ಅರುಣಾಚಲ ಪ್ರದೇಶದ ಗಡಿಯಲ್ಲಿ, ಭಾರತಕ್ಕೆ ಆತಂಕಕಾರಿಯಾದ ವಿಶ್ವದ ಅತಿ ದೊಡ್ಡ ಜಲಾಶಯ ಕಟ್ಟಲು ಚೀನಾ ಸಜ್ಜಾಗಿರುವ ಬೆನ್ನಲ್ಲೇ, ಭಾರತವೂ ನೆರೆಯ ದೇಶಕ್ಕೆ ಸಡ್ಡು ಹೊಡೆಯಲು ಮುಂದಾಗಿದೆ.

ಇಟಾನಗರ : ಅರುಣಾಚಲ ಪ್ರದೇಶದ ಗಡಿಯಲ್ಲಿ, ಭಾರತಕ್ಕೆ ಆತಂಕಕಾರಿಯಾದ ವಿಶ್ವದ ಅತಿ ದೊಡ್ಡ ಜಲಾಶಯ ಕಟ್ಟಲು ಚೀನಾ ಸಜ್ಜಾಗಿರುವ ಬೆನ್ನಲ್ಲೇ, ಭಾರತವೂ ನೆರೆಯ ದೇಶಕ್ಕೆ ಸಡ್ಡು ಹೊಡೆಯಲು ಮುಂದಾಗಿದೆ. ಚೀನಾದ ಅಣೆಕಟ್ಟಿನಿಂದ ಹಠಾತ್ ನೀರು ಬಿಡುಗಡೆಯಾದರೆ ಪ್ರವಾಹವನ್ನು ತಡೆಗಟ್ಟುವ ಸಾಮರ್ಥ್ಯವುಳ್ಳ17069 ಕೋಟಿ ರು.ವೆಚ್ಚದಲ್ಲಿ ಬೃಹತ್‌ ಅಣೆಕಟ್ಟು ನಿರ್ಮಿಸಲು ಭಾರತ ಸರ್ಕಾರ ಆಸಕ್ತರಿಂದ ಬಿಡ್ ಕರೆದಿದೆ.

ಅರುಣಾಚಲ ಪ್ರದೇಶದ ಗಡಿ ಸಮೀಪ ಬ್ರಹ್ಮಪುತ್ರಾ ನದಿಗೆ ಬೃಹತ್‌ ಅಣೆಕಟ್ಟು ನಿರ್ಮಾಣಕ್ಕೆ ಇತ್ತೀಚೆಗೆ ಚೀನಾ ಪ್ರಧಾನಿ ಲೀ ಚಿಯಾಂಗ್‌ ಚಾಲನೆ ನೀಡಿದ್ದರು. ಇದಕ್ಕಾಗಿ ಚೀನಾ ಸುಮಾರು 15 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ. ಒಂದು ವೇಳೆ ಚೀನಾ ಈ ಅಣೆಕಟ್ಟಿನಿಂದ ದೊಡ್ಡ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದರೆ ಭಾರತದಲ್ಲಿ ಪ್ರವಾಹ ಸ್ಥಿತಿ ತಲೆದೋರುವ ಆತಂಕವಿದೆ.

ಚೀನಾದ ಈ ಬೆದರಿಕೆಗೆ ಭಾರತ ಪ್ರತ್ಯುತ್ತರ ನೀಡಲು ಮುಂದಾಗಿದ್ದು, ದಿಬಾಂಗ್ ಬಹೂಪಯೋಗಿ ಯೋಜನೆಯಡಿ ಬೃಹತ್ ಜಲಾಶಯ ನಿರ್ಮಿಸಲು ಬಿಡ್ಡಿಂಗ್‌ ಕರೆದಿದೆ. ‘ದಿಬಾಂಗ್ ಯೋಜನೆಯ 2 ಪ್ರಮುಖ ಉದ್ದೇಶಗಳೆಂದರೆ ವಿದ್ಯುತ್ ಉತ್ಪಾದನೆ ಮತ್ತು ಪ್ರವಾಹ ನಿಯಂತ್ರಣ’ ಎಂದು ಬಿಡ್ ದಾಖಲೆಯಲ್ಲಿ ತಿಳಿಸಲಾಗಿದೆ. 2032ರಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಹಾಗೂ ಬಿಜೆಪಿ ನಾಯಕರು ಜಲಾಶಯ ನಿರ್ಮಾಣವಾಗುತ್ತಿರುವ ಮಿನ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಚೀನಾ ಮೇಲೆ ಶೇ.50-100 ತೆರಿಗೆ : ನ್ಯಾಟೋಗೆ ಟ್ರಂಪ್‌ ಕರೆ

ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಮೇಲೆ ಶೇ.50ರಿಂದ 100ರಷ್ಟು ತೆರಿಗೆ ವಿಧಿಸುವಂತೆ, ರಷ್ಯಾದಿಂದ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ನ್ಯಾಟೋ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನ್ಯಾಟೋ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ಅಮೆರಿಕವು ರಷ್ಯಾ ವಿರುದ್ಧ ನಿರ್ಣಾಯಕ ನಿರ್ಬಂಧ ಹೇರಲು ಸಿದ್ಧವಾಗಿದೆ. ಆದರೆ, ಇದಕ್ಕಾಗಿ ಯುರೋಪಿನ ಸಹಯೋಗಿ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಮತ್ತು ಈ ಸಮನ್ವಯದ ಕ್ರಮದಲ್ಲಿ ಕೈಜೋಡಿಸಬೇಕು. ಉಕ್ರೇನ್‌-ರಷ್ಯಾ ಯುದ್ಧ ಮುಕ್ತಾಯಗೊಳ್ಳುವವರೆಗೆ ಚೀನಾದ ಮೇಲೆ ಭಾರೀ ತೆರಿಗೆ ಹಾಕಬೇಕು ಎಂದು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ ಸೋಷಿಯಲ್‌ನಲ್ಲಿ ಎಲ್ಲಾ ನ್ಯಾಟೋ ದೇಶಗಳು ಹಾಗೂ ವಿಶ್ವವನ್ನುದ್ದೇಶಿಸಿ ಬರೆದುಕೊಂಡಿದ್ದಾರೆ.