ಕರಾವಳಿ ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಭಾರಿ ಮಳೆ, ಇತ್ತ ಜಮ್ಮು ಕಾಶ್ಮೀರ, ಪಂಜಾಬ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ನವದೆಹಲಿ (ಸೆ.03) ಭಾರತದ ಹಲವು ರಾಜ್ಯಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, ಪ್ರವಾಹಗಳಿಂದ ಜನರು ತತ್ತರಿಸಿದ್ದಾರೆ. ಸಾವು ನೋವುಗಳು ಸಂಭವಿಸಿದೆ. ಆದರೆ ಮಳೆ ಆರ್ಭಟ ಕಡಿಮೆಯಾಗುತ್ತಿಲ್ಲ. ಮೇಘಸ್ಫೋಟದ ಪರಿಣಾಮ ಗ್ರಾಮಗಳೇ ಕೊಚ್ಚಿ ಹೋಗುತ್ತಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ ಮತ್ತೊಂದು ಅಲರ್ಟ್ ನೀಡಿದೆ. ಸೆಪ್ಟೆಂಬರ್ ತಿಂಗಳು ಮತ್ತಷ್ಟು ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಕುರಿತು ಎಚ್ಚರಿಕೆ ನೀಡಿದೆ. ಈ ಪೈಕಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪಂಜಾಬ್, ಹಿಮಾಚಲ ಪ್ರದೇಶ, ಹರ್ಯಾಣದ ಕೆಲ ಭಾಗ, ರಾಜಸ್ಥಾನ, ದಕ್ಷಿಣ ಉತ್ತರ ಪ್ರದೇಶ, ಆಗ್ನೇಯ ಮಧ್ಯಪ್ರದೇಶ ಹಾಗೂ ಒಡಿಶಾ ರಾಜ್ಯಗಳಿಗೆ ರೆಡ್ ಅಲರ್ಟ್ ನೀಡಿದೆ. ಇತ್ತ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕರಾವಳಿ ಕರ್ನಾಟಕ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆ
ಭಾರತೀಯ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಇದರ ಜೊತೆಗೆ ಸುತ್ತ ಮುತ್ತಲಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮಹಾರಾಷ್ಟ್ರ, ಉತ್ತರಖಂಡ, ಅಂಡಮಾನ್ ದ್ವೀಪ, ದೆಹಲಿಯಲ್ಲಿ ಭಾರಿ ಮಳೆಯಾಗಲಿದೆ ಎಂದ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಮಳೆಗೆ ಮನೆಯೇ ಬಿದ್ದರೂ ದೃಢವಾಗಿ ನಿಂತ ಫ್ಯಾನ್: ಕೊಚ್ಚಿ ಹೋಗ್ತಿದ್ದ ನಾಯಿಯ ರಕ್ಷಣೆ
ಜಮ್ಮು ಮತ್ತು ಕಾಶ್ಮೀರಕ್ಕೆ ಆತಂಕ
ಜಮ್ಮು ಮತ್ತು ಕಾಶ್ಮೀರದಲ್ಲಿನ ಮೇಘಸ್ಫೋಟ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಪೂಂಚ್, ಮೀರ್ಪುರ್, ರಜೌರಿ, ರಿಯಾಸಿ, ಜಮ್ಮು, ರಂಬನ್, ಉದಮ್ಪುರ, ಸಾಂಬಾ, ಕಥುವಾ, ದೋಡಾ, ಕಿಶ್ತ್ವಾರ್ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ. ಪರ್ವತಶ್ರೇಣಿ ಪ್ರದೇಶಗಳಾಗಿರುವ ಕಾರಣ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಜೊತೆಗೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಲಿದೆ.
ಪಂಜಾಬ್ನಲ್ಲಿ ಕಪುರ್ತಲಾ, ಜಲಂಧನರ್, ನವಾನ್ಶಾರ್, ರೂಪ್ನಗರ್, ಮೊಗಾ, ಲುಧಿಯಾನನ, ಬರ್ನಾಲಾ,ಸಂಗ್ರೂರು ಸೇರಿದಂತೆ ಕೆಲ ಪ್ರದೇಶಗಳು ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಿಮಾಚಲ ಪ್ರದೇಶದ ಮಂಡಿ, ಉನಾ, ಬಿಲಾಸಪುರ, ಸಿರ್ಮೌರ್, ಸೋಲನ್ ಭಾಗದಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.
