ಮನೆ ಊಟ ಕೇಳಿದ ನಟನಿಗೆ ಕೋರ್ಟ್ ಖಡಕ್ ಉತ್ತರ: ಮತ್ತೆ ದರ್ಶನ್‌ಗೆ ಜೈಲೂಟವೇ ಫಿಕ್ಸ್!

Aug 1, 2024, 10:31 PM IST

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಅವರಿಗೆ ಜೈಲಿನ ಊಟ ದೇಹಕ್ಕೆ ಒಗ್ಗುತ್ತಿಲ್ಲ. ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ವಾದ-ಪ್ರತಿವಾದ ನಡೆದಿದೆ.ಮನೆ ಊಟ, ಹಾಸಿಗೆ, ಚಮಚವನ್ನು ನೀಡಿ ಎಂದು ದರ್ಶನ್ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಕೋರಿದ್ದರು. ಆದರೆ, ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಇದನ್ನು ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ದರ್ಶನ್ ಅರ್ಜಿ ವಿಚಾರಣೆ  ನಡೆದಿದೆ. 

10 ದಿನಗಳೊಳಗೆ ಜೈಲು ಅಧಿಕಾರಿಗಳು ತೀರ್ಮಾನ ಕೈಗೊಂಡು ಕೋರ್ಟ್ಗೆ ತಿಳಿಸಬೇಕು ಎಂದಿರುವ ಕೋರ್ಟ್ ಆಗಸ್ಟ್ 20ಕ್ಕೆ ವಿಚಾರಣೆ ಮುಂದೂಡಿದೆ. ದರ್ಶನ್‌ಗೆ ಬೆನ್ನು ನೋವಿದೆ, ಜ್ವರ ಇದೆ’ ಎಂದು ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಾಡಿದರು. ‘ಅನಾರೋಗ್ಯ ತುಂಬಾ ಬಿಗಡಾಯಿಸಿದ್ದರೆ ಅದನ್ನು ಜೈಲು ವೈದ್ಯರು ಪರಿಗಣಿಸುತ್ತಾರೆ. ವೈದ್ಯರು ಏನು ಸೂಚಿಸುತ್ತಾರೋ ಅದನ್ನು ಜೈಲಿನಲ್ಲಿ ನೀಡುತ್ತಾರೆ. ಸೆಲೆಬ್ರಿಟಿ ಆದ ಮಾತ್ರಕ್ಕೆ ಬೇರೆ ಆಹಾರ ಕೇಳಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಏಕ ಸದಸ್ಯ ಪೀಠ ಹೇಳಿತು. 

‘ದರ್ಶನ್‌ಗೆ ಪೌಷ್ಟಿಕ ಆಹಾರ ನೀಡಬೇಕೆಂದು ಜೈಲಿನ ವೈದ್ಯಾಧಿಕಾರಿಯೂ ಸಲಹೆ ನೀಡಿದ್ದಾರೆ’ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಉತ್ತರಿಸಿದ ಜಡ್ಜ್ ‘ಸಾವಿರಾರು ವಿಚಾರಣಾಧೀನ ಖೈದಿಗಳಿಗೆ ಪೌಷ್ಟಿಕ ಆಹಾರದ ಅಗತ್ಯ ಇರಬಹುದು. ದರ್ಶನ್ಗೂ ಇತರೆ ವಿಚಾರಣಾಧೀನ ಕೈದಿಗಳಿಗೂ ವ್ಯತ್ಯಾಸವಿಲ್ಲ’ ಎಂದಿದ್ದಾರೆ. ‘ವಿಚಾರಣಾಧೀನ ಖೈದಿಗಳು ಖಾಸಗಿಯಾಗಿ ಆಹಾರ ತರಿಸಿಕೊಳ್ಳಬಹುದು. ಜೈಲು ಅಧಿನಿಯಮ ಸೆಕ್ಷನ್ 30ರ ಅಡಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ಜೈಲು ಕೈಪಿಡಿ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ನಿರಾಕರಿಸಿದೆ. ಜೈಲು ಕೈಪಿಡಿಗೆ ಕಾನೂನಿನ ಬೆಂಬಲವಿಲ್ಲ. ಕೈಪಿಡಿಯಲ್ಲಿರುವುದು ಕೇವಲ ಆಡಳಿತಾತ್ಮಕ ನಿಯಮಗಳಷ್ಟೇ’ ಎಂದು ಪ್ರಭುಲಿಂಗ್ ನಾವದಗಿ ವಾದ ಮಾಡಿದರು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.