- Home
- Karnataka Districts
- Bengaluru Urban
- 11 ವರ್ಷದ ಶಬರೀಶ್ನನ್ನ ಬಲಿ ಪಡೆದ BMTC; ಸ್ಕೂಟರ್ ಡಿಕ್ಕಿಯಾಗಿ ಬಾಲಕನ ಮೇಲೆ ಹರಿದ ಬಸ್
11 ವರ್ಷದ ಶಬರೀಶ್ನನ್ನ ಬಲಿ ಪಡೆದ BMTC; ಸ್ಕೂಟರ್ ಡಿಕ್ಕಿಯಾಗಿ ಬಾಲಕನ ಮೇಲೆ ಹರಿದ ಬಸ್
ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ದ್ವಿಚಕ್ರ ವಾಹನದಲ್ಲಿ ಪೋಷಕರೊಂದಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಬಳಿ ಬಿಎಂಟಿಸಿ ಬಸ್ 11 ವರ್ಷದ ಬಾಲಕನನ್ನು ಬಲಿ ಪಡೆದುಕೊಂಡಿದೆ. ಮೃತ ಬಾಲಕನನ್ನು ಶಬರೀಶ್ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಸ್ಥಳೀಯರು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಶಬರೀಶ್ ದ್ವಿಚಕ್ರ ವಾಹನದಲ್ಲಿ ಪೋಷಕರೊಂದಿಗೆ ತೆರಳುತ್ತಿದ್ದನು. ಈ ವೇಳೆ ಸ್ಕೂಟಿ ಮತ್ತು ಬಿಎಂಟಿಸಿ ಬಸ್ KA57 F6456 ನಡುವೆ ಅಪಘಾತ ಸಂಭವಿಸಿದೆ. ಗುರುವಾರವಷ್ಟೇ ಶಾಲೆಗೆ ತೆರಳುತ್ತಿದ್ದ ಮಗುವನ್ನು ಬಿಎಂಟಿಸಿ ಬಸ್ ಬಲಿ ಪಡೆದುಕೊಂಡಿತ್ತು. ಬಿಎಂಟಿಸಿ ಚಾಲಕ & ನಿರ್ವಾಹಕನನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯ ಮುಂದೆ ಅಪಾರ ಸಂಖ್ಯೆಯಲ್ಲಿ ಸೇರಿರುವ ಜನರು BMTC ವಿರುದ್ಧ ಆಕ್ರೋಶ ಹೊರ ಹಾಕಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಶಬರೀಶ್ ತಂದೆ ಒಂದು ವರ್ಷದ ಹಿಂದೆಯೇ ನಿಧನರಾಗಿದ್ದರು. ಈ ಹಿನ್ನೆಲೆ ಶಬರೀಶ್ ಚಿಕ್ಕಪ್ಪನ ಮನೆಯಲ್ಲಿಯೇ ವಾಸವಾಗಿದ್ದನು.
ಶಬರೀಶ್ ಚಿಕ್ಕಪ್ಪ ದಿಲೀಪ್ ಕುಮಾರ್ ದೇವಸ್ಥಾನವೊಂದರ ಅರ್ಚಕರಾಗಿದ್ದು, ಜೆಎಂ ಪಾಳ್ಯದ ನಿವಾಸಿಯಾಗಿದ್ದಾರೆ. ಇಂದು ದಿಲೀಪ್ ಕುಟುಂಬ ಸಮೇತ ಕೆ.ಆರ್.ಮಾರ್ಕೆಟ್ಗೆ ಆಗಮಿಸಿದ್ದರು. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಸ್ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟಿಯಿಂದ ಬಲಕ್ಕೆ ಶಬರೀಶ್ ಕೆಳಗೆ ಬಿದ್ದಿದ್ದಾನೆ. ಬಿಎಂಟಿಸಿ ಬಸ್ ನಿಂದ ಒಂದೇ ತಿಂಗಳಲ್ಲಿ ಹಲವು ಅಪಘಾತ ಆಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ. ಹಲಸೂರು ಗೇಟ್ ಸಂಚಾರಿ ಪೋಲಿಸ್ ಠಾಣೆ ಮುಂಭಾಗ ಸೇರಿರುವ ಜನರು ನ್ಯಾಯ ಬೇಕೆಂದು ಆಗ್ರಹಿಸುತ್ತಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿಕೆ
ಮಗು ಅಪ್ಪ - ಅಮ್ಮಾ ಬೈಕ್ ನಲ್ಲಿ ಹೋಗುತ್ತಿದ್ದರು. ಬೈಕ್ ನಿಂದ ಬಿದ್ದ ಮೇಲೆ ಮಗು ಮೇಲೆಯೇ ಬಸ್ ಹತ್ತಿಸಿದ್ದಾರೆ. ನಾವು ಚಾಮರಾಜಪೇಟೆಯಿಂದ ಬರುತ್ತಿದ್ದಾಗ ಈ ಅಪಘಾತ ನೋಡಿದೇವು. ಅಪಘಾತ ಆದ ಮೇಲೆ ಚಾಲಕ ಎಸ್ಕೇಪ್ ಆಗಲು ಪ್ರಯತ್ನಿಸುತ್ತಿದ್ದನು. ಸ್ಥಳೀಯರ ಸಹಾಯದೊಂದಿಗೆ ಚಾಲಕನನ್ನು ಹಿಡಿಯಲಾಯ್ತು ನಂತರ ಪೊಲೀಸರ ವಶಕ್ಕೆ ನೀಡಲಾಯ್ತು. ನಾವು ಮೃತ ಮಗುವಿನ ಸಂಬಂಧಿಯೂ ಅಲ್ಲ. ಮಗುವಿನ ಸಾವಿಗೆ ನ್ಯಾಯ ಬೇಕೆಂದು ಪ್ರತ್ಯಕ್ಷದರ್ಶಿ ಕಾವ್ಯಾ ಹೇಳಿದ್ದಾರೆ.