ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಮಂದಿರ ಚಳವಳಿಯನ್ನು ಮಾತ್ರ ಬೆಂಬಲಿಸಿತು. ಹಾಗೆಂದು ಮತ್ತೆ ಇಂಥ ಯಾವುದೇ ಆಂದೋಲನವನ್ನು ನಾವು ಬೆಂಬಲಿಸುವುದಿಲ್ಲ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನವದೆಹಲಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಮಂದಿರ ಚಳವಳಿಯನ್ನು ಮಾತ್ರ ಬೆಂಬಲಿಸಿತು. ಹಾಗೆಂದು ಮತ್ತೆ ಇಂಥ ಯಾವುದೇ ಆಂದೋಲನವನ್ನು ನಾವು ಬೆಂಬಲಿಸುವುದಿಲ್ಲ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಸಂಘಟನೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಲ್ಲಿನ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ 3 ದಿನಗಳ ಕಾರ್ಯಕ್ರಮದ ಅಂತಿಮ ದಿನವಾದ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಭಾಗವತ್, ‘ಕಾಶಿ- ಮಥುರಾ ದೇಗುಲಗಳ ಮರುವಶ ಸೇರಿದಂತೆ ಮತ್ಯಾವುದೇ ಅಭಿಯಾನವನ್ನು ನಾವು ಬೆಂಬಲಿಸುವುದಿಲ್ಲ. ಆದರೆ ನಮ್ಮ ಸ್ವಯಂಸೇವಕರಿಗೆ ಯಾವುದೇ ನಿರ್ಬಂಧ ಇಲ್ಲ. ಕಾರ್ಯಕರ್ತರು ಅಂಥ ಹೋರಾಟಗಳನ್ನು ಬೆಂಬಲಿಸಬಹುದು’ ಎಂದು ಹೇಳಿದರು.
ಆರೆಸ್ಸೆಸ್ ಅಯೋಧ್ಯೆ ರಾಮಮಂದಿರದ ಪುನಃಸ್ಥಾಪನೆಯನ್ನು ಬೆಂಬಲಿಸಿದ್ದಷ್ಟೇ ಅಲ್ಲದೆ, ಅದರ ಮುಖ್ಯಸ್ಥ ಭಾಗವತ್ ದೇವಸ್ಥಾನದ ಪ್ರಾಣಪ್ರತಿಷ್ಠೆಯಲ್ಲೂ ಭಾಗವಹಿಸಿದ್ದರು.
ಮೋದಿಗೆ ನಿವೃತ್ತಿ ಪಡೆಯಲು ಹೇಳಿಲ್ಲ : ಭಾಗವತ್
ನವದೆಹಲಿ: 75 ವರ್ಷಕ್ಕೆ ನಿವೃತ್ತಿಯಾಗಬೇಕು ಎಂದು ನಾನು ಯಾರಿಗೂ ಹೇಳಿಲ್ಲ, ನಾನೂ ನಿವೃತ್ತನಾಗುವುದಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆರ್ಎಸ್ಎಸ್ ಶತಮಾನೋತ್ವದ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಪ್ರಧಾನಿ ಮೋದಿಯವರ ನಿವೃತ್ತಿಯಿಂದ ಹಿಡಿದು ಬಿಜೆಪಿ ಜತೆಗಿನ ನಂಟು ಹಾಗೂ ರಾಷ್ಟ್ರೀಯ ಭಾಷೆಯ ವರೆಗೆ ಹಲವು ವಿಷಯಗಳ ಬಗ್ಗೆ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ.
ನಿವೃತ್ತಿಯಾಗ್ಲಿ ಅಂದಿಲ್ಲ: ‘75 ವರ್ಷದ ಬಳಿಕ ನಿವೃತ್ತಿ ಪಡೆಯಬೇಕು’ ಎಂಬ ಇತ್ತೀಚಿನ ಮಾತುಗಳು ಮೋದಿಯವನ್ನು ಉದ್ದೇಶಿಸಿ ಇರಬಹುದು ಎಂಬ ಚರ್ಚೆಗಳ ಬೆನ್ನಲ್ಲೇ ಆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿರುವ ಭಾಗವತ್, ‘ಅಂದು ನಾನು ಆರ್ಎಸ್ಎಸ್ ನಾಯಕ ಮೋರೋಪಂತ್ ಪಿಂಗಳೆ ಅವರ ಮಾತುಗಳನ್ನು ನೆನಪಿಸಿಕೊಂಡಿದ್ದೆ ಅಷ್ಟೇ. ಆದರೆ ಯಾವತ್ತೂ ನಾನು ನಿವೃತ್ತನಾಗುತ್ತೇನೆ ಅಥವಾ ಬೇರೆಯವರು ಆಗಲಿ ಎಂದಿರಲಿಲ್ಲ. ಸಂಘ ಹೇಳಿದ್ದನ್ನು ನಾವು ಮಾಡುತ್ತೇವೆ’ ಎಂದರು.
