ಟಿಕ್ ಟಾಕ್ ಬ್ಯಾನ್; ನುಸ್ರತ್ ಕೊಟ್ಟ ಪ್ರತಿಕ್ರಿಯೆ ಅದ್ಭುತ!
ಕೋಲ್ಕತ್ತಾ(ಜು. 01) ಚೀನಾ ಮೂಲದ ಟಿಕ್ಟಾಕ್ ಬ್ಯಾನ್ ಮಾಡಿರುವುದಕ್ಕೆ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಪ್ರತಿಕ್ರಿಯೆ ನೀಡಿದ್ದಾರೆ. 'ಇದು ಕೇಂದ್ರ ಸರ್ಕಾರದ ಗಡಿಬಿಡಿಯ ನಿರ್ಧಾರ' ಎಂದು ವಿಶ್ಲೇಷಣೆ ಮಾಡಿದ್ದಾರೆ.
ಇಸ್ಕಾನ್ ಆಡಳಿತ ಮಂಡಳಿ ಆಯೋಜಿಸಿದ್ದ ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ರಥ ಯಾತ್ರೆ ಸಂದರ್ಭ ನುಸ್ರತ್ ಮಾತನಾಡಿದರು.
ಟಿಕ್ ಟಾಕ್ ನಿಷೇಧದಿಂದ ಅದನ್ನೇ ನಂಬಿಕೊಂಡು ಕೆಲಸ ಮಾಡಿಕೊಂಡು ಬಂದಿದ್ದವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.
ನಿರುದ್ಯೋಗಿಗಳಾಗುತ್ತಿರುವ ಜನರ ಕಥೆಯೇನು? ನೋಟು ಬ್ಯಾನ್ನಲ್ಲಿ ತೊಂದರೆಗೆ ಒಳಗಾದ ರೀತಿ ಜನರು ಬಳಲುತ್ತಾರೆ ಎಂಬುದು ನುಸ್ರತ್ ವಿಶ್ಲೇಷಣೆ.
ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ನಿಷೇಧ ಮಾಡಿರುವ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಉದಯೋಗ ಕಳೆದುಕೊಂಡವರ ಪಾಡೇನು ಎಂದು ಪ್ರಶ್ನೆ ಮಾಡಿದ್ದಾರೆ.
ಚೀನಾ ಅಪ್ಲಿಕೇಶನ್ ಬ್ಯಾನ್ ಮಾಡಿರುವುದು ಒಂದು ಕಣ್ಣೋರೆಸುವ ತಂತ್ರ ಎಂದಿದ್ದಾರೆ.
ಅಭಿಮಾನಿಗಳೊಂದಿಗೆ ನೇರ ಸಂಪರ್ಕ ಸಾಧಿಸಲು ಟಿಕ್ ಟಾಕ್ ಒಂದು ವೇದಿಕೆಯಾಗಿತ್ತು.
ನರೇಂದ್ರ ಮೋದಿ ಮತ್ತು ಅಮಿತ್ ಶಾ ತಮ್ಮನ್ನು ನಂಬಿದವರು ಹಸಿವಿನಿಂದ ಇರಬೇಕು, ಅವರಿಗೆ ನಾವೇ ಆಹಾರ ನೀಡುತ್ತಿದ್ದೇವೆ ಎಂದು ಹೇಳಬೇಕು ಎಂಬ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ನುಸ್ರತ್ ಆರೋಪಿಸಿದ್ದಾರೆ.
ನಟಿಯಾಗಿದ್ದ ನುಸ್ರತ್ ಕಳೆದ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು .