- Home
- Karnataka Districts
- ಬೆಂಗಳೂರು ಟ್ರಾಫಿಕ್ ಸಿಗ್ನಲ್ನಲ್ಲಿ ಸೈಡ್ ಕೊಡದ, ಬಿಎಂಟಿಸಿ ಚಾಲಕನ ಮೇಲೆ ಆಟೋ ಡ್ರೈವೈರ್ ಹಲ್ಲೆ!
ಬೆಂಗಳೂರು ಟ್ರಾಫಿಕ್ ಸಿಗ್ನಲ್ನಲ್ಲಿ ಸೈಡ್ ಕೊಡದ, ಬಿಎಂಟಿಸಿ ಚಾಲಕನ ಮೇಲೆ ಆಟೋ ಡ್ರೈವೈರ್ ಹಲ್ಲೆ!
ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್ನಲ್ಲಿ ರೆಡ್ ಸಿಗ್ನಲ್ನಲ್ಲಿ ಬಸ್ ನಿಲ್ಲಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕನೊಬ್ಬ ಬಿಎಂಟಿಸಿ ಬಸ್ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಪೋರೇಷನ್ ಸರ್ಕಲ್ನಲ್ಲಿ ಆಟೋ ಚಾಲಕನ ಅವಾಂತರ
ನಗರದ ಹೃದಯಭಾಗದಲ್ಲಿರುವ ಕಾರ್ಪೋರೇಷನ್ ಸರ್ಕಲ್ನಲ್ಲಿ (GB A Circle) ರೆಡ್ ಸಿಗ್ನಲ್ ಬಿದ್ದ ಕಾರಣ ಬಿಎಂಟಿಸಿ ಬಸ್ ಚಾಲಕ ಬಸ್ಸನ್ನು ನಿಲ್ಲಿಸಿದ್ದಕ್ಕೆ, ಹಿಂಬದಿ ಆಟೋದಲ್ಲಿ ಬರುತ್ತಿದ್ದ ಯುವಕನೊಬ್ಬ ಬಸ್ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಭಾನುವಾರ ಸಂಜೆ ವರದಿಯಾಗಿದೆ.
ರೆಡ್ ಸಿಗ್ನಲ್ ಬಂದಾಗ ನಿಲ್ಲಿಸಿದ್ದಕ್ಕೆ ಆಕ್ರೋ
ಆಟೋದಲ್ಲಿ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಯುವಕ, ಬಿಎಂಟಿಸಿ ಬಸ್ ರೆಡ್ ಸಿಗ್ನಲ್ನಲ್ಲಿ ನಿಂತಿದ್ದರಿಂದ ತನಗೆ ಮುಂದೆ ಹೋಗಲು ಸೈಡ್ ಸಿಗಲಿಲ್ಲ ಎಂದು ಕೆರಳಿದ್ದಾನೆ. ಇಷ್ಟಕ್ಕೆ ಸುಮ್ಮನೆ ಬಿಡದೇ ಆಟೋದಿಂದ ಏಕಾಏಕಿ ಇಳಿದುಬಂದು ಬಾಯಿಗೆ ಬಂದಂತೆ ಬೈದಿದ್ದಾನೆ.
ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
ಡ್ರೈವರ್ ಬಳಿ ಬಂದು ನೀನು ಬಸ್ ಸೈಡ್ ಬಿಟ್ಟಿದ್ದರೆ ನಾನು ಸಿಗ್ನಲ್ ದಾಟಿ ಮುಂದಕ್ಕೆ ಹೋಗುತ್ತಿದ್ದೆ ಎಂದು ವಾಗ್ವಾದಕ್ಕೆ ಇಳಿದ ಯುವಕ, ಜೋರು ಧ್ವನಿಯಲ್ಲಿ ಮಾತನಾಡುತ್ತಾ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯ ತೀವ್ರತೆಯಿಂದಾಗಿ ಚಾಲಕನ ಹಣೆಗೆ ತೀವ್ರ ಗಾಯವಾಗಿದ್ದು, ರಕ್ತ ಸುರಿಯಲು ಆರಂಭಿಸಿದೆ.
ಪ್ರಯಾಣಿಕರಿಂದ ಪ್ರಥಮ ಚಿಕಿತ್ಸೆ:
ಚಾಲಕನಿಗೆ ಹಲ್ಲೆಯಾದ ತಕ್ಷಣ ಬಸ್ನಲ್ಲಿದ್ದ ಮಹಿಳಾ ಪ್ರಯಾಣಿಕರು ನೆರವಿಗೆ ಧಾವಿಸಿದರು. ಸುರಿಯುತ್ತಿದ್ದ ರಕ್ತವನ್ನು ಒರೆಸಿ, ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು. ಸಾರ್ವಜನಿಕ ಸ್ಥಳದಲ್ಲಿ ಇಂತಹ ದುರ್ಘಟನೆ ನಡೆದರೂ, ಆ ಯುವಕನ ವರ್ತನೆ ಮಾತ್ರ ಬದಲಾಗಲಿಲ್ಲ.
ಹಲ್ಲೆ ನಡೆಸಿದ ನಂತರವೂ ಆ ಯುವಕ ರೌಡಿಸಂ ಪ್ರದರ್ಶಿಸಿದ್ದಾನೆ. ಹೊಡೆದಿದ್ದು ನಾನೇ, ಏನು ಮಾಡಿಕೊಳ್ಳುತ್ತೀರಾ? ಎಂದು ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಅವಾಜ್ ಹಾಕಿ ಮತ್ತಷ್ಟು ಆಕ್ರೋಶಕ್ಕೆ ಕಾರಣನಾಗಿದ್ದಾನೆ.
ಹಲಸೂರು ಗೇಟ್ ಪೊಲೀಸ್ ಠಾಣೆ ಪಕ್ಕದಲ್ಲಿಯೇ ನಡೆದ ಘಟನೆ:
ಈ ಘಟನೆ ನಡೆದ ಸ್ಥಳದ ಸಮೀಪವೇ ಹಲಸೂರು ಗೇಟ್ ಸಂಚಾರ ಪೊಲೀಸರು ಇದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿ ತಹಬಂದಿಗೆ ತಂದರು. ಹಲ್ಲೆ ಮಾಡಿದ ಯುವಕ, ಆತನ ಕುಟುಂಬ ಮತ್ತು ಆಟೋವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಗಳಿಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಸಾರ್ವಜನಿಕ ಸೇವಾ ವಾಹನದ ಚಾಲಕನ ಮೇಲೆ ಕರ್ತವ್ಯ ನಿರ್ವಹಿಸುವ ವೇಳೆ ಹಲ್ಲೆ ನಡೆದಿರುವ ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಯುವಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರಯಾಣಿಕರು ಮತ್ತು ಪ್ರತ್ಯಕ್ಷದರ್ಶಿಗಳು ಒತ್ತಾಯಿಸಿದ್ದಾರೆ.