ಬೆನ್ನು ನೋವಿನ ಕಾರಣ ನೀಡಿ ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ತನ್ನನ್ನು ಪರಿಗಣಿಸಬೇಡಿ ಎಂದು ಶ್ರೇಯಸ್ ಅಯ್ಯರ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳಲು ಅವರು ನಿರ್ಧರಿಸಿದ್ದಾರೆ. ಈ ಹಿಂದೆ ಏಷ್ಯಾಕಪ್ ತಂಡದಿಂದಲೂ ಅವರನ್ನು ಕೈಬಿಡಲಾಗಿದೆ.

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತನ್ನನ್ನು ಪರಿಗಣಿಸಬೇಡಿ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಬೆನ್ನು ನೋವಿನ ಕಾರಣ ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಶ್ರೇಯಸ್ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ತಿಳಿಸಿದ್ದಾರೆ. ಕರುಣ್ ನಾಯರ್ ಬದಲಿಗೆ ಶ್ರೇಯಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸೂಚನೆ ಇತ್ತು. ಈ ನಡುವೆಯೇ ಶ್ರೇಯಸ್ ಅನಿರೀಕ್ಷಿತವಾಗಿ ಹಿಂದೆ ಸರಿದಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ಧ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಭಾರತ ಎ ತಂಡದ ನಾಯಕರಾಗಿದ್ದರು.

Add Asianetnews Kannada as a Preferred SourcegooglePreferred

ದಿಢೀರ್ ಭಾರತ ‘ಎ’ ತಂಡ ತೊರೆದಿದ್ದ ಶ್ರೇಯಸ್ ಅಯ್ಯರ್

ಎರಡನೇ ಟೆಸ್ಟ್ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಶ್ರೇಯಸ್ ತಂಡವನ್ನು ತೊರೆದಿದ್ದರು. ಇದರಿಂದಾಗಿ ವಿಕೆಟ್ ಕೀಪರ್ ಧ್ರುವ್ ಜುರೆಲ್ ಭಾರತ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಶ್ರೇಯಸ್ 13 ಎಸೆತಗಳಲ್ಲಿ ಕೇವಲ ಎಂಟು ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಕ್ಟೋಬರ್ 2 ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ವೆಸ್ಟ್ ಇಂಡೀಸ್ ಸರಣಿಯ ಮೊದಲ ಟೆಸ್ಟ್ ಆರಂಭವಾಗಲಿದೆ. ಭಾರತೀಯ ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ಏಷ್ಯಾಕಪ್‌ಗಾಗಿ ದುಬೈನಲ್ಲಿರುವುದರಿಂದ ಆಯ್ಕೆ ಸಮಿತಿ ಸಭೆ ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಏಷ್ಯಾಕಪ್‌ ತಂಡದಲ್ಲಿ ಅಯ್ಯರ್‌ ಕಡೆಗಣಿಸಿದ್ದಕ್ಕೆ ದಾದಾ ಬೇಸರ

ಶ್ರೇಯಸ್ ಅವರನ್ನು ಏಷ್ಯಾಕಪ್ ಟಿ20 ತಂಡಕ್ಕೂ ಆಯ್ಕೆ ಮಾಡಿರಲಿಲ್ಲ. ಇದರ ವಿರುದ್ಧ ಮಾಜಿ ಆಟಗಾರ ಸೌರವ್ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಏಷ್ಯಾಕಪ್ ತಂಡಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಪರಿಗಣಿಸದಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಆನಂದ ಬಜಾರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಗಂಗೂಲಿ ಹೇಳಿದ್ದಾರೆ. ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಅದ್ಭುತವಾಗಿ ಆಡಿದ್ದರು ಮತ್ತು ನಾಯಕತ್ವದಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು ಎಂದು ಗಂಗೂಲಿ ಹೇಳಿದರು. ಶ್ರೇಯಸ್ ಅಯ್ಯರ್ ಅವರನ್ನು ವೈಟ್-ಬಾಲ್ ತಂಡದಿಂದ ಹೇಗೆ ಕೈಬಿಡಲು ಸಾಧ್ಯ? ಆಯ್ಕೆಗಾರರು ಏಷ್ಯಾಕಪ್ ತಂಡಕ್ಕೆ ಆಯ್ಕೆ ಮಾಡಿದ ರಿಂಕು ಸಿಂಗ್ ಅಥವಾ ಜಿತೇಶ್ ಶರ್ಮಾ ಬದಲಿಗೆ ಶ್ರೇಯಸ್ ಅವರನ್ನು ಸೇರಿಸಿಕೊಳ್ಳಬಹುದಿತ್ತು. ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಇದ್ದಾರಲ್ಲವೇ? ಆದರೂ ಶ್ರೇಯಸ್‌ಗೆ ತಂಡದಲ್ಲಿ ಯಾಕೆ ಸ್ಥಾನ ನೀಡಲಿಲ್ಲ ಎಂದು ಗಂಗೂಲಿ ಪ್ರಶ್ನಿಸಿದ್ದಾರೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದ ಶ್ರೇಯಸ್ ಅಯ್ಯರ್, 600ಕ್ಕೂ ಹೆಚ್ಚು ರನ್ ಗಳಿಸಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. ಶ್ರೇಯಸ್ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ನಿರೀಕ್ಷೆಗಳನ್ನು ಸುಳ್ಳಾಗಿಸಿ ಆಯ್ಕೆಗಾರರು ತಂಡವನ್ನು ಪ್ರಕಟಿಸಿದ್ದರು. ಶ್ರೇಯಸ್ ಅವರನ್ನು ಯಾಕೆ ಸೇರಿಸಿಲ್ಲ ಎಂಬ ಪ್ರಶ್ನೆಗೆ, ತಂಡಕ್ಕೆ ಆಯ್ಕೆಯಾಗದಿರುವುದು ಶ್ರೇಯಸ್ ಅವರ ತಪ್ಪಲ್ಲ, ಈ ತಂಡದಲ್ಲಿ ಯಾರನ್ನು ಕೈಬಿಟ್ಟು ಶ್ರೇಯಸ್ ಅವರನ್ನು ಸೇರಿಸಿಕೊಳ್ಳುವುದು ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಪ್ರಶ್ನಿಸಿದ್ದರು.

ವೆಸ್ಟ್‌ ಇಂಡೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತ ಸಂಭವನೀಯ ತಂಡ:

ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್‌, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಧೃವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷ‌ರ್‌ ಪಟೇಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ದೇವದತ್ ಪಡಿಕ್ಕಲ್, ಎನ್‌. ಜಗದೀಶನ್, ನಿತೀಶ್ ರೆಡ್ಡಿ/ಆಕಾಶ್ ದೀಪ್/ಅರ್ಶದೀಪ್ ಸಿಂಗ್.