ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿದವರ ಅಸಲಿಯತ್ತು ಬಹಿರಂಗವಾಗುತ್ತಿದೆ. ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ಮಾಡಿದ ಎಸ್ಐಟಿ ಅಧಿಕಾರಿಗಳು ಹಲವು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇದೇ ವೇಳೆ ತಿಮರೋಡಿ ಮನೆಯಿಂದ ಮೂರು ತಲವಾರು ವಶಕ್ಕೆ ಪಡೆಯಲಾಗಿದೆ.

ಬೆಳ್ತಂಗಡಿ (ಆ.27) ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ತೀವ್ರಗೊಂಡಿದೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು ಹಿಂದೂಗಳ ನಂಬಿಕೆ ಘಾಸಿಗೊಳಿಸಲು ಮಾಡಿದ ಪ್ರಯತ್ನಗಳು ಹೊರಬಂದಿದೆ. ಶವ ಹೂತಿಟ್ಟ ಉತ್ಖನನ ಕಾರ್ಯದಿಂದ ಇದೀಗ ದೂರುದಾರ, ಆರೋಪ ಮಾಡಿದವವರ ಮೇಲೆ ತನಿಖೆ ನಡೆಯುತ್ತಿದೆ. ಅರೆಸ್ಟ್ ಆಗಿರುವ ಚಿನ್ನಯ್ಯ ನೀಡಿದ ಮಾಹಿತಿ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಮೂರು ತಲವಾರು ವಶಕ್ಕೆ ಪಡೆಯಲಾಗಿದೆ.

Add Asianetnews Kannada as a Preferred SourcegooglePreferred

ಮಾರಾಕಾಸ್ತ್ರ ವಶಕ್ಕೆ ಪಡೆದ ಪೊಲೀಸ್

ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಪತ್ತೆಯಾದ ಮೂರು ತಲವಾರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಸಾಮಾಜಿಕ ಹೋರಾಟಗಾರನೇ ಅನ್ನೋ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ. ಇತ್ತ ಅರೆಸ್ಟ್ ಆಗಿರುವ ಚಿನ್ನಯ್ಯ ಅಧಿಕಾರಿಗಳ ಬಳಿ ಬುರುಡೆ ಗ್ಯಾಂಗ್ ತನ್ನನ್ನು ಉಳಿಸುವುದಿಲ್ಲ, ಅಸ್ಥಿಗಳು ಸಿಗದಿದ್ದಾಗ ತಿಮರೋಡಿ ಮನೆಯಲ್ಲಿ ಜಗಳವಾಗಿದೆ. ನನಗೆ ಅಪಾಯವಿದೆ ಎಂದು ಹೇಳಿಕೆ ನೀಡಿದ್ದ. ಇದೀಗ ಈ ಹೇಳಿಕೆ ಹಾಗೂ ತಲವಾರು ಪತ್ತೆ ಮಹೇಶ್ ಶೆಟ್ಟಿ ತಿಮರೋಡಿಗೆ ಸಂಷ್ಟದ ದಿನಗಳನ್ನು ಹೆಚ್ಚಿಸಿದೆ.

ಮಹೇಶ್ ಶೆಟ್ಟಿ ಕುಟುಂಬಸ್ಥರ ಮೊಬೈಲ್ ವಶಕ್ಕೆ

ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ಮಾಡುವ ಮೊದಲೇ ಮಹೇಶ್ ಶೆಟ್ಟಿ ಮನೆಯಿಂದ ತೆರಳಿದ್ದರು. ದಾಳಿ ವೇಳೆ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಇತ್ತ ಮನೆ, ತೋಟ ಸೇರಿದಂತೆ ಎಲ್ಲಾ ಕಡೆ ಪರಿಶೋಧನೆ ನಡೆಸಿದ ಎಸ್ಐಟಿ ಅಧಿಕಾರಿಗಳು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮಹೇಶ್ ಶೆಟ್ಟಿ ಪತ್ನಿ, ಮಗ ಹಾಗೂ ಮಗಳ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ಧರ್ಮಸ್ಥಳದ ವಿರುದ್ಧ ಸಂಚು ನಡೆಸಲು ಸಂಗ್ರಹಿಸಿದ್ದ ದಾಖಲೆ ಪತ್ರಗಳು ಸಹ ವಶಕ್ಕೆ ಪಡೆಯಲಾಗಿದೆ. ಹಲವು ಮಾಹತಿಗಳನ್ನು ಸಂಗ್ರಹಿಸಲಾಗಿದೆ. ನಿನ್ನೆ (ಆ.26) ತಡ ರಾತ್ರಿವರೆಗೂ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಜಾಲಾಡಿದ್ದಾರೆ. ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ರಿಪೋರ್ಟ್ ತಯಾರಿಸಿದ್ದಾರೆ. ಹೀಗಾಗಿ ತಡರಾತ್ರಿ ಮಹೇಶ್ ಶೆಟ್ಟಿ ಮನೆಯಿಂದ ತೆರಳಿದ್ದಾರೆ.

ಚಿನ್ನಯ್ಯನ ಎರಡು ಮೊಬೈಲ್ ವಶಕ್ಕೆ

ಮಹೇಶ್ ಶೆಟ್ಟಿ ಮನೆಯಲ್ಲಿ ಉಳಿದುಕೊಂಡಿದ್ದ ಚಿನ್ನಯ ತನ್ನ ಎರಡೂ ಮೊಬೈಲ್ ಅಲ್ಲೆ ಇಟ್ಟಿದ್ದ. ವಿಚಾರಣೆ ವೇಳೆ ತನ್ನ ಬಳಿ ಮೊಬೈಲ್ ಇಲ್ಲ ಎಂದಿದ್ದ. ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧ ವೇಳೆ ಚಿನ್ನಯ್ಯನ ಎರಡು ಮೊಬೈಲ್ ಪತ್ತೆಯಾಗಿದೆ. ಒಂದು ಕೀಪ್ಯಾಡ್ ಮೊಬೈಲ್ ಮತ್ತೊಂದು ಆ್ಯಂಡ್ರಾಯ್ಡ್ ಮೊಬೈಲ್. ಆರಂಭದಲ್ಲಿ ಕೀ ಪ್ಯಾಡ್ ಮೊಬೈಲ್ ಬಳಸುತ್ತಿದ್ದ ಚಿನ್ನಯ್ಯ, ಬಳಿಕ ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಬಳಸಲು ಆರಂಭಿಸಿದ್ದ. ಕಳೆದ ಕೆಲ ತಿಂಗಳುಗಳಿಂದ ಆ್ಯಂಡ್ರಾಯ್ಡ್ ಫೋನ್ ಬಳಕೆ ಮಾಡುತ್ತಿದ್ದ. ಇದರ ಜೊತೆಗೆ ಚಿನ್ನಯ್ಯನ ಲಗೇಜ್ ಬ್ಯಾಗ್, ಬೆನ್ನ ಹಿಂದೆ ಹಾಕುವ ಬ್ಯಾಗ್, ಬಟ್ಟೆ ಸೇರಿದಂತೆ ಕೆಲ ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ.