ಹಂಚೂರಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳು ಅಪಹರಣ ಭಯದಿಂದ ಓಡಿ ಬಂದ ಘಟನೆ ನಡೆದಿದೆ. ಮಾರುತಿ ಒಮಿನಿಯಲ್ಲಿ ಬಂದವರು ತನ್ನನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಆದರೆ, ಪೊಲೀಸರ ವಿಚಾರಣೆ ವೇಳೆ ಬಾಲಕಿ ಕನಸಿನ ಭಯದಿಂದ ಓಡಿ ಬಂದಿರುವುದಾಗಿ ತಿಳಿದುಬಂದಿದೆ.
ಹಾಸನ (ಆ.15): ಆಲೂರು: ತಾನು ಅಪಹರಣವಾದಂತೆ ಕನಸು ಕಂಡಿದ್ದ ಬಾಲಕಿಯೊಬ್ಬಳು ಬೆಳಗ್ಗೆ ಶಾಲೆಗೆ ಹೋಗುವಾಗ ಪಕ್ಕದಲ್ಲಿ ಹಂಪ್ ದಾಟಲು ನಿಧಾನವಾದ ಮಾರುತಿ ಒಮಿನಿಯನ್ನು ಕಂಡು ಕಿರುಚಿಕೊಂಡು ತನ್ನನ್ನು ಅಪಹರಣ ಮಾಡಲು ಬಂದಿದ್ದರು ಎಂದು ಹೇಳಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಂಚೂರಿನಲ್ಲಿ ಗುರುವಾರ ನಡೆದಿದೆ.
8ನೇ ತರಗತಿ ವಿದ್ಯಾರ್ಥಿನಿ ಬೆಳಗ್ಗೆ ಏದುಸಿರು ಬಿಡುತ್ತಾ ಶಾಲೆಗೆ ಓಡಿಬಂದು ಶಿಕ್ಷಕರ ಬಳಿ ರಸ್ತೆಯಲ್ಲಿ ಮಾರುತಿ ಒಮಿನಿ ಕಾರಿನವರು ನನ್ನ ಪಕ್ಕಕ್ಕೆ ಬಂದು ತನ್ನನ್ನು ಎಳೆದುಕೊಳ್ಳಲು ಯತ್ನಿಸಿದರು. ಆದರೆ, ನಾನು ನನ್ನ ಬ್ಯಾಗನ್ನು ಎಸೆದು ಅಲ್ಲಿಂದ ತಪ್ಪಿಸಿಕೊಂಡು ಓದಿಬಂದೆ. ಕಾರಿನೊಳಗೆ ಇನ್ನೂ ಇಬ್ಬರು ಬಾಲಕಿಯರಿದ್ದರು ಎಂದು ಹೇಳಿದ್ದಾಳೆ.
ಇದನ್ನೂ ಓದಿ: ಹಾಸನದಲ್ಲಿ ಶಾಲಾ ಬಾಲಕಿಯ ಕಿಡ್ನಾಪ್ ಯತ್ನ! ದುಷ್ಕರ್ಮಿಗಳಿಂದ ತಪ್ಪಿಕೊಂಡ ಬಂದ ವಿದ್ಯಾರ್ಥಿನಿಯಿಂದ ಶಾಕಿಂಗ್ ಮಾಹಿತಿ!
ಶಿಕ್ಷಕರು ಕೂಡಲೇ ಆಲೂರು ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸ್ ಅಧಿಕಾರಿಗಳು ಆಪ್ತ ಸಮಾಲೋಚನೆ ನಡೆಸಿದಾಗ ಬಾಲಕಿ ಹಿಂದಿನ ರಾತ್ರಿ ಮಲಗಿದ್ದಾಗ ಯಾರೋ ಮಾರುತಿ ಓಮಿನಿಯಲ್ಲಿ ಬಂದು ತನ್ನನ್ನು ಅಪಹರಿಸಿದಂತೆ ಕನಸು ಕಂಡಿದ್ದು ಅದರಿಂದ ಭಯಗೊಂಡು ಓಡಿ ಬಂದಿದ್ದಾಗಿ ತಿಳಿಸಿದ್ದಾಳೆ.
