ಭಾರತ ಮತ್ತು ಚೀನಾ ವಿದೇಶಾಂಗ ಸಚಿವರ ಭೇಟಿಯಲ್ಲಿ ಮಹತ್ವದ ನಿರ್ಧಾರ. ಗಡಿ ವ್ಯಾಪಾರ ಪುನರಾರಂಭ, ಹೂಡಿಕೆ ಹೆಚ್ಚಳಕ್ಕೆ ಒಪ್ಪಿಗೆ. ರಸಗೊಬ್ಬರ ಪೂರೈಕೆ ನಿಯಮ ಸರಳೀಕರಣಕ್ಕೆ ಚೀನಾ ಒಪ್ಪಿಗೆ.

ನವದೆಹಲಿ (ಆ.20): ಭಾರತ ಮತ್ತು ಚೀನಾ ಸಂಬಂಧ ಸುಧಾರಿಸುತ್ತಿರುವ ಹೊತ್ತಿನಲ್ಲೇ, ಸೋಮವಾರ ಉಭಯ ದೇಶಗಳ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಹಾಗೂ ವಾಂಗ್ ಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತಕ್ಕೆ ಲಾಭದಾಯಕವಾದ ಕೆಲ ಹೆಜ್ಜೆಗಳನ್ನು ಇಡಲಾಗಿದೆ. ಭಾರತ ಬಳಸುವ ರಸಗೊಬ್ಬರದಲ್ಲಿ ಶೇ.30ರಷ್ಟನ್ನು ರಫ್ತು ಮಾಡುವ ಚೀನಾ, ಅವರ ಪೂರೈಕೆಯ ನಿಯಮಗಳನ್ನು ಸರಳಿಸಲು ಒಪ್ಪಿಕೊಂಡಿದೆ. ಸುರಂಗ ಕೊರೆಯುವ ಯಂತ್ರಗಳ ಬೇಡಿಕೆಗೂ ಸ್ಪಂದಿಸಲು ಒಪ್ಪಿಕೊಂಡಿದೆ. ಇದರಿಂದ ಭಾರತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳಲಿವೆ.

ಬಹುತೇಕ ಎಲೆಕ್ಟ್ರಾನಿಕ್ ಉಪಕರ ಣಗಳಲ್ಲಿ ಬಳಸಲಾಗುವ ಉಪಕರಣ ಗಳ ತಯಾರಿಗೆ ಅಗತ್ಯವಾದ ಈ ಅಪರೂಪದ ಖನಿಜಗಳನ್ನು ಪೂರೈಸಲೂ ಚೀನಾ ಒಪ್ಪಿದೆ.

ಭಾರತ-ಚೀನಾ ಗಡಿ ವ್ಯಾಪಾರ ಪುನಾರಂಭ

ಸಂಬಂಧ ಸುಧಾರಣೆಯ ಭಾಗವಾಗಿ ಉಭಯ ದೇಶಗಳ ನಡುವಿನ ಗಡಿ ವ್ಯಾಪಾರ ಪುನಾರಂಭ, ಹೂಡಿಕೆ ಹೆಚ್ಚಳದಂತ ಮಹತ್ವದ ನಿರ್ಧಾರಗಳನ್ನು ಭಾರತ-ಚೀನಾ ಕೈಗೊಂಡಿವೆ. ನಿರ್ದಿಷ್ಟ ಕ್ರಮಗಳ ಮೂಲಕ ಪರಸ್ಪರ ವ್ಯಾಪಾರ, ಹೂಡಿಕೆ ಹರಿವು ಸುಗಮಗೊಳಿಸಲು ಒಪ್ಪಿಗೆ ನೀಡಲಾಗಿದೆ. 3 ನಿರ್ದಿಷ್ಟ ವ್ಯಾಪಾರ ಕೇಂದ್ರಗಳ ಮೂಲಕ ಗಡಿ ವ್ಯಾಪಾರವನ್ನು ಪುನಃ ತೆರೆಯಲು ಒಪ್ಪಿಗೆ ಪಡೆಯಲಾಗಿದೆ. ಸ್ನೇಹಪರ ಸಮಾಲೋಚನೆ ಮೂಲಕ ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವಂತೆ ಮಾಡಲು ಜಂಟಿ ಕ್ರಮ ಜಾರಿಗೆ ಉಭಯ ದೇಶಗಳು ಒಪ್ಪಿವೆ. ಚೀನಾ ಮತ್ತು ಭಾರತದ ನಡುವೆ ನೇರ ವಿಮಾನ ಸಂಪರ್ಕವನ್ನು ಆದಷ್ಟು ಬೇಗ ಪುನರಾರಂಭಿಸಲು ಉಭಯ ದೇಶಗಳು ನಿರ್ಧಾರ ಮಾಡಿವೆ. ಸಹಕಾರ ಹೆಚ್ಚಿಸಿ, ಸಮಸ್ಯೆ ಪರಿಹರಿಸಲು ವಿವಿಧ ಸಂವಾದ ಕಾರ್ಯಕ್ರಮ ಪುನರಾರಂಭಿಸಲು ಉಭಯ ದೇಶಗಳಿಂದ ಸಮ್ಮತಿ ಸಿಕ್ಕಿದೆ.