ರಾಷ್ಟ್ರೀಯ ತನಿಖಾ ದಳ (NIA) ದೇಶದ ಆರು ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಲಷ್ಕರ್-ಇ-ತೋಯ್ಬಾ ಸಂಘಟನೆಯೊಂದಿಗಿನ ಸಂಪರ್ಕ ಹೊಂದಿರುವ ಶಂಕಿತ ಭಯೋತ್ಪಾದಕರನ್ನು ಪತ್ತೆ ಹಚ್ಚಿದೆ. ಬೆಂಗಳೂರಿನಲ್ಲೂ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ಭಯೋತ್ಪಾದಕ ಸಂಘಟನೆಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (NIA) ಬೃಹತ್ ಆಪರೇಷನ್ ನಡೆಸಿದ್ದು, ದೇಶದ ಐದು ರಾಜ್ಯಗಳಾದ ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲಿ ಒಟ್ಟು 22 ಕಡೆ ದಾಳಿ ನಡೆದಿದೆ. ಎನ್‌ಐಎ ಅಧಿಕಾರಿಗಳು ಶನಿವಾರ ಬೆಳಗ್ಗಿನ ಜಾವ ದಾಳಿ ನಡೆಸಿದ್ದು, ಬಿಹಾರದಲ್ಲಿ 8, ಜಮ್ಮು-ಕಾಶ್ಮೀರದಲ್ಲಿ 9, ಉತ್ತರಪ್ರದೇಶದಲ್ಲಿ 2, ತಮಿಳುನಾಡಿನಲ್ಲಿ 1, ಮಹಾರಾಷ್ಟ್ರದಲ್ಲಿ 1 ಹಾಗೂ ಕರ್ನಾಟಕದಲ್ಲಿ 1 ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ದಾಳಿಗಳನ್ನು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಪಿತೂರಿ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಶಂಕೆಯ ಮೇರೆಗೆ ನಡೆಸಲಾಗಿದೆ.

Add Asianetnews Kannada as a Preferred SourcegooglePreferred

ಚೆನ್ನೈ ಪ್ರಕರಣ ಸಂಬಂಧ ದಾಳಿ

ಚೆನ್ನೈನಲ್ಲಿ ದಾಖಲಾಗಿದ್ದ ಒಂದು ಪ್ರಕರಣದ ತನಿಖೆಯ ಭಾಗವಾಗಿ ಎನ್‌ಐಎ ಈ ದಾಳಿಗಳನ್ನು ನಡೆಸಿದೆ. ಇದರ ಅಂಗವಾಗಿ, ಬೆಂಗಳೂರು ನಗರದ ಅವಲಹಳ್ಳಿಯ ಚೆಮ್ಮನಸಂದ್ರ ಪ್ರದೇಶದಲ್ಲೂ ದಾಳಿ ನಡೆದಿದೆ.

ಶಂಕಿತರ ಮನೆ ಮೇಲೆ ಪರಿಶೀಲನೆ

ಎನ್‌ಐಎ ಅಧಿಕಾರಿಗಳು ಮುಂಜಾನೆ ನುಗ್ಗಿ ಸ್ಥಳ ಪರಿಶೀಲನೆ ನಡೆಸಿದ್ದು, ನೂರ್ ಸಮೀಮ್ (19) ಹಾಗೂ ಶಕೀಲ್ (20) ಎಂಬ ಇಬ್ಬರು ಶಂಕಿತರ ಮನೆ ಮೇಲೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಂಕಿತರ ಆಧಾರ್ ಕಾರ್ಡ್, ಮೊಬೈಲ್‌ ಫೋನ್ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಉಗ್ರರ ಸಂಪರ್ಕ ಶಂಕೆ

ಅಧಿಕಾರಿಗಳು ವಶಕ್ಕೆ ಪಡೆದ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಆಧರಿಸಿ ಮುಂದಿನ ತನಿಖೆ ಮುಂದುವರೆಸಲಿದ್ದಾರೆ. ಶಂಕಿತರ ಮೇಲೆ ಲಷ್ಕರ್-ಇ-ತೋಯ್ಬಾ ಸಂಘಟನೆಯೊಂದಿಗಿನ ಸಂಪರ್ಕದ ಅನುಮಾನ ವ್ಯಕ್ತವಾಗಿದ್ದು, ಇದನ್ನು ದೃಢೀಕರಿಸಲು ಎನ್‌ಐಎ ಬಲೆ ಬೀಸಿದೆ.

ದೇಶವ್ಯಾಪಿ ಕಣ್ಣೆಚ್ಚರಿಕೆ

ಒಂದೇ ದಿನದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ಈ ದಾಳಿಯಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ಎನ್‌ಐಎ ಮತ್ತೊಮ್ಮೆ ತನ್ನ ಗಟ್ಟಿತನವನ್ನು ತೋರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತನಿಖೆ ಮುಂದುವರೆದಂತೆ ಹೊರಬರುವ ಸಾಧ್ಯತೆ ಇದೆ.