Mar 22, 2023, 6:32 PM IST
ಬೆಂಗಳೂರು (ಮಾ.22): ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಚುನಾವಣೆಗೂ ಮುನ್ನ ಟಿಕೆಟ್ಗಾಗಿ ಲಾಭಿ ನಡೆಸುತ್ತಿರುವ ಹಲವು ನಾಯಕರು ಪಕ್ಷಾಂತರ ಆಗುತ್ತಿದ್ದಾರೆ.
ಆದರೆ, ಇನ್ನು ಕೆಲವರು ನಾವು ಪಕ್ಷಾಂತರ ಆಗುತ್ತಿಲ್ಲ. ನಾವು ಮರಳಿ ನಮ್ಮ ಮನೆಗೆ ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ರಾಜ್ಯ ರಾಜಕಾರಣ ದಿನೇ ದಿನೇ ರಂಗೇರುತ್ತಿದೆ. ಹೊಸ ರಾಜಕೀಯ ನಾಯಕರು ಕೂಡ ಹುಟ್ಟಿಕೊಳ್ಳುತ್ತಿದ್ದಾರೆ. ಇನ್ನು ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಅವರು ಬಿಜೆಪಿ ನನ್ನ ತಾಯಿ ಪಕ್ಷವಾಗಿದೆ. ನಾನು ಬಿಜೆಪಿಯಲ್ಲೇ ಮುಂದುವರೆಯುತ್ತೇನೆ. ಒಂ ದು ವೇಳೆ ನಾನು ಬಿಜೆಪಿಯನ್ನು ಬಿಟ್ಟರೆ ನನ್ನ ಹಡೆದ ತಾಯಿಗೆ ಮೋಸ ಮಾಡಿದಂಗೆ ಎಂದು ಹೇಳುತ್ತಿದ್ದರು. ಆದ್ದರಿಂದ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ, ಅಲ್ಲಿಯೇ ಸಾಯುತ್ತೇನೆ ಎಂದು ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಹೇಳಿದ್ದರು. ಆದರೆ, ಅದೇ ವಿಧಾನ ಪರಿಷತ್ ಸದಸ್ಯ ಚಿಂಚನಸೂರು ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಇಂದು ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ.