ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಸರ್ವಪ್ರಯತ್ನ: ಮೋದಿ

Published : May 21, 2023, 08:03 AM IST
ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಸರ್ವಪ್ರಯತ್ನ: ಮೋದಿ

ಸಾರಾಂಶ

ರಷ್ಯಾ- ಉಕ್ರೇನ್‌ ಸಂಘರ್ಷವನ್ನು ನಿಲ್ಲಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿಗೆ  ಅಭಯ ನೀಡಿದ್ದಾರೆ.

ಹಿರೋಶಿಮಾ: ರಷ್ಯಾ- ಉಕ್ರೇನ್‌ ಸಂಘರ್ಷವನ್ನು ನಿಲ್ಲಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿಗೆ  ಅಭಯ ನೀಡಿದ್ದಾರೆ. 15 ತಿಂಗಳ ಹಿಂದೆ ಉಕ್ರೇನ್‌ ಮೇಲೆ ರಷ್ಯಾ ದಾಳಿಯ ಬಳಿಕ ಆ ದೇಶದ ಅಧ್ಯಕ್ಷರ ಜೊತೆ ಇದು ಪ್ರಧಾನಿ ಮೋದಿ ಅವರ ಮೊದಲು ಮುಖಾಮುಖಿ ಭೇಟಿಯಾಗಿದೆ.

ಸದ್ಯ ಜಿ7 ಶೃಂಗಕ್ಕಾಗಿ ಜಪಾನ್‌ನ ಹಿರೋಶಿಮಾಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಶೃಂಗದ ಸ್ಥಳದಲ್ಲೇ ಉಕ್ರೇನ್‌ ಅಧ್ಯಕ್ಷ ಜೆಲೆನ್ಸಿ$್ಕ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಮೋದಿ ‘ಉಕ್ರೇನ್‌ನಲ್ಲಿನ ಯುದ್ಧ ಇಡೀ ವಿಶ್ವಕ್ಕೆ ಒಂದು ಅತಿದೊಡ್ಡ ವಿಷಯ ಮತ್ತು ಇಡೀ ಜಗತ್ತಿನ ಮೇಲೆ ಅದು ಹಲವು ರೀತಿಯ ಪರಿಣಾಮಗಳನ್ನು ಬೀರುತ್ತಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ನಾವು ಕೇವಲ ರಾಜಕೀಯ ಅಥವಾ ಆರ್ಥಿಕ ವಿಷಯವಾಗಿ ಪರಿಗಣಿಸಿಲ್ಲ. ಬದಲಾಗಿ ಅದನ್ನು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ಸಂಗತಿಯಾಗಿ ಪರಿಗಣಿಸಿದ್ದೇವೆ. ಹೀಗಾಗಿ ಭಾರತ ಮತ್ತು ನನ್ನ ಪರವಾಗಿ, ಈ ಸಂಘರ್ಷವನ್ನು ಅಂತ್ಯಗೊಳಿಸಲು ವೈಯಕ್ತಿಕ ನೆಲೆಗಟ್ಟಿನಲ್ಲಿ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುವ ಭರವಸೆಯನ್ನು ನೀಡುತ್ತೇನೆ’ ಎಂದು ಹೇಳಿದರು.

ಮೋದಿಗೆ ಹಿರೋಶಿಮಾದಲ್ಲಿ ಭರ್ಜರಿ ಸ್ವಾಗತ: ಮೇ. 22ಕ್ಕೆ ಪಪುವಾ, ಆಸ್ಪ್ರೇಲಿಯಾಗೆ ಭೇಟಿ

ಈ ವೇಳೆ ಪ್ರತಿಕ್ರಿಯಿಸಿದ ಜೆಲನ್ಸ್ಕಿ, ಸಂಘರ್ಷ ಇತ್ಯರ್ಥಕ್ಕಾಗಿ ತಮ್ಮ ದೇಶ ಮುಂದಿಟ್ಟಿರುವ ಸಂಧಾನ ಸೂತ್ರವನ್ನು ಭಾರತೀಯ ನಾಯಕನಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ, ಇದರ ಜಾರಿಗೆ ನೆರವಾಗುವಂತೆ ಕೋರಿದರು. ಜೊತೆಗೆ ಪ್ರಾದೇಶಿಕ ಸಮಗ್ರತೆ ಮತ್ತು ನಮ್ಮ ದೇಶದ ಸಾರ್ವಭೌಮತೆಯನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಮಾನವೀಯ ನೆರವು ಕಲ್ಪಿಸಿದ್ದಕ್ಕಾಗಿ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಉಕ್ರೇನ್‌ಗೆ ಮೊಬೈಲ್‌ ಕ್ಲಿನಿಕ್‌ಗಳ ಅವಶ್ಯಕತೆ ಇದೆ ಎಂದು ಭಾರತದ ನೆರವು ಕೋರಿದರು.

ಈ ಸಭೆಯ ಬಳಿಕ ಟ್ವೀಟ್‌ ಮಾಡಿದ ಮೋದಿ, ‘ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ (diplomatic channels) ಮೂಲಕ ಸಂಘರ್ಷವನ್ನು ಅಂತ್ಯಗೊಳಿಸುವುದರ ಬಗ್ಗೆ ಉಕ್ರೇನ್‌ ನಾಯಕರಿಗೆ ಭಾರತ ತನ್ನ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಮತ್ತು ಉಕ್ರೇನ್‌ನ ಜನರಿಗೆ ಎಲ್ಲಾ ರೀತಿಯ ಮಾನವೀಯ ನೆರವು ನೀಡುವುದನ್ನು ಮುಂದುವರೆಸಲಿದೆ. ಕಳೆದ ಒಂದೂವರೆ ವರ್ಷದಲ್ಲಿ ನಾವು ಹಲವು ಬಾರಿ ಫೋನ್‌ನಲ್ಲಿ ಮಾತನಾಡಿದ್ದೇವೆ. ಆದರೆ ಸುದೀರ್ಘ ಸಮಯದ ಬಳಿಕ ನಾವು ಪರಸ್ಪರ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಯುದ್ಧದ ಪರಿಣಾಮಗಳನ್ನು ನಮ್ಮೆಲ್ಲರಿಗಿಂತ ನೀವು ಹೆಚ್ಚು ಅನುಭವಿಸಿದ್ದೀರಿ, ಆದರೆ ಕಳೆದ ವರ್ಷ ನಮ್ಮ ವಿದ್ಯಾರ್ಥಿಗಳು ಉಕ್ರೇನ್‌ನಿಂದ ಹಿಂದಿರುಗಿದಾಗ ನೀಡಿದ ಅಲ್ಲಿನ ಸಂದರ್ಭಗಳ ವಿವರಣೆಯಿಂದ ನೀವು ಹಾಗೂ ಉಕ್ರೇನ್‌ ನಾಗರಿಕರು ಅನುಭವಿಸಿದ ನೋವನ್ನು ನಾನು ಅರ್ಥೈಸಿಕೊಳ್ಳಬಲ್ಲೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತೈಲ ಉದ್ಯಮದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಹೆಸರೇ ಕೇಳಿರದ ಭಾರತೀಯ ಕಂಪನಿ ಗತಿಕ್!

ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಕಳೆದ ಒಂದು ವರ್ಷದಿಂದ ಹಲವು ಬಾರಿ ಪ್ರಯತ್ನ ನಡೆಸಿದ್ದಾರೆ. ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Russian President Vladimir Putin) ಮತ್ತು ಉಕ್ರೇನ್‌ ಅಧ್ಯಕ್ಷ ಜೆಲೆನ್ಸ್ಕಿ (Volodymyr Zelensky) ಜೊತೆ ದೂರವಾಣಿ ಮತ್ತು ಮುಖಾಮುಖಿ ಭೇಟಿ ನಡೆಸಿ, ಯುದ್ಧ (war) ಸ್ಥಗಿತಕ್ಕೆ ಕರೆ ನೀಡಿದ್ದಾರೆ. ಜೊತೆಗೆ ಕಳೆದ ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಪುಟಿನ್‌ ಅವರಿಗೆ ಇದು ಯುದ್ಧದ ಸಮಯವಲ್ಲ ಎಂಬ ಮೋದಿ ಅವರ ಕಿವಿಮಾತು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು.

ಮೋದಿ ಕಂಡೊಡನೆ ಬಂದು ಅಪ್ಪಿಕೊಂಡ ಅಧ್ಯಕ್ಷ ಬೈಡೆನ್‌

ಹಿರೋಶಿಮಾ: ಜಿ7 ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, (US President Joe Biden) ಅಪ್ಪಿಕೊಂಡು ಪ್ರೀತಿ, ಸ್ನೇಹ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು. ಪ್ರಧಾನಿ ಮೋದಿ ಮೊದಲೇ ಸಭೆಗೆ ಬಂದು ಕುಳಿತಿದ್ದರು. ಬಳಿಕ ಸಭೆಗೆ ಆಗಮಿಸಿದ ಬೈಡೆನ್‌, ದೂರದಿಂದ ಮೋದಿಯನ್ನು ಕಂಡಕೂಡಲೇ ಅವರತ್ತ ಧಾವಿಸಿ ಅವರನ್ನು ಅಪ್ಪಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!