ಧರ್ಮಸ್ಥಳ ಪ್ರಕರಣದಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಯಾಗುತ್ತಿದೆ. ಇದೀಗ ಬೆಳ್ಳಂಬೆಳಗ್ಗೆ ಸುಜಾತಾ ಭಟ್ ಬೆಳ್ತಂಗಡಿ ಎಸ್ೈಟಿ ಕಚೇರಿಗೆ ಆಗಮಿಸಿದ್ದಾರೆ. ವಿಚಾರಣೆಗಾಗಿ ಪೊಲೀಸರು ಆಗಮಿಸುವ ಮುನ್ನವೇ ಸುಜಾತಾ ಭಟ್ ಹಾಜರಾಗಿದ್ದಾರೆ. 

ಬೆಳ್ತಂಗಡಿ (ಆ.26) ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರಗಳು ಒಂದೊಂದಾಗಿ ಹೊರಬರುತ್ತಿದೆ. ದೂರುದಾರರಾಗಿ ಬಂದು ಗಂಭೀರ ಆರೋಪ ಮಾಡಿದ್ದ ಕೆಲವರು ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪೈಕಿ ಸುಜಾತಾ ಭಟ್ ಮಗಳು ಅನನ್ಯಾ ಭಟ್ ಪ್ರಕರಣ ಕೂಡ ಹೊರತಾಗಿಲ್ಲ. ಇದೀಗ ಸುಜಾತಾ ಭಟ್ ಇಂದು ಬೆಳಗ್ಗೆ ಬೆಳ್ತಂಗಡಯಲ್ಲಿರುವ ಎಸ್ಐಟಿ ಕಚೇರಿಗೆ ಆಮಿಸಿದ್ದಾರೆ. ವಿಚಾರಣೆಗೆ ಈಗಾಗಲೇ ಎಸ್ಐಟಿ ನೋಟಿಸ್ ನೀಡಿತ್ತು. ಇದರ ಹಿನ್ನಲೆಯಲ್ಲಿ ಸುಜಾತಾ ಭಟ್ ಇಂದು ಪೊಲೀಸರು ಆಗಮಿಸುವ ಮುನ್ನವೇ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ವಕೀಲರ ಜೊತೆ ಆಗಮಿಸಿದ ಸುಜಾತಾ ಭಟ್ ವಿಚಾರಣೆ ಎದುರಿಸಲು ಸಜ್ಜಾಗಿದ್ದಾರೆ.

Add Asianetnews Kannada as a Preferred SourcegooglePreferred

ಬೆಳಗ್ಗೆ 5 ಗಂಟೆಗೆ ಎಸ್ಐಟಿ ಕಚೇರಿಗೆ ಸುಜಾತಾ ಭಟ್

ಎಸ್ಐಟಿ ತನಿಖಾಧಿಕಾರಿಗಳು ಪ್ರತಿ ದಿನ ವಿಚಾರಣೆ ನಡೆಸುತ್ತಿದ್ದಾರೆ. ತಡ ರಾತ್ರಿವರೆಗೂ ವಿಚಾರಣೆಯ ರಿಪೋರ್ಟ್ ರೆಡಿ ಮಾಡುತ್ತಿದ್ದಾರೆ. ಪೊಲೀಸರು, ತನಿಖಾಧಿಕಾರಿಗಳು ಬೆಳಗಿನ ಜಾವ ಕಣ್ಣು ಬಿಡುವ ಮೊದಲೇ ಸುಜಾತಾ ಭಟ್ ಎಸ್ಐಟಿ ಕಚೇರಿ ಮುಂದೆ ಹಾಜರಾಗಿದ್ದಾರೆ.

ಸುಜಾತಾ ಭಟ್ ಆಗಮಿಸಿದ ಹಿನ್ನಲೆಯಲ್ಲಿ ತುರ್ತಾಗಿ ಆಗಮಿಸಿದ ಎಸ್ಐಟಿ ತಂಡ

ಸಾಮಾನ್ಯವಾಗಿ 9 ರಿಂದ 10 ಗಂಟೆಗೆ ಎಸ್ಐಟಿ ಅಧಿಕಾರಿಗಳು, ಪೊಲೀಸರು ಕಚೇರಿಗೆ ಆಗಮಿಸುತ್ತಿದ್ದರು. ಆದರೆ ಸುಜಾತಾ ಭಟ್ ಬೆಳಗ್ಗೆ 5 ಗಂಟೆಗೆ ಕಚೇರಿಗೆ ಹಾಜರಾಗಿದ್ದಾರೆ. ಸುಜಾತಾ ಭಟ್ ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ಎಸಐಟಿ ಅಧಿಕಾರಿಗಳು ಬಹುಬೇಗನೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ನಿಖಾಧಿಕಾರಿ ಜಿತೇಂದ್ರ ದಯಾಮ ಸೇರದಂತೆ ತಂಡ ಬೆಳ್ತಂಗಡಿ ಕಚೇರಿಗೆ ಆಗಮಿಸಿದ್ದಾರೆ. ದಯಾಮಾ ಜೊತೆ ಎಸ್ಪಿ ಸೈಮನ್ ಸೇರಿ ಇತರ ಅಧಿಕಾರಿಗಳು ಆಗಮಿಸಿದ್ದಾರೆ. ಇದರ ಜೊತೆಗೆ ಭದ್ರತೆಗಾಗಿ ಇತರ ಪೊಲೀಸರು ಆಗಮಿಸಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಎಸ್ಐಟಿ ಕಚೇರಿಯಲ್ಲಿ ಸುಜಾತ್ ಭಟ್ ವಿಚಾರಣೆ ಆರಂಭಗೊಳ್ಳಲಿದೆ. ಎಸ್ಐಟಿ ಪಿಎಸ್ಸೈ ಗುಣಪಾಲ ಜಿ. ನೇತೃತ್ವದಲ್ಲಿ ವಿಚಾರಣೆ ಆರಂಭಗೊಳ್ಳಲಿದೆ. ಅನನ್ಯಾ ಭಟ್ ನಾಪತ್ತೆ ಪ್ರಕರಣದಲ್ಲಿ ಸುಜಾತಾ ಭಟ್ ನೀಡಿದ್ದ ದೂರು ಬಳಿಕ ಹೊರಬಂದ ಸತ್ಯಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಇಷ್ಟೇ ಅಲ್ಲ ಸುಜಾತಾ ಭಟ್ ಮಾಧ್ಯಮಗಳಲ್ಲಿ ದಿನಕ್ಕೊಂದು ಹೇಳಿಕೆ ನೀಡಿದ್ದಾರೆ. ತನಗೆ ಅನನ್ಯಾ ಭಟ್ ಅನ್ನೋ ಮಗಳೇ ಇರಲಿಲ್ಲ. ಇವೆಲ್ಲಾ ಕಟ್ಟುಕತೆ, ಗಿರೀಶ್ ಮಟ್ಟಣ್ಣನವರ್ ಹೇಳಿದ ಹಾಗೇ ಹೇಳಿದ್ದೇನೆ ಎಂದು ಸಂಪೂರ್ಣ ಉಲ್ಟಾ ಹೊಡೆದಿದ್ದರು. ಬಳಿಕ ಬೆದರಿಸಿ ಈ ಹೇಳಿಕೆ ಕೊಡಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಎಲ್ಲಾ ಹೇಳಿಕೆ, ಎಸ್ಐಟಿ ಅಧಿಕಾರಿಗಳು ತನಿಖೆ ವರದಿ ಕುರಿತು ಹಲವು ಪ್ರಶ್ನೆಗಗಳನ್ನು ಸುಜಾತಾ ಭಟ್‌ಗೆ ಕೇಳಲಾಗುತ್ತದೆ.

ರಂಗು ರಂಗಿನ ಕತೆ ಕಟ್ಟಿ ಎಸ್ಐಟಿ ನೋಟಿಸ್ ಬೆನ್ನಲ್ಲೇ ತಣ್ಣಗಾಗಿದ್ದ ಸುಜಾತಾ ಭಟ್

ಸುಜಾತಾ ಭಟ್ ದಿನಕ್ಕೊಂದು ಹೇಳಿಕೆ ನೀಡುತ್ತಾ ಮಾಧ್ಯಮಗಳಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದರು. ಅನನ್ಯಾ ಭಟ್, ಸಿಬಿಐ ಸ್ಟೆನೋಗ್ರಾಫರ್, ಪತಿ, ಸೇರಿದಂತೆ ಸುಜಾತಾ ಭಟ್ ಇತಿಹಾಸವನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬಿಚ್ಚಿಟ್ಟಿತು. ಈ ವೇಳ ತೀವ್ರ ಒತ್ತಡಕ್ಕೆ ಸಿಲುಕಿದ್ದ ಸುಜಾತಾ ಭಟ್ ಹಾಗೂ ತಂಡ, ಕೊಡಗಿನ ವಸಂತಿ ಫೋಟೋ ಬಿಡುಗಡೆ ಮಾಡಿ ಇದು ತನ್ನ ಮಗಳು ಎಂದು ಹೋರಾಟಕ್ಕೆ ಮರು ಜೀವನ ನೀಡುವ ಪ್ರಯತ್ನ ಮಾಡಿದ್ದರು. ಆದರೆ ವಸಂತಿ ಫೋಟೋದ ಅಸಲಿ ಕತೆಯೂ ಬಹಿರಂಗವಾಗಿತ್ತು. ಮತ್ತೊಂದು ಷಡ್ಯಂತ್ರಕ್ಕೆ ಸಜ್ಜಾಗುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ನೋಟಿಸ್ ನೀಡಿದ್ದರು. ಈ ನೋಟಿಸ್‌ನಿಂದ ಸುಜಾತಾ ಭಟ್ ಬೆಚ್ಚಿ ಬಿದ್ದಿದ್ದರು. ಇಷ್ಟೇ ಅಲ್ಲ ಮಗಳೇ ಇರಲಿಲ್ಲ ಎಂದು ಬಾಯ್ಬಿಟ್ಟಿದ್ದರು.

ಆಗಸ್ಟ್ 29ಕ್ಕೆ ಹಾಜರಾಗುತ್ತೇನೆ ಎಂದಿದ್ದ ಸುಜಾತಾ ಭಟ್

ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕಿದ್ದ ಸುಜಾತಾ ಭಟ್ ತಮ್ಮ ಆರೋಗ್ಯದ ಕಾರಣ ನೀಡಿ ಆಗಸ್ಟ್ 29 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮನವಿ ಮಾಡಿದ್ದರು. ಈ ಕುರಿತು ಎಸ್ಐಟಿಗೆ ಪತ್ರ ಬರೆದಿದ್ದರು. ಆದರೆ ದಿಢೀರ್ ಮತ್ತೆ ಪ್ಲಾನ್ ಬದಲಾಯಿಸಿದ ಸುಜಾತಾ ಭಟ್ ಆಗಸ್ಟ್ 26ಕ್ಕೆ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ.