ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ವಿಚಾರಣೆ ವೇಳೆ ಯಾವ ರಾಜಕಾರಣಿ, ಯಾವುದೇ ಅಧಿಕಾರಿಯ ಹೆಸರನ್ನು ಬಾಯ್ಬಿಟ್ಟಿಲ್ಲ.
ಬೆಂಗಳೂರು (ಜು. 20): ಪಿಎಸ್ಐ ನೇಮಕಾತಿ ಹಗರಣದ (PSI Recruitment Scam) ಪ್ರಮುಖ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪಾಲ್ (Amrit Paul) ವಿಚಾರಣೆ ವೇಳೆ ಯಾವ ರಾಜಕಾರಣಿ, ಯಾವುದೇ ಅಧಿಕಾರಿಯ ಹೆಸರನ್ನು ಬಾಯ್ಬಿಟ್ಟಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅಮೃತ್ ಪಾಲ್ ಸಲ್ಲಿಸಿರುವ ಅರ್ಜಿ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಆನಂದ ಚೌಹಾಣ್ ಅವರ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಬಹುತೇಕ ಪ್ರಶ್ನೆಗಳಿಗೆ ಮೌನ ವಹಿಸಿದ್ದಾರೆ. ಯಾರ ಹೆಸರನ್ನೂ ಬಾಯಿ ಬಿಟ್ಟಿಲ್ಲ. ಟೆಕ್ನಿಕಲ್ ಸಾಕ್ಷ್ಯ ಸಿಗಬಾರದೆಂದು ಮೊಬೈಲ್ ಫಾರ್ಮೆಟ್ ಮಾಡಿಸಿದ್ದಾರೆ.
ಈ ಮಧ್ಯೆ ಅಮೃತ್ ಪಾಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ಸಿಐಡಿ ಸಹ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಆಕ್ಷೇಪಣೆ ಸಲ್ಲಿಸಿರುವ ಅಮೃತ್ ಪಾಲ್ ಪರ ವಕೀಲರು, ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು. ನಂತರ ಜಾಮೀನು ಅರ್ಜಿ ಸಂಬಂಧ ಪಾಲ್ ಪರ ವಕೀಲ ನಿತಿನ್, ಎರಡು ಗಂಟೆಗೂ ಹೆಚ್ಚು ಸಮಯ ಸುದೀರ್ಘ ವಾದ ಮಂಡಿಸಿದರು. ಸಮಯದ ಕೊರತೆಯಿಂದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿದೆ.