ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿಗಳು ಹೊರಬರುತ್ತಿದೆ. ಈ ಪೈಕಿ ಅನನ್ಯಾ ಭಟ್ ನಾಪತ್ತೆ ಪ್ರಕರಣ ಭಾರಿ ಸದ್ದು ಮಾಡಿದೆ. ಅನನ್ಯಾ ಭಟ್ ಯಾರು, ಆಕೆಯ ಫೋಟೋ ಎಲ್ಲಿದೆ ಎಂಬ ಪ್ರಶ್ನೆ ಪ್ರಮುಖವಾಗಿ ಕೇಳಿಬಂದಿತ್ತು. ಇದೀಗ ಸುಜಾತ್ ಭಟ್, ಮಗಳು ಅನನ್ಯಾ ಭಟ್ ಫೋಟೋ ಬಹಿರಂಗಪಡಿಸಿದ್ದಾರೆ.
ಮಂಗಳೂರು (ಆ.16) ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆ ತೀವ್ರಗೊಂಡಿದೆ. ಒಂದೆಡೆ ಬುರುಡೆಗಳ ಉತ್ಖನನ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಸುಜಾತ್ ಭಟ್ ನೀಡಿದ್ದ ಮಗಳು ಅನನ್ಯಾ ಭಟ್ ನಾಪತ್ತೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸುಜಾತ ಭಟ್ ಮಾಡಿದ್ದ ಆರೋಪ,ದೂರುಗೆ ಸಂಬಂಧಿಸಿ ಪ್ರಮುಖಾಗಿ ಅನನ್ಯಾ ಭಟ್ ಫೋಟೋ ಎಲ್ಲಿ ಅನ್ನೋ ಪ್ರಶ್ನೆ ಎದ್ದಿತ್ತು. ಇದೀಗ ತಾಯಿ ಸುಜಾತ್ ಭಟ್, ಕಾಣೆಯಾಗಿರುವ ತನ್ನ ಮಗಳು ಸುಜಾತ್ ಭಟ್ ಫೋಟೋ ಬಹಿರಂಗಪಡಿಸಿದ್ದಾರೆ.
ಪಾಸ್ಪೋರ್ಟ್ ಸೈಜ್ ಫೋಟೋ ಬಹಿರಂಗಪಡಿಸಿದ ಸುಜಾತ್ ಭಟ್
ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಅನನ್ಯಾ ಭಟ್ ಫೋಟೋ ತೋರಿಸಲು ಆಗ್ರಹ, ಆರೋಪಗಳು ಕೇಳಿಬರುತ್ತಿದೆ. ಹೀಗಾಗಿ ತಮ್ಮ ಮಗಳ ಫೋಟೋ ಬಹಿರಂಗಪಡಿಸಿ ಎಂದು ಸುಜಾತ್ ಭಟ್ ಪರ ವಕೀಲ ಮಂಜುನಾಥ್ ಕೇಳಿಕೊಂಡಿದ್ದಾರೆ. ಈ ವೇಳೆ ತಮ್ಮ ಮಗಳ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಸುಜಾತ್ ಭಟ್ ಬಹಿರಂಗಪಡಿಸಿದ್ದಾರೆ.
ಅನನ್ಯಾ ಭಟ್ ಪ್ರಕರಣ
ಧರ್ಮಸ್ಥಳಧಲ್ಲಿ ಮುಸುಕುದಾರಿ ದೂರುದಾರ ನೂರಾರು ಶವ ಹೂತಿಟ್ಟಿದ್ದೇನೆ ಎಂದು ದೂರು ನೀಡಿದ ಬಳಿಕ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದೇ ವೇಳೆ ಧರ್ಮಸ್ಥಳಕ್ಕೆ ಆಗಮಿಸಿದ ಸುಜಾತ್ ಭಟ್ ತನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ. ಮುಸುಕುದಾರಿ ದೂರುದಾರ ತೋರಿಸುವ ಶವಗಳಲ್ಲಿ ತನ್ನ ಮಗಳ ಅಸ್ಥಿಪಂಜವಿದ್ದರೆ ತನಗೆ ನೀಡಬೇಕು, ಹಿಂದೂ ಸಂಪ್ರದಾಯ ಪ್ರಕಾರ ವಿಧಿ ವಿಧಾನ ನೆರವೇರಿಸಬೇಕು ಎಂದು ದೂರು ನೀಡಿದ್ದರು. ಇದಾದ ಬಳಿಕ ಅನನ್ಯಾ ಭಟ್ ಪ್ರಕರಣ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಅನನ್ಯಾ ಭಟ್ ನಾಪತ್ತೆ ಕುರಿತು ದೂರು ನೀಡಿದ್ದರೂ, ಫೋಟೋ ನೀಡಿಲ್ಲ. ಅನನ್ಯಾ ಭಟ್ ಯಾರು ಅನ್ನೋ ಪ್ರಶ್ನೆ ಎದುರಾಗಿತ್ತು. ಇದೇ ಮೊದಲ ಬಾರಿಗೆ ಸುಜಾತ್ ಭಟ್ ತಮ್ಮ ವಕೀಲ ಮಂಜುನಾಥ್ ಸಮ್ಮುಖದಲ್ಲಿ ಅನನ್ಯಾ ಭಟ್ ಫೋಟೋ ಬಿಡುಗಡೆ ಮಾಡಿದ್ದಾರೆ.
ದೂರಿನಲ್ಲಿ ಹಲವು ಅನುಮಾನ, ಸ್ಪಷ್ಟನೆ ನೀಡುವ ಪ್ರಯತ್ನದಲ್ಲಿ ಸುಜಾತ್ ಭಟ್
ಸುಜಾತ್ ಭಟ್ ನೀಡಿದ್ದ ದೂರಿನ ಹೇಳಿಕೆಗಳಲ್ಲಿ ಹಲವು ಅನುಮಾನಗಳು ಮೂಡಿತ್ತು. ತನ್ನ ಮಗಳ ದಾಖಲೆಗಳು ಮನೆ ಸುಟ್ಟ ಕಾರಣ ಲಭ್ಯವಿಲ್ಲ ಎಂದಿದ್ದರು. ನೀಡಿದ್ದ ದೂರು ಹಾಗೂ ಕೇಳಿಬಂದ ಆರೋಪಗಳಿಗೆ ಇದೀಗ ಸುಜಾತ್ ಭಟ್ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.
ಸುಜಾತ್ ಭಟ್ ದೂರಿನಲ್ಲಿ ಏನಿದೆ?
ಮೆಡಿಕಲ್ ಕಾಲೇಜು ಒದುತ್ತಿದ್ದ ಅನನ್ಯಾ ಭಟ್ ಗೆಳತಿಯರ ಜೊತೆ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿದ್ದಳು. ಆದರೆ ಅನನ್ಯಾ ಭಟ್ ಮರಳಿ ಬರಲಿಲ್ಲ. ಗೆಳತಿಯರು ಅನನ್ಯಾ ಭಟ್ ಕಾಣೆಯಾಗಿರುವುದಾಗಿ ಮಾಹಿತಿ ನೀಡಿದ್ದರು. ಈ ವೇಳೆ ತಾನು ಕೋಲ್ಕತಾದಲ್ಲಿ ಸಿಬಿಐ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದೆ. ಧರ್ಮಸ್ಥಳಕ್ಕೆ ಬಂದು ದೂರು ಕೊಡುವ ಪ್ರಯತ್ನ ಮಾಡಿದ್ದೆ. ಆದರೆ ನನ್ನನ್ನು ಗದರಿಸಿ ಕಳುಹಿಸಿದರು. ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿ ಬಳಿ ಈ ನಾಪತ್ತೆ ಪ್ರಕರಣ ಪ್ರಸ್ತಾಪಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದರು. ದೇವಸ್ಥಾನ ಸಿಬ್ಬಂದಿ ವರ್ಗದ ಹಲ್ಲೆಯಿಂದ ಮೂರು ತಿಂಗಳು ಕೋಮಾದಲ್ಲಿದ್ದೆ. ಬಳಿಕ ಚೇತರಿಸಿಕೊಂಡು ಒಂಟಿಯಾಗಿ ಜೀವನ ಸಾಗಿಸಿದ್ದೆ. ಇದೀಗ ಎಸ್ಐಟಿ ತನಿಖೆಯಲ್ಲಿ ಸತ್ಯ ಹೊರಬರುವ ಸಾಧ್ಯತೆ ಎಂದು ಆಶಯದೊಂದಿಗೆ ದೂರು ನೀಡಿದ್ದೇನೆ. ಮುಸುಕುದಾರಿ ದೂರುದಾರ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದಾನೆ. ಈ ಶವಗಳ ಉತ್ಖನನ ಅನುಮತಿ ಕೊಡಿ ಎಂದು ಹೇಳಿದ್ದಾರೆ. ಈ ವೇಳೆ ನನ್ನ ಮಗಳ ಕಳೇಬರ ನನ್ನ ಡಿಎನ್ಎ ಮ್ಯಾಚ್ ಆದರೆ ನನಗೆ ನೀಡಬೇಕು. ನನ್ನ ಮಗಳಿಗೆ ಹಿಂದೂ ಸಂಪ್ರದಾಯದ ಪ್ರಕರಾ ವಿಧಿವಿಧಾನ ಕರ್ಮ ಮಾಡಬೇಕು ಎಂದು ದೂರಿನಲ್ಲಿ ಹೇಳಿದ್ದರು.
