ಕಾಲ್ತುಳಿತದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದ ಭವಿಷ್ಯ ಅತಂತ್ರವಾಗಿದೆ. ಮಹತ್ವದ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದು, ಕ್ರೀಡಾಂಗಣದ ಮುಂದಿನ ದಿನಗಳ ಬಗ್ಗೆ ಅನುಮಾನಗಳು ಮೂಡಿವೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಸಿಗದೆ ಚಿನ್ನಸ್ವಾಮಿ ಮೈದಾನ ಸೂತಕದ ಮನೆಯಂತಾಗಿದೆ.

• ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು: ವಿಶ್ವದ ಅತ್ಯುತ್ತಮ ಹಾಗೂ ಐತಿಹಾಸಿಕ ಕ್ರೀಡಾಂಗಣಗಳಲ್ಲಿ ಒಂದಾಗಿರುವ, ಕರ್ನಾಟಕ ಕ್ರಿಕೆಟ್ ಪಾಲಿನ 'ಪುಣ್ಯಭೂಮಿ' ಚಿನ್ನಸ್ವಾಮಿ ಕ್ರೀಡಾಂಗಣ ಈಗ ಮೊದಲಿನಂತಿಲ್ಲ. ರಣರೋಚಕ ಪಂದ್ಯ, ಪ್ರೇಕ್ಷಕರು, ಸಿಕ್ಸ‌ರ್ ಸುರಿಮಳೆ, ಜೈಕಾರ, ಸಂಭ್ರಮಾಚರಣೆ, ವಿರಾಟ್ ಕೊಹ್ಲಿ, ಆರ್‌ಸಿಬಿ ರೂಪದಲ್ಲಿ ನೆನಪಿಗೆ ಬರುತ್ತಿದ್ದ ಚಿನ್ನಸ್ವಾಮಿ ಸ್ಟೇಡಿಯಂ, ಈಗ ಸಹಸ್ರಾರು ಅಭಿಮಾನಿಗಳ ಮುಂದೆ ಒಂದು ಕರಾಳ ಅಧ್ಯಾಯವಾಗಿ, ಸೂತಕದ ಮನೆಯಾಗಿ ಕಾಣಿಸುತ್ತಿದೆ.

ಕಳೆದ ಜೂನ್‌ನಲ್ಲಿ ಆರ್‌ಸಿಬಿಯ ಸಂಭ್ರಮಾಚರಣೆ ವೇಳೆ ಉಂಟಾದ ಅತಿ ಭೀಕರ ಕಾಲ್ತುಳಿತ 11 ಜೀವಗಳನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ, ಕ್ರೀಡಾಂಗಣದ ಹಣೆಬರಹವನ್ನೇ ಬದಲಿಸಿಬಿಟ್ಟಿದೆ. ಇಲ್ಲೀಗ ಕೆಎಸ್‌ಎ ಆಯೋಜಿಸುವ ಡಿವಿಷನ್ ಮಟ್ಟದ ಪಂದ್ಯ ಬಿಟ್ಟು ಬೇರೆ ಪಂದ್ಯಗಳು ನಡೆಯುತ್ತಿಲ್ಲ. ಮಹತ್ವದ ಸರಣಿ, ಟೂರ್ನಿಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿವೆ. ಐಸಿಸಿ ಮಹಿಳಾ ವಿಶ್ವಕಪ್, ಐಪಿಎಲ್, ಭಾರತದ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯುವ ಸಾಧ್ಯತೆ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಕ್ರೀಡಾಂಗಣದ ಮೂಲಗಳು ಹೇಳುವ ಪ್ರಕಾರ, ಸದ್ಯಕ್ಕೆ ಅಥವಾ ಕನಿಷ್ಠ ಮುಂದಿನ ಒಂದೆರಡು ವರ್ಷಗಳ ವರೆಗಂತೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಸೇರಿ ಮಹತ್ವದ ಪಂದ್ಯಗಳು ನಡೆಯುವುದಿಲ್ಲ!.

ಕೆಲವು ಟೂರ್ನಿಗಳೇ ಎತ್ತಂಗಡಿ

ಕಾಲ್ತುಳಿತ ನಡೆದ ಕೆಲ ದಿನಗಳಲ್ಲೇ ಭಾರತ-ದ.ಆಫ್ರಿಕಾ 'ಎ' ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಚಿನ್ನಸ್ವಾಮಿಯಿಂದ ರಾಜ್‌ಕೋಟ್‌ಗೆ ಸ್ಥಳಾಂತರಿಸಿ ಬಿಸಿಸಿಐ ಆದೇಶಿಸಿತ್ತು. ಚೊಚ್ಚಲ ಆವೃತ್ತಿಯ ಕೆಎಸ್‌ಎ ಮಹಾರಾಣಿ ಟ್ರೋಫಿ ಪಂದ್ಯಗಳನ್ನು ಚಿನ್ನಸ್ವಾಮಿ ಬದಲು ಆಲೂರಿನಲ್ಲಿ ನಡೆಸಲಾಗುತ್ತಿದೆ. ಅಲ್ಲದೆ, ಮಹಾರಾಜ ಟ್ರೋಫಿ ಟೂರ್ನಿಯನ್ನು ಚಿನ್ನಸ್ವಾಮಿಯಿಂದ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಮಹಾರಾಜ ಟ್ರೋಫಿಯನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಕೆಎಸ್‌ಸಿಎ ನಿರ್ಧರಿಸಿತ್ತು. ಆದರೆ ಅದಕ್ಕೂ ಪೊಲೀಸ್ ಇಲಾಖೆ ಅನುಮತಿ ಕೊಟ್ಟಿಲ್ಲ.

ಕ್ರೀಡಾಂಗಣ ಭವಿಷ್ಯ ಬಗ್ಗೆ ಕುತೂಹಲ ಚಿನ್ನಸ್ವಾಮಿಯಲ್ಲಿ ಸದ್ಯಕ್ಕೆ ಭಾರತ ಪುರುಷರ ಪಂದ್ಯಗಳು ನಿಗದಿಯಾಗಿಲ್ಲ. ಆದರೆ, ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯ (ಸೆ.30), ಸೆಮಿಫೈನಲ್, ಫೈನಲ್ (ನ.2) ಸೇರಿ ಮಹತ್ವದ ಪಂದ್ಯಗಳಿಗೆ ಇದೇ ಕ್ರೀಡಾಂಗಣ ಆತಿಥ್ಯ ವಹಿಸಬೇಕಿದೆ. ಕೆಎಸ್‌ಸಿಎ ಮೂಲಗಳ ಮಾಹಿತಿ ಪ್ರಕಾರ ಮಹಿಳಾ ವಿಶ್ವಕಪ್ ಬೆಂಗಳೂರಿನಿಂದ ಸ್ಥಳಾಂತರಗೊಳ್ಳಲಿದೆ.

ಇತ್ತೀಚೆಗೆ ಸರ್ಕಾರಕ್ಕೆ ನ್ಯಾ.ಕುನ್ಹಾ ಆಯೋಗ ಸಲ್ಲಿಸಿದ್ದ ವರದಿ ಪ್ರಕಾರ ಕ್ರೀಡಾಂಗಣ ದೊಡ್ಡ ಪಂದ್ಯಕ್ಕೆ ಸೂಕ್ತವಾಗಿಲ್ಲ ಮತ್ತು ದೊಡ್ಡ ಸಂಖ್ಯೆಯ ಜನ ಸೇರಿದರೆ ಅಪಾಯ ಎದುರಾ ಗಬಹುದು ಎಂದಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆ ಕೂಡಾ ಸದ್ಯಕ್ಕೆ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಅನುಮತಿ ನೀಡುತ್ತಿಲ್ಲ. ರಾಜ್ಯ ಸರ್ಕಾರ ಕೂಡಾ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಒಪ್ಪಿಗೆ ನೀಡಿಲ್ಲ. ಇದೆಲ್ಲವನ್ನೂ ಗಮನಿಸಿದರೆ ಇಲ್ಲಿ ಸದ್ಯಕ್ಕೆ ಕ್ರಿಕೆಟ್ ಟೂರ್ನಿ ಆಯೋಜನೆ ಕನಸಿನ ಮಾತು.

'ಮಹಿಳಾ ವಿಶ್ವಕಪ್ ಬೇರೆಡೆಗೆ ಸ್ಥಳಾಂತರಗೊಳ್ಳಬಹುದು. ಕಾಲ್ತುಳಿತದ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಸರ್ಕಾರ, ಪೊಲೀಸ್ ಇಲಾಖೆ ಸದ್ಯಕ್ಕೆ ಪಂದ್ಯಗಳನ್ನು ನಡೆಸಲು ಅನುಮತಿ ನೀಡುವುದಿಲ್ಲ. ಮುಂದಿನ 2 ವರ್ಷ ಇಲ್ಲಿ ದೊಡ್ಡ ಪಂದ್ಯ ನಿರೀಕ್ಷಿಸುವಂತಿಲ್ಲ' ಎಂದು ಹೆಸರೇಳಲಿಚ್ಚಿದ ಕೆಎಸ್‌ಎ ಅಧಿಕಾರಿಯೊಬ್ಬರು 'ಕನ್ನಡಪ್ರಭ' ಕ್ಕೆ ಮಾಹಿತಿ ನೀಡಿದ್ದಾರೆ.

ಜೂ.4ರ ಭೀಕರ ಕಾಲ್ತುಳಿತದ ಬಳಿಕ ನಡೆದಿದ್ದೇನು?

1. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 'ಎ' ತಂಡದ ಸರಣಿ ಚಿನ್ನಸ್ವಾಮಿ ಸ್ಟೇಡಿಯಂನಿಂದ ಸ್ಥಳಾಂತರ.

2. ದೊಡ್ಡ ಪಂದ್ಯಕ್ಕೆ ಕ್ರೀಡಾಂಗಣ ಸೂಕ್ತವಲ್ಲ ಎಂದು ನ್ಯಾ.ಕುನ್ಹಾ ಆಯೋಗದಿಂದ ಸರ್ಕಾರಕ್ಕೆ ವರದಿ.

3. ಚೊಚ್ಚಲ ಆವೃತ್ತಿಯ ಮಹಾರಾಣಿ ಟ್ರೋಫಿ ಚಿನ್ನಸ್ವಾಮಿ ಬದಲು ಆಲೂರಿನಲ್ಲಿ ಆಯೋಜನೆ. ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆಗೆ

4.ಕ್ರೀಡಾಂಗಣದಲ್ಲಿ ಜರ್ನಿ ಆಯೋಜನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ

5. ಕೆಎಸ್‌ಎ ಮಹಾರಾಜ ಟ್ರೋಫಿ ಬೆಂಗಳೂರಿಂದ ಎತ್ತಂಗಡಿ, ಮೈಸೂರಲ್ಲಿ ಲೀಗ್ ಆಯೋಜನೆ.

ಕಾಲ್ತುಳಿತವೆಂಬ ಕಪ್ಪುಚುಕ್ಕೆ!

ಚಿನ್ನಸ್ವಾಮಿ ಸ್ಟೇಡಿಯಂಗೆ ಭವ್ಯ ಇತಿಹಾಸವಿದೆ. ಸಬ್ ಏರ್ ವ್ಯವಸ್ಥೆ, ಸೌರ ಪ್ಯಾನೆಲ್‌ಗಳನ್ನು ಅಳವಡಿಸಿದ ವಿಶ್ವದ ಮೊದಲ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಜೊತೆಗೆ ಹಲವು ಐತಿಹಾಸಿಕ ಪಂದ್ಯಗಳಿಗೂ ಸಾಕ್ಷಿಯಾಗಿದೆ. ಅಭಿಮಾನಿಗಳಿಗೆ ಸಂಭ್ರಮದ ಕ್ಷಣಗಳನ್ನು ಕಟ್ಟಿಕೊಟ್ಟಿದೆ. ಆದರೆ ಆ ಕ್ರೀಡಾಂಗಣದ ಖ್ಯಾತಿ ಒಂದು ಘಟನೆಯಿಂದ ಕುಗ್ಗಿಸಲು ಸಾಧ್ಯವಿಲ್ಲ ಎಂಬುದು ಕೆಎಸ್‌ಸಿಎ ಮಾಜಿ ಖಜಾಂಚಿ, ಮಾಜಿ ವಕ್ತಾರ ವಿನಯ್ ಮೃತ್ಯುಂಜಯ ಅವರ ಅನಿಸಿಕೆ.

'ಚಿನ್ನಸ್ವಾಮಿ ಒಂದು ಐಕಾನಿಕ್ ಸ್ಟೇಡಿಯಂ. ಒಂದು ಘಟನೆಯಿಂದ ಅದರ ಖ್ಯಾತಿ ಕುಗ್ಗುವುದಿಲ್ಲ. ಆದರೆ ಮುಂದೆ ಯಾವುದೇ ಸಮಸ್ಯೆ ಆಗದ ಹಾಗೆ ನೋಡಿಕೊಳ್ಳುವುದು ಕೆಎಸ್‌ಸಿಎ ಜವಾಬ್ದಾರಿ. ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯಲ್ಲಿ ಕ್ರೀಡಾಂಗಣದ ಬಗ್ಗೆ ಹಲವು ಲೋಪ ದೋಷಗಳನ್ನು ಬೊಟ್ಟು ಮಾಡಲಾಗಿದೆ. ಇದನ್ನು ಸರಿಪಡಿಸಲು ಕೆಎಸ್‌ಸಿಎ ಕ್ರೀಡಾಂಗಣದ ಸೇಫ್ಟಿ ಆಡಿಟ್ ಮಾಡಬೇಕು' ಎಂದು ವಿನಯ್ ಅವರು ಹೇಳಿದ್ದಾರೆ.

ಸ್ಟೇಡಿಯಂ ಅನ್‌ಫಿಟ್, ಅಸುರಕ್ಷಿತ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ!

ಕಾಲ್ತುಳಿತ ಸಂಬಂಧ ಇತ್ತೀಚೆಗೆ ನ್ಯಾ.ಮೈಕೆಲ್ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿದೆ. ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆ ಹೆಚ್ಚಿನ ಜನರು ಸೇರುವ ಸಮಾರಂಭಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ. ದೊಡ್ಡ ಸಂಖ್ಯೆಯ ಜನರು ಸೇರಿದರೆ ಅಪಾಯ ಎದುರಾಗಬಹುದು. ಇಂತಹ ಸಮಾರಂಭಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಿಯೇ ಇನ್ನು ಪಂದ್ಯಗಳನ್ನು ನಡೆಸಬೇಕು ಎಂದಿದೆ.

ಕ್ರೀಡಾಂಗಣ ಅಭಿವೃದ್ಧಿ ಆಗಬೇಕು. ಮೂಲಸೌಕರ್ಯ ಕೊರತೆಯಿದೆ. ಪ್ರೇಕ್ಷಕರ ಸುರಕ್ಷತೆ ಕೆಎಸ್‌ಸಿಎ ಜವಾಬ್ದಾರಿ. ಮುಂದೆ ಪಂದ್ಯಗಳು ನಡೆಯುವ ಬಗ್ಗೆ ಗೊತ್ತಿಲ್ಲ. ಸರ್ಕಾರ-ಕೆಎಸ್‌ಸಿಎ ನಡುವೆ ಏನು ಚರ್ಚೆ ನಡೆಯುತ್ತಿದೆ ಗೊತ್ತಿಲ್ಲ. ಆದರೆ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯ ನಡೆಸುವುದು, ಪ್ರೇಕ್ಷಕರನ್ನು ಕರೆ ತರುವುದು, ಹಿಂದಿನಂತೆ ಹಲವು ಮಹತ್ವದ ಟೂರ್ನಿ ಆಯೋಜಿಸುವುದು ಕೆಎಸ್‌ಎ ಕೈಯಲ್ಲಿದೆ. ಕ್ರೀಡಾಂಗಣ ಸ್ಥಳಾಂತರ ಆಗುವ ಬಗ್ಗೆ ಹಿಂದಿನಿಂದಲೂ ಚರ್ಚೆ ಇದೆ. ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ನೋಡಬೇಕು.

• ವಿನಯ್ ಮೃತ್ಯುಂಜಯ ಕೆಎಸ್‌ಎ ಮಾಜಿ ಖಜಾಂಚಿ