- Home
- Karnataka Districts
- ಆಶೀಕ್ ಜೊತೆ ಪರಾರಿಯಾಗಿರುವ ಶಂಕೆ; ಮಹಿಳೆ ಗಂಡನಿಂದ ದೂರು, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಆಶೀಕ್ ಜೊತೆ ಪರಾರಿಯಾಗಿರುವ ಶಂಕೆ; ಮಹಿಳೆ ಗಂಡನಿಂದ ದೂರು, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಚಿಕ್ಕಮಗಳೂರಿನಲ್ಲಿ 22 ವರ್ಷದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಪತಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು.

ಚಿಕ್ಕಮಗಳೂರು: 22 ವರ್ಷದ ಮಹಿಳೆ ಸಂಧ್ಯಾ (ಹೆಸರು ಬದಲಾಯಿಸಲಾಗಿದೆ) ಎಂಬವರು ಆಶೀಕ್ ಎಂಬಾತನ ಜೊತೆ ಹೋಗಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಹಿಳೆಯ ಗಂಡ ಗಣೇಶ್ (ಹೆಸರು ಬದಲಾಯಿಸಲಾಗಿದೆ) ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಎರಡು ವರ್ಷದ ಹಿಂದೆ 22 ವರ್ಷದ ಸಂಧ್ಯಾ ಮದುವೆಯಾಗಿತ್ತು. ಇದೀಗ ದಿಢೀರ್ ಅಂತಾ ಸಂಧ್ಯಾ ಮನೆಯಿಂದ ನಾಪತ್ತೆಯಾಗಿದ್ದಾರೆ. ಸಂಧ್ಯಾ ಪತಿ ಗಣೇಶ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಬಣಕಲ್ ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆಯ ಮುಖಂಡರು, ಕಾರ್ಯಕರ್ತರು ಯುವಕ ಆಶೀಕ್ ವಿರುದ್ಧ ಆಕ್ರೋಶ ಹೊರಹಾಕಿದರು. ಪೊಲೀಸರು ಮುಂಜಾಗ್ರತ ಕ್ರಮವಾಗಿ ಗೇಟ್ ಹಾಕಿದ್ದರಿಂದ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರತಿಭಟನಾನಿರತರು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯ್ತು. ಇದರಿಂದ ವಾಹನ ಸಂಚಾರದಲ್ಲಿ ತೀವ್ರ ಅಸ್ರವ್ಯಸ್ಥ ಉಂಟಾಗಿ ಸವಾರರು ಪರದಾಡುವಂತಾಯ್ತು. ಹಿಂದೂ ಸಂಘಟನೆ ಮತ್ತು ಗ್ರಾಮಸ್ಥರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟರು. ಪೊಲೀಸರು ಸೂಕ್ತ ಕ್ರಮದ ಭರವಸೆ ನೀಡಿದ ಹಿನ್ನೆಲೆ ರಸ್ತೆ ತಡೆಯನ್ನು ಹಿಂಪಡೆದುಕೊಂಡರು
ಮಳೆ ನಡುವೆಯೂ ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದರು. ಛತ್ರಿ ಹಿಡಿದುಕೊಂಡೇ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.