ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಿ ಮಸೂದೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಪಕ್ಷಗಳು ಇದು ವಿರೋಧಿಗಳ ಹಣಿಯುವ ತಂತ್ರ ಎಂದು ಆರೋಪಿಸಿದೆ. ಆದರೆ ಈ ಮಸೂದೆ ಕುರಿತು ಪ್ರಧಾನಿ ಮೋದಿ ತೆಗೆದುಕೊಂಡ ದೃಢ ನಿರ್ಧಾರ ಕುರಿತು ಸಚಿವ ಕಿರಣ್ ರಿಜಿಜು ಬಹಿರಂಗಪಡಿಸಿದ್ದಾರೆ.

ನವದೆಹಲಿ (ಆ.25) ಜೈಲು ಸೇರಿದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯನ್ನು ಪದಚ್ಯುತಗೊಳಿಸುವ ಹೊಸ ಮಸೂದೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಈ ಮೂಲಕ ವಿರೋಧಿಗಳನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರ ಹೆಣೆದಿದೆ. ಇದು ದ್ವೇಷದ ರಾಜಕಾರಣ ಎಂದು ವಿಪಕ್ಷಗಳು ಆರೋಪಿಸಿದೆ. ಆದರೆ ಈ ಬಿಲ್ ಭಾರತದ ರಾಜಕೀಯವನ್ನು ಸ್ವಚ್ಚಗೊಳಿಸಲು ಅತ್ಯಂತ ಪ್ರಮುಖ ಎಂದು ಬಿಜೆಪಿ ಹೇಳಿದೆ. ವಾದ ವಿವಾದಗಳ ನಡುವೆ ಇದೀಗ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಈ ಬಿಲ್ ಕುರಿತು ಪ್ರಧಾನಿ ಮೋದಿ ನಿಲುವ ಬಹಿರಂಗಪಡಿಸಿದ್ದಾರೆ. ಎಲ್ಲರಿಗೂ ಒಂದೇ ಕಾನೂನು, ಈ ಮಸೂದೆಯಿಂದ ಪ್ರಧಾನಿ ಅಥವಾ ನನಗೆ ವಿನಾಯಿತಿ ಬೇಡ ಎಂದು ಮೋದಿ ಸ್ಪಷ್ಟವಾಗಿ ಹೇಳಿದ್ದರು ಎಂದು ಕಿರಣ್ ರಿಜಿಜು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮಸೂದೆಯಿಂದ ಪ್ರಧಾನಿ ಹೊರಗಿಡುವ ಶಿಪಾರಸು ತಿರಸ್ಕರಿಸಿದ್ದ ಮೋದಿ

ಸಿಎಂ-ಪಿಎಂ ಪದಚ್ಯುತಿ ಮಸೂದೆಯಿಂದ ಪ್ರಧಾನ ಮಂತ್ರಿಗಳನ್ನು ಹೊರಗಿಡುವ ಕ್ಯಾಬಿನೆಟ್ ಶಿಫಾರಸನ್ನು ನರೇಂದ್ರ ಮೋದಿ ತಿರಸ್ಕರಿಸಿದ್ದರು. ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿತ್ತು. ಆದರೆ ಎಲ್ಲರಿಗೂ ಒಂದೇ ಕಾನೂನು, ಈ ಮಸೂದಯಿಂದ ಪ್ರಧಾನಿ ಅಥವಾ ತನಗೆ ಯಾವುದೇ ವಿನಾಯಿತಿ ಬೇಡ ಎಂದು ಮೋದಿ ಸ್ಪಷ್ಟವಾಗಿ ಹೇಳಿದ್ದರು ಎಂದು ಕಿರಿಣ್ ರಿಜಿಜು ಹೇಳಿದ್ದಾರೆ. ಮೋದಿ ಕೂಡ ಈ ದೇಶದ ನಾಗರೀಕ, ಯಾವುದೇ ವಿಶೇಷ ಸವಲತ್ತು ಮೋದಿಗೆ ಬೇಡ ಎಂದು ಸ್ಪಷ್ಟಪಡಿಸಿದ್ದರು ಎಂದಿದ್ದಾರೆ.

ಸಂಸತ್ತಿನಲ್ಲಿ ಮಂಡಿಸಿದ ಮೂರು ಹೊಸ ಮಸೂದೆಗಳ ಪ್ರಕಾರ, ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಗಳು 30 ದಿನಗಳ ಕಾಲ ಸತತವಾಗಿ ಬಂಧನದಲ್ಲಿದ್ದರೆ ತಮ್ಮ ಹುದ್ದೆಯನ್ನು ಕಳೆದುಕೊಳ್ಳಬಹುದು. ಈ ಮಸೂದೆಗೆ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದೆ. ವಿರೋಧದ ಬಳಿಕ, ಜೈಲು ಸೇರಿದ ಪ್ರಧಾನಿ, ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ತೆಗೆದುಹಾಕುವ ಪ್ರಸ್ತಾಪವಿರುವ ಮಸೂದೆಗಳನ್ನು ವಿವರವಾದ ಪರಿಶೀಲನೆಗಾಗಿ ಜಂಟಿ ಸಮಿತಿಗೆ ಉಲ್ಲೇಖಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. . ಹೊಸದಾಗಿ ಮಂಡಿಸಲಾದ ಮಸೂದೆಗಳ ಪ್ರತಿಗಳನ್ನು ಹರಿದು ಗೃಹ ಸಚಿವ ಅಮಿತ್ ಶಾ ಅವರ ಕಡೆಗೆ ಎಸೆಯುವ ಮೂಲಕ ವಿರೋಧ ಪಕ್ಷದ ಸಂಸದರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ್ದರು.

ಲೋಕಸಭೆಯಲ್ಲಿ ಮೂರು ಪ್ರಮುಖ ಮಸೂದೆ ಮಂಡನೆ

ಗೃಹ ಸಚಿವ ಅಮಿತ್ ಶಾ ಕೇಂದ್ರಾಡಳಿತ ಪ್ರದೇಶಗಳು (ತಿದ್ದುಪಡಿ) ಮಸೂದೆ, 2025, ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ (ತಿದ್ದುಪಡಿ) ಮಸೂದೆ, 2025 ಅನ್ನು ಮಂಡಿಸಿದರು. ಈ ಮಸೂದೆಗಳು ಅಂಗೀಕಾರವಾದ ನಂತರ, ಅಂತಹ ಪ್ರಕರಣಗಳಲ್ಲಿ ಹುದ್ದೆಯಿಂದ ಅನರ್ಹತೆಗೆ ಏಕರೂಪದ ನಿಯಮವನ್ನು ನಿಗದಿಪಡಿಸುತ್ತವೆ.

ಈ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷ ಆಡಳಿತವಿರುವ ರಾಜ್ಯಗಳ ನಾಯಕರನ್ನು ಬಂಧಿಸುವ ಮೂಲಕ ಗುರಿಯಾಗಿಸಿಕೊಳ್ಳಬಹುದು ಮತ್ತು ದುರ್ಬಲಗೊಳಿಸಬಹುದು ಎಂದು ವಿಪಕ್ಷಗಳು ಆರೋಪಿಸಿದೆ.ಈ ಕ್ರಮವು ಸದನದಲ್ಲಿ ತಕ್ಷಣ ಗದ್ದಲಕ್ಕೆ ಕಾರಣವಾಯಿತು. ವಿರೋಧ ಪಕ್ಷದ ಸಂಸದರು ಈ ಶಾಸನವನ್ನು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಕರೆದು ತೀವ್ರವಾಗಿ ವಿರೋಧಿಸಿದರು. ಅನೇಕರು ಪ್ರತಿಭಟನೆಯಲ್ಲಿ ಎದ್ದು ನಿಂತು 'ಮಸೂದೆಯನ್ನು ವಾಪಸ್ ಪಡೆಯಿರಿ!' ಎಂದು ಘೋಷಣೆಗಳನ್ನು ಕೂಗಿದರು.