
ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್ ನಿರ್ಲಕ್ಷಿಸಿದ್ದಕ್ಕೆ ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದಿದ್ದು, ಬಿಗ್ ಬಾಸ್ ಶೋ ಹಠಾತ್ ಸ್ಥಗಿತಗೊಂಡಿದೆ. ಇದರಿಂದ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಿದ್ದ ಜಾಲಿವುಡ್ನ ಲಾಕ್ ಮಾಡಿ, ಬಿಗ್ ಬಾಸ್ ಶೋ ನಿಲ್ಲಿಸಿರೋದು ಕಿಚ್ಚನ ಫ್ಯಾನ್ಸ್ಗೆ ಬೇಸರ ತಂದಿದೆ. ಸರ್ಕಾರ ಬೇಕಂತಲೇ ಕಿಚ್ಚನ ಶೋಗೆ ಅಡ್ಡಿ ಮಾಡಿದೆ ಅನ್ನೋದು ಅವರ ಅಭಿಮಾನಿಗಳ ಆರೋಪ. ಇನ್ನೂ ದಾಸನ ಫ್ಯಾನ್ಸ್ ಅಂತೂ, ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿ ದಾಸನನ್ನ ಮತ್ತೆ ಜೈಲಿಗೆ ಕಳಿಸಿದ್ದರ ಹಿಂದೆ ರಾಜಕಾರಣಿಗಳ ಪಾತ್ರ ಇದೆ ಅಂತ ಕಿಡಿಕಿಡಿಯಾಗಿದ್ದಾರೆ. ಅಭಿಮಾನಿಗಳ ಸಿಟ್ಟು ಮತ್ತು ನಟ್ಟು ಬೋಲ್ಟಿನ ಕಥೆ ಇಲ್ಲಿದೆ ನೋಡಿ
ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದು ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. ಬಹುಕೋಟಿ ವೆಚ್ಚದ ಶೋ ಹೀಗೆ ಸಡನ್ ಆಗಿ ನಿಂತುಹೋಗಿದ್ದು ಇತಿಹಾಸದಲ್ಲೇ ಮೊದಲು. ಭಾರತದ ಯಾವುದೇ ಭಾಷೆಯ ಶೋನಲ್ಲೂ ಇಂಥಾ ಎಡವಟ್ಟು ಆಗಿರಲಿಲ್ಲ. ಆದ್ರೆ ಕನ್ನಡ ಬಿಗ್ ಬಾಸ್ನ ಈ ಬಿಗ್ ಡ್ರಾಮಾ ದೇಶಾದ್ಯಂತ ಸುದ್ದಿಯಾಗಿದೆ.
ಅಸಲಿಗೆ ಈ ಸಾರಿ ಬಿಗ್ ಬಾಸ್ ನಿರೂಪಣೆ ಮಾಡ್ಲಿಕ್ಕೆ ಕಿಚ್ಚನಿಗೆ ಮನಸ್ಸೇ ಇರಲಿಲ್ಲ. ಸೀಸನ್ -11 ಮುಗಿಯುತ್ತಲೇ ಇದೇ ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಅಂತ ಘೋಷಣೆ ಮಾಡಿಬಿಟ್ಟುದ್ರು. ಆದ್ರೆ ಕಿಚ್ಚನ ಮನವೊಲಿಸಿ ಮತ್ತೆ ಈ ಸೀಸನ್ ನ ಹೋಸ್ಟ್ ಮಾಡಲಾಗಿತ್ತು. ಸುದೀಪ್ರನ್ನ ಒಪ್ಪಿಸಿ, ಒಳ್ಳೆಯ ಕಂಟೆಸ್ಟೆಂಟ್ಗಳನ್ನ ಆಯ್ಕೆ ಮಾಡಿ, 5 ಕೋಟಿ ವೆಚ್ಚದಲ್ಲಿ ಮನೆಯ ಸೆಟ್ ಹಾಕಿ ಶೋ ಆರಂಭ ಮಾಡಿದ್ದ ಬಿಗ್ ಬಾಸ್ ಆಯೋಜಕರು , ಜಾಲಿವುಡ್ನ ತಾಂತ್ರಿಕ ಸಮಸ್ಯೆಗಳ ಬಗ್ಗೆ ಮಾತ್ರ ಗಮನ ಕೊಟ್ಟಿರಲಿಲ್ಲ. ಅಸಲಿಗೆ ಈ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾಲಿವುಡ್ಗೆ ನೋಟೀಸ್ ನೀಡಲಾಗಿತ್ತು. ಅದನ್ನ ನಿರ್ಲಕ್ಷಿಸಿದ ಪರಿಣಾಮ ಜಾಲಿವುಡ್ಗೆ ಬೀಗ ಬಿದ್ದು, ಬಿಗ್ ಬಾಸ್ ಸ್ಥಗಿತವಾಗುವಂತೆ ಆಯ್ತು. ಇದು ದೊಡ್ಡ ಆಕ್ರೋಶಕ್ಕೆ ಕಾರಣ ಆಗಿತ್ತು. ಸದ್ಯ ಇದೇ ಜಿದ್ದು ಇಟ್ಟುಕೊಂಡು ಡಿಕೆಶಿ ಬಿಗ್ ಬಾಸ್ಗೆ ಅಡ್ಡಗಾಲು ಹಾಕಿದ್ದಾರೆ ಅಂತ ಕೆಲ ರಾಜಕೀಯ ನಾಯಕರು ಆರೋಪ ಮಾಡಿದ್ರು. ಆದ್ರೆ ಇದಕ್ಕೆ ಸ್ಪಷ್ಟನೆ ಕೊಟ್ಟ ಡಿಕೆ ಶಿವಕುಮಾರ್, ಬಿಗ್ ಬಾಸ್ಗೆ ಮತ್ತೊಂದು ಅವಕಾಶ ಕೊಡುವಂತೆ ಹೇಳಿದ್ದೀನಿ ಅಂದ್ರು.