ದೃಷ್ಟಿದೋಷ ಲೆಕ್ಕಿಸದೆ SSLCಯಲ್ಲಿ 592 ಅಂಕ ಗಳಿಸಿದ ಕೌಶಿಕ್
ಚಿಕ್ಕಬಳ್ಳಾಪುರದ ಪೆರೇಸಂದ್ರದ ಕೌಶಿಕ್ ರೆಡ್ಡಿ, ದೃಷ್ಟಿದೋಷವಿದ್ದರೂ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 592/625 ಅಂಕ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸಂಸದ ಸುಧಾಕರ್ ಅವರ ಸಾಧನೆಯನ್ನು ಶ್ಲಾಘಿಸಿ, ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಮನೋಬಲ, ಆತ್ಮವಿಶ್ವಾಸ, ದೃಢವಾದ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಚಿಕ್ಕಬಳ್ಳಾಪುರದ ಪೆರೇಸಂದ್ರದ ಸಾಧಕ ಕೌಶಿಕ್ ರೆಡ್ಡಿ ಸಾಧನೆಯೇ ಸಾಕ್ಷಿ.
ಕೌಶಿಕ್ ಗೆ ಬಾಲ್ಯದಿಂದಲೇ ದೃಷ್ಟಿದೋಷವಿದ್ದರೂ ಅದನ್ನು ಲೆಕ್ಕಿಸದೆ ಕಷ್ಟಪಟ್ಟು ಓದಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 592/625 ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಇಂದು ಪೆರೇಸಂದ್ರದಲ್ಲಿ ಕೌಶಿಕ್ ಅವನ ತಂದೆಯೊಂದಿಗೆ ಬಂದು ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡಾಗ ಒಂದು ಕ್ಷಣ ಕಣ್ಣಿನಲ್ಲಿ ನೀರು ತುಂಬಿಕೊಂಡು ಬಂದರೂ ಮರುಕ್ಷಣ ಹೆಮ್ಮೆಯಾಯಿಯು, ಸಂತೋಷವಾಯಿತು.
ಮನಸ್ಸಿನ ಸಂಕಲ್ಪದ ಮುಂದೆ ದೇಹದ ಯಾವ ನ್ಯೂನತೆಯೂ ದೊಡ್ಡದಲ್ಲ ಎನ್ನುವುದಕ್ಕೆ ಕೌಶಿಕ್ ಮತ್ತು ಅವನ ಪೋಷಕರ ಛಲವೇ ಎಲ್ಲರಿಗೂ ಮಾದರಿ. ಈ ಯುವಕ ದೃಷ್ಟಿ ದೋಷವಿದ್ದರೂ ಸಾಧನೆಗೆ ಮಾತ್ರ ತಾನೇನೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ ಎಂದು ಸಂಸದ ಸುಧಾಕರ್ ಶ್ಲಾಘಿಸಿದ್ದಾರೆ.
ಅಭಿನಂದನೆಗಳು ಕೌಶಿಕ್, ನಿನ್ನ ಭವಿಷ್ಯ ಉಜ್ವಲವಾಗಲಿ, ನಿನ್ನ ಹೆತ್ತವರಿಗೆ, ಹುಟ್ಟೂರಿಗೆ ಇನ್ನಷ್ಟು ಒಳ್ಳೆಯ ಹೆಸರು ತರಲು ದೇವರು ನಿನಗೆ ಶಕ್ತಿ ಕೊಡಲಿ. All the best my boy. You have made us proud! ಎಂದು ಸಂಸದ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.