆ, ಕೈ ಕಾಲುಗಳನ್ನು ಧ್ವಂಸಗೊಳಿಸಿದ್ದಾರೆ. ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕಿದ್ದ ಪೊಲೀಸರು ದೇವಸ್ಥಾನದ ಬಾಗಿಲು ಲಾಕ್ ಮಾಡಿದ್ದಾರೆ. ಭಕ್ತರ ಪ್ರತಿಭಟನೆ ಬಳಿಕ ದೇವಸ್ಥಾನದ ಬಾಗಿಲು ತೆರಯಲಾಗಿದೆ. ಇತ್ತ ಗ್ರಾಮಸ್ಥರು ಕಾಳಿ ಮೂರ್ತಿ ಧ್ವಂಸದ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ಕಾಳಿ ಮಾತೆ ಮೂರ್ತಿಯನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ಹಿಡಿಯುವ ಬದಲು, ಕಾಳಿ ಮೂರ್ತಿಯನ್ನೇ ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ಗೆ ತುರುಕಿದ್ದಾರೆ. ಸ್ಥಳೀಯರನ್ನು ವಶಕ್ಕೆ ಪಡೆದಿದ್ದಾರೆ. ಈ ನಡೆ ಎಲ್ಲರಿಗೂ ಅಚ್ಚರಿ ತಂದಿದೆ. ಪಶ್ಚಿಮ ಬಂಗಾಳ ಪೊಲೀಸರು, ಸರ್ಕಾರ ಹಿಂದೂ ನಂಬಿಕೆಗೆ ಮಾತ್ರ ಘಾಸಿ ಮಾಡಿಲ್ಲ, ಅವರು ಬಂಗಾಳದ ಆತ್ಮವನ್ನೇ ಘಾಸಿಗೊಳಿಸಿದ್ದಾರೆ ಎಂದು ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

Scroll to load tweet…

ನಾಗಮಂಗಲ ಪ್ರತಿಭಟನೆಯಲ್ಲಿ ಗಣೇಶನ ಪೊಲೀಸ್ ವ್ಯಾನ್‌ಗೆ ತುಂಬಿದ್ದ ಪೊಲೀಸ್

2024ರಲ್ಲಿ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿತ್ತು. ಇದು ಭಾರಿ ಹಿಂಸಾಚಾರ ಹಾಗೂ ಗಲಭೆಗೆ ಕಾರಣವಾಗಿತ್ತು. ಈ ಕಲ್ಲುತೂರಾಟ, ಗಲಭೆ ವಿರೋಧಿಸಿ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಗಣೇಶನ ಮೂರ್ತಿ ಹಿಡಿದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಪೊಲೀರು ಪ್ರತಿಭಟನಕಾರರ ಜೊತೆಗೆ ಗಣೇಶ ಮೂರ್ತಿಯನ್ನು ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ಗೆ ತುಂಬಿದ್ದರು. ಪೊಲೀಸ್ ವ್ಯಾನ್‌ನಲ್ಲಿ ಗಣೇಶನ ಮೂರ್ತಿ ಫೋಟೋ ಭಾರಿ ವೈರಲ್ ಆಗಿತ್ತು. ಇದು ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿತ್ತು.