ಅಂಗನವಾಡಿಯಲ್ಲಿ ಗರ್ಭಿಣಿ- ಬಾಣಂತಿಯರಿಗೆ ಕೊಳೆತ ಮೊಟ್ಟೆ ಭಾಗ್ಯ: ಆಕ್ರೋಶ

Jul 13, 2023, 9:39 AM IST

ಕೊಡಗು (ಜು.13): ಗರ್ಭಿಣಿ- ಬಾಣಂತಿಯರಿಗೆ ಕೊಳೆತ ಮೊಟ್ಟೆ  ವಿತರಣೆ ಮುಂದುವರಿದಿದ್ದು, ಸುವರ್ಣ ನ್ಯೂಸ್‌ನ ವರದಿ ಬಳಿಕವೂ ಮೊಟ್ಟೆ ಮಾಫಿಯಾ ನಡೆಯುತ್ತಿದೆ. ಈ ಬಗ್ಗೆ ಸುವರ್ಣ ನ್ಯೂಸ್ ತಂಡ ಎಕ್ಸ್‌ಕ್ಲೂಸಿವ್ ವರದಿಯನ್ನು ಪ್ರಸಾರ ಮಾಡಿತ್ತು. ಆದರೂ ಈ ಮೊಟ್ಟೆ ಮಾಫಿಯಾ ಮುಂದುವರೆದಿದ್ದು, ಕವರ್ ಸ್ಟೋರಿ ವರದಿ ಆದಾಗ ಭರವಸೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆಯನ್ನು ಕೊಟ್ಟಿದ್ದರು. ಆದರೆ ರಾಜ್ಯದಲ್ಲಿ ಇನ್ನೂ ಕೂಡಾ ಕೊಳೆತ ಮೊಟ್ಡೆ ಸರಬರಾಜು ಇನ್ನೂ ನಿಂತಿಲ್ಲ.  

ಈ ಘಟನೆ ಘಟನೆ ಕುಶಾಲನಗರ ತಾಲೂಕಿನ ಕೂಡಿಗೆಯ ಬಸವನತ್ತೂರಿನಲ್ಲಿ ನಡೆದಿದೆ. ಸ್ಥಳೀಯ ಅಂಗನವಾಡಿಯಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೊಟ್ಟೆ ವಿತರಣೆ ಮಾಡಲಾಗಿದ್ದು, ಕೊಳೆತು ದುರ್ವಾಸನೆ ಬರುತ್ತಿರುವ ಮೊಟ್ಟೆವಿತರಣೆ ಹಿನ್ನೆಲೆ ಅಧಿಕಾರಿಗಳು, ಸರ್ಕಾರದ ವಿರುದ್ಧ ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಿಂಗಳಿಗೆ ಮಹಿಳೆಯರಿಗೆ 21 ಮೊಟ್ಟೆಯನ್ನು ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ. ‘ಇಷ್ಟು ಹಾಳಾದ ಮೊಟ್ಟೆಗಳನ್ನು ಏತಕ್ಕಾಗಿ ವಿತರಿಸುತ್ತೀರಿ, ನಿಮ್ಮ ಹೆಂಡತಿ ಮಕ್ಕಳಿಗೂ ಇಂತಹದ್ದೇ ಮೊಟ್ಟೆ ವಿತರಿಸುತ್ತೀರಾ’ ಎಂದು ಫಲಾನುಭವಿ ಗೀತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.