ಶಿವನಿಗೆ ಸೋಮವಾರ ಶ್ರೇಷ್ಠ, ಇಷ್ಟಾರ್ಥ ಸಿದ್ದಿಗೆ ಹೇಗೆ ಪೂಜಿಸಬೇಕು?
ಶಿವ ಆತ್ಮ ವಿಶ್ವಾಸದ ಸಂಕೇತ. ಶಕ್ತಿಯ ಪ್ರತೀಕ. ಬೇಡಿದ್ದನ್ನು ಈಡೇರಿಸುವ ದೈವ. ಈತನಿಗೆ ಸೋಮವಾರ ಇಷ್ಟ. ಈ ದಿನ ಈಶ್ವರನನ್ನು ಪೂಜಿಸಿದಲ್ಲಿ ಮನದ ಬಯಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಿಗೆ. ಅಪಾರ ಭಕ್ತರನ್ನು ಹೊಂದಿರುವ ಶಿವನನ್ನು ಮಹಾದೇವನೆಂದೂ ಕರೆಯುತ್ತಾರೆ. ಜಗತ್ತಿಗೇ ತಂದೆ ಎಂದು ಪೂಜಿಸಲ್ಪಡುವ ಈ ಶಿವನನ್ನು ಹೇಗೆ ಆರಾಧಿಸಿದರೆ ನಮ್ಮ ಕನಸುಗಳು ನನಸಾಗುತ್ತವೆ?
ಶಿವನನ್ನು ಆರಾಧಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಅಲ್ಲದೇ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಸುಲಭ. ದುಃಖಗಳನ್ನು ದೂರ ಮಾಡುತ್ತಾನೆ ಈ ಮಹಾದೇವ.
ಶಿವನಿಗೆ ಸೋಮವಾರ ಪ್ರೀತಿ ಪಾತ್ರವಾದ ವಾರವಾಗಿದ್ದು, ಈ ದಿನ ಇವನನ್ನು ಆರಾಧಿಸಿದಲ್ಲಿ, ಕನಸುಗಳು ನನಸಾಗುತ್ತವೆ.
ಸೂಕ್ತ ರೀತಿಯಲ್ಲಿ ಶಿವನನ್ನು ಆರಾಧಿಸಿದಲ್ಲಿ ಒಳ್ಳೆಯ ಬಾಳ ಸಂಗಾತಿ ಸಿಗುವುದಲ್ಲದೇ, ಇಷ್ಟವಾಗುವ ಉದ್ಯೋಗವೂ ಪ್ರಾಪ್ತಿಯಾಗುತ್ತದೆ.
ಪ್ರತೀ ಸೋಮವಾರ ಭಕ್ತರು ಸ್ವಚ್ಛ ಮನಸ್ಸು ಹಾಗೂ ದೇಹದೊಂದಿಗೆ ಶಿವನ ದೇವಾಲಯಕ್ಕೆ ಭೇಟಿ ನೀಡಿ, ಶಾಂತ ಮನಸ್ಸಿನಿಂದ ಶಿವನನ್ನು ಪ್ರಾರ್ಥಿಸಬೇಕು.
ಸ್ನಾನದ ನಂತರ ಶಿವನಿಗೆ ಹಾಲು ಹಾಗೂ ಜೇನುತುಪ್ಪದ ನೇವೈದ್ಯ ಸಲ್ಲಿಸಬೇಕು. ಹೀಗೆ ಮಾಡಿದಲ್ಲಿ ಜೀವನ ನಿರ್ವಹಣೆ, ಉದ್ಯೋಗ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಭಸ್ಮ ಹಾಗೂ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ಶ್ರೇಷ್ಠ. ಅಲ್ಲದೇ ಗಂಧವನ್ನೂ ದೇವರಿಗೆ ಅರ್ಪಿಸಬೇಕು. ಗಂಧ ತಂಪು. ಇದನ್ನು ಶಿವನಿಗೆ ಅರ್ಪಿಸುವುದರಿಂದ ಮನಸ್ಸು ಶಾಂತವಾಗಿ, ಜೀವನದಲ್ಲಿ ಸುಖ ಲಭಿಸುತ್ತದೆ.
ಭಯವೆನಿಸಿದರೆ, ಬೇಸರವೆನಿಸಿದರೆ ಸದಾ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತಿರಬೇಕು. ಇದು ಧೀ ಶಕ್ತಿಯನ್ನು ಹೆಚ್ಚಿಸುತ್ತದೆ.
ಪೂಜೆಯ ಕಡೆಗೆ ಶಿವನಿಗೆ ಫಲ, ಪುಷ್ಫವನ್ನು ಅರ್ಪಿಸಿ, ಆರತಿ ಎತ್ತಬೇಕು.
ಅಪಾರ ನಂಬಿಕೆ ಹಾಗೂ ಪರಿಶುದ್ಧ ಹೃದಯದಿಂದ ದೇವನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಅನುಮಾನವೇ ಇಲ್ಲ.
ಅರ್ಚಕರು ಪ್ರಸಾದದ ರೂಪದಲ್ಲಿ ನೀಡುವ ಚರಣಾಮೃತವನ್ನು ಸೇವಿಸಬೇಕು.
ಒಟ್ಟಿನಲ್ಲಿ ಮಹಾದೇವ ಮನಸ್ಸನ್ನು ನಿಯಂತ್ರಿಸುವ ದೇವ. ಸುಖ, ಸಮೃದ್ಧಿ ಜೊತೆಗೆ ಮನಸ್ಸು ನೆಮ್ಮದಿಯಾಗಿರುವಂತೆ ನೋಡಿಕೊಳ್ಳುತ್ತಾನೆ.