ಮಹಾಷ್ಟ್ರದಲ್ಲಿ (Maharashtra) ಕರ್ನಾಟಕ ಧ್ವಜ ಸುಟ್ಟ ಘಟನೆ ಹಾಗೂ ಬೆಳಗಾವಿಯಲ್ಲಿ (Belagavi) ಎಂಇಎಸ್ನ ಪುಂಡಾಟಿಕೆಯನ್ನು ವಿರೋಧಿಸಿ ಡಿ.31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕನ್ನಡ ಚಿತ್ರರಂಗ ನೈತಿಕ ಬೆಂಬಲ ವ್ಯಕ್ತಪಡಿಸಿದೆ.
ಬೆಂಗಳೂರು (ಡಿ. 25): ಮಹಾಷ್ಟ್ರದಲ್ಲಿ (Maharashtra) ಕರ್ನಾಟಕ ಧ್ವಜ ಸುಟ್ಟ ಘಟನೆ ಹಾಗೂ ಬೆಳಗಾವಿಯಲ್ಲಿ (Belagavi) ಎಂಇಎಸ್ನ ಪುಂಡಾಟಿಕೆಯನ್ನು ವಿರೋಧಿಸಿ ಡಿ.31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕನ್ನಡ ಚಿತ್ರರಂಗ ನೈತಿಕ ಬೆಂಬಲ ವ್ಯಕ್ತಪಡಿಸಿದೆ.
'ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗ ಈಗಷ್ಟೆ ಚೇತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪ್ರತಿ ವಾರ ಚಿತ್ರಗಳು ಬಿಡುಗಡೆ ಆಗುತ್ತಿವೆ. ಹಲವು ಚಿತ್ರಗಳು ಚಿತ್ರೀಕರಣದಲ್ಲಿವೆ. ಇಂಥ ಸಂದರ್ಭದಲ್ಲಿ ಚಿತ್ರರಂಗವನ್ನು ಸಂಪೂರ್ಣವಾಗಿ ಬಂದ್ ಮಾಡಲು ಸಾಧ್ಯವಿಲ್ಲ. ಚಿತ್ರೋದ್ಯಮ ಕನ್ನಡಪರವಾದ ಯಾವುದೇ ರೀತಿಯ ಹೋರಾಟಗಳಿಗೆ ಜತೆಯಾಗಿರುತ್ತದೆ. ಆದರೆ, ಡಿ. 31ರಂದು ಚಿತ್ರಗಳು ಬಿಡುಗಡೆಗೆ ತಯಾರಿ ಮಾಡಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಸಿನಿಮಾ ಪ್ರದರ್ಶನ ಸೇರಿದಂತೆ ಚಿತ್ರರಂಗದ ಚಟುವಟಿಕೆಗಳನ್ನು ಬಂದ್ ಮಾಡುವುದು ಕಷ್ಟವಾಗುತ್ತದೆ. ಹೋರಾಟಕ್ಕೆ ನೈತಿಕ ಬೆಂಬಲ ಖಂಡಿತ ಇರುತ್ತದೆ’ ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್.ಜೈರಾಜ್ ಹೇಳಿದರು.
'ನಮಗೆ ನೈತಿಕ ಬೆಂಬಲ ಬೇಡ. ಸಂಫೂರ್ಣ ಬೆಂಬಲಕ್ಕೆ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಸಿದರು. ಕನ್ನಡ ಚಿತ್ರರಂಗ ಈ ಹೋರಾಟದ ಜೊತೆ ನಿಲ್ಲಬೇಕು' ಎಂದು ಒತ್ತಾಯಿಸಿದರು.