ಕೆಮ್ಮು ನಿವಾರಕ ಕೋಲ್ಡ್ರಿಫ್‌ ಸಿರಪ್‌ ಸೇವಿಸಿದ್ದರಿಂದ 14 ಮಕ್ಕಳು ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಲು ಮಧ್ಯಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದಾರೆ. ಅತ್ತ ಇಬ್ಬರು ಔಷಧ ನಿರೀಕ್ಷಕರು ಹಾಗೂ ಆಹಾರ ಮತ್ತು ಔಷಧಿ ಆಡಳಿತದ ಉಪ ನಿರ್ದೇಶಕರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ

ಛಿಂದ್ವಾಡ (ಮ.ಪ್ರ): ಕೆಮ್ಮು ನಿವಾರಕ ಕೋಲ್ಡ್ರಿಫ್‌ ಸಿರಪ್‌ ಸೇವಿಸಿದ್ದರಿಂದ 14 ಮಕ್ಕಳು ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಲು ಮಧ್ಯಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದಾರೆ. ಅತ್ತ ಇಬ್ಬರು ಔಷಧ ನಿರೀಕ್ಷಕರು ಹಾಗೂ ಆಹಾರ ಮತ್ತು ಔಷಧಿ ಆಡಳಿತದ ಉಪ ನಿರ್ದೇಶಕರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ, ರಾಜ್ಯ ಔಷಧ ನಿಯಂತ್ರಕ ದಿನೇಶ್ ಮೌರ್ಯ ಅವರನ್ನು ವರ್ಗಾಯಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರಸಿಯಾದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಜಿತೇಂದ್ರ ಸಿಂಗ್ ಜಾಟ್ ನೇತೃತ್ವದ 12 ಸದಸ್ಯರ ತಂಡ, ತಮಿಳುನಾಡಿನಲ್ಲಿರುವ ಸಿರಪ್‌ ತಯಾರಕ ಕಂಪನಿಗೆ ತೆರಳಿ ತನಿಖೆ ನಡೆಸಲಿದೆ. ಇತ್ತ ಸಿರಪ್‌ನಿಂದಾಗಿ ಸಾವನ್ನಪ್ಪಿದ ಕೊನೆಯ ಬಾಲಕನ ದೇಹವನ್ನು, ಆತನ ಪರಿವಾರದ ಆಗ್ರಹದಂತೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು. ರಾಜ್ಯದಲ್ಲಿ ಕೊಲ್ಡ್ರಿಫ್‌ ಬಳಕೆ ನಿಷೇಧಿಸಿ, ಮೃತರಿಗೆ ಸಿರಪ್‌ ನೀಡಿದ್ದ ವೈದ್ಯ ಪ್ರವೀಣ್‌ ಸೋನಿಯ ಬಂಧನದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ವೈದ್ಯರ ಸಲಹೆ ಇಲ್ಲದೆ ಪುಟ್ಟ ಮಕ್ಕಳಿಗೆ ಔಷಧ : ಕೇರಳ ನಿಷೇಧ

ತಿರುವನಂತಪುರ: ವೈದ್ಯರ ಸಲಹೆಯಿಲ್ಲದೆ 12 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಔಷಧಗಳನ್ನು ಕೊಡುವಂತಿಲ್ಲ ಎಂದು ಕೇರಳ ಆರೋಗ್ಯ ಸಚಿವಾಲಯ ಸೋಮವಾರ ಆದೇಶಿಸಿದೆ.ಕೆಮ್ಮಿನ ಸಿರಪ್‌ ಬಳಕೆಯಿಂದ ಮಕ್ಕಳ ಸಾವಿನ ಬಗೆಗಿನ ಕಳವಳ ಹಿನ್ನೆಲೆ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಇಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಈ ಸಂಬಂಧ ಮಕ್ಕಳಿಗೆ ಕೆಮ್ಮಿನ ಸಿರಪ್‌ ಬಳಕೆ ಬಗ್ಗೆ ಅಧ್ಯಯನಕ್ಕೆ ರಾಜ್ಯ ಸರ್ಕಾರ 3 ತಜ್ಞರ ಸಮಿತಿಯೊಂದನ್ನು ರಚಿಸಿದ್ದು ಶೀಘ್ರ ವರದಿ ಸಲ್ಲಿಸಲು ಸೂಚಿಸಿದೆ. ಈ ಸಮಿತಿ ವರದಿ ಮಕ್ಕಳ ಕೆಮ್ಮಿನ ಸಿರಪ್‌ ಬಳಕೆ ಬಗ್ಗೆ ಹೊಸ ಮಾರ್ಗಸೂಚಿ ರಚಿಸಲು ಸಹಾಯಕವಾಗಲಿದೆ ಎಂದು ಸಚಿವೆ ವೀಣಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋಲ್ಡ್ರಿಫ್‌ ಸಿರಪ್‌ನಿಂದ 16 ಮಕ್ಕಳು ಮೃತಪಟ್ಟು ವಿವಾದವಾಗಿತ್ತು.