ಅತಿರಥರ ಅಖಾಡ: ಶಿವಮೊಗ್ಗದಲ್ಲಿ ಹೇಗಿದೆ ಚುನಾವಣಾ ರಣಕಣ?

Mar 23, 2023, 1:03 PM IST

ಶಿವಮೊಗ್ಗ (ಮಾ.23): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತವರೂರಾದ ಶಿವಮೊಗ್ಗದಲ್ಲಿ ಚುನಾವಣಾ ರಣಕಣ ರಂಗೇರಿದೆ. ಒಂದು ಕಾಲದಲ್ಲಿ ಸಮಾಜವಾದಿ ವಿಚಾರಧಾರೆಗೆ ಭದ್ರ ಬುನಾದಿ ಹಾಕಿದ್ದ ಶಿವಮೊಗ್ಗ ಈಗ ಸಂಘಪರಿವಾರದ ಶಕ್ತಿ ಕೇಂದ್ರವಾಗಿದೆ. ಶಾಂತವೇರಿ ಗೋಪಾಲಗೌಡರು, ಜೆ.ಹೆಚ್.ಪಟೇಲರು, ಬಂಗಾರಪ್ಪ, ಕಾಗೋಡು ತಿಮ್ಮಪ್ಪರಂತಹ ಸಮಾಜವಾದಿ ನೆಲೆಗಟ್ಟಿನ ರಾಜಕಾರಣಿಗಳಿಗೆ ಒಂದು ನೆಲೆಯನ್ನು ಒದಗಿಸಿ ಕೊಟ್ಟಿತ್ತು ಶಿವಮೊಗ್ಗ. ಆದರೆ 1988-89ರ ನಂತರ ಶಿವಮೊಗ್ಗ ಹಿಂದುತ್ವದ ಪ್ರಯೋಗ ಶಾಲೆಯಾಗಿ ಪರಿವರ್ತನೆಯಾಯಿತು. ಒಂದು ಕಡೆ ಯಡಿಯೂರಪ್ಪನವರ ಸತತ ರೈತಪರ ಹೋರಾಟಗಳು ಇನ್ನೊಂದು ಕಡೆ ಹಿಂದುಳಿದ ವರ್ಗದಿಂದ ಬಂದ ಹಿಂದುತ್ವದ ನಾಯಕನಾಗಿ ಈಶ್ವರಪ್ಪನವರು ಮತ್ತು ಸಂಘಪರಿವಾರದ ಸತತ ಚಟುವಟಿಕೆಗಳ ಕಾರಣದಿಂದ ಶಿವಮೊಗ್ಗ ಹಿಂದುತ್ವದ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಈಶ್ವರಪ್ಪನವರು ಮೊದಲಬಾರಿಗೆ ಶಿವಮೊಗ್ಗದಲ್ಲಿ ಗೆದಿದ್ದು, 1989ರಲ್ಲಿ. ಅಲ್ಲಿಯವರೆಗೂ ಶಿವಮೊಗ್ಗ ನಗರ ಒಂದು ರೀತಿ ಬಂಗಾರಪ್ಪನವರ ಕಾರಣದಿಂದ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು.