ರಾಜಧಾನಿ ಬೆಂಗಳೂರಲ್ಲಿ ಮೊದಲ ಬಾರಿಗೆ ಕಂಬಳ: ಇಂದು, ನಾಳೆ ‘ಬೆಂಗಳೂರು ಕಂಬಳ’ದ ಸಂಭ್ರಮ

Nov 25, 2023, 10:18 AM IST

ಕಂಬಳ..ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ. ಕರಾವಳಿಗರ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗ. ಕೋಣಗಳ ಜೊತೆಗೆ ಕಂಬಳದ ಅಖಾಡಕ್ಕೆ ಧುಮುಕುವ ಮಾಲೀಕ ಗೆದ್ದು ಬೀಗಬೇಕೆಂಬ ಛಲದೊಂದಿಗೆ ಮಿಂಚಿನ ಓಟ ಓಡುತ್ತಿದ್ದರೆ, ನೋಡುಗರ ಮೈ-ಮನ ರೋಮಾಂಚನಗೊಳ್ಳುತ್ತದೆ. ಇಂಥ ಐತಿಹಾಸಿಕ ಕಂಬಳ ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಲ್ಲಿ(Bengaluru) ನಡೆಯುತ್ತಿದೆ. ಇಂದು ಮತ್ತು ನಾಳೆ ಪ್ಯಾಲೇಸ್ ಗ್ರೌಂಡ್ನಲ್ಲಿ ಅದ್ದೂರಿ ಕಂಬಳಾಚರಣೆ ನಡೆಯಲಿದೆ. ಮೊದಲ ಬಾರಿಗೆ ನಡೆಯುತ್ತಿರುವ ಕಂಬಳಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರಮನೆ ಮೈದಾನದಲ್ಲಿ ತುಳುನಾಡಿನ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ. ಈಗಾಗಲೇ ಕಂಬಳದ ಕೋಣಗಳು, ಮಾಲೀಕರ ಜೊತೆಗೆ ರಾಜಧಾನಿಯನ್ನ ತಲುಪಿವೆ. ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೃಹತ್ ಕಂಬಳ(Kambala) ಕರೆಗೆ ಇಂದು ಬೆಳಗ್ಗೆ 10:30ಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಚಾಲನೆ ನೀಡಲಿದ್ದಾರೆ. ಬಳಿಕ ಕಂಬಳದ ಓಟ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ಹಲವು ನಟ-ನಟಿಯರು ಭೇಟಿ ನೀಡಲಿದ್ದು, ಸಂಜೆ ನಡೆಯುವ ಕಂಬಳದ ಸ್ಪರ್ಧೆಗೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಾಕ್ಷಿಯಾಗಲಿದ್ದಾರೆ. 55 ಎಕರೆಗೂ ಅಧಿಕ ವಿಸ್ತೀರ್ಣವಿರುವ ಪ್ಯಾಲೇಸ್ ಮೈದಾನದಲ್ಲಿ ಕಂಬಳದ ಕೋಣಗಳ ಓಟಕ್ಕೆ 155 ಮೀಟರ್ ಅಗಲದ ಕರೆ ನಿರ್ಮಾಣವಾಗಿದ್ದು, ಈ ಜೋಡು ಕರೆಗೆ ರಾಜ, ಮಹಾರಾಜ ಅಂತಾ ಹೆಸರಿಡಲಾಗಿದೆ. ನೂರಕ್ಕೂ ಅಧಿಕ ಸ್ಟಾಲ್‌ಗಳನ್ನ ಹಾಕಲಾಗಿದ್ದು, ಕರಾವಳಿಯ ವಿವಿಧ ಬಗೆಯ ಖಾದ್ಯಗಳನ್ನ ಉಣಬಡಿಸೋಕೆ ಸಿದ್ಧತೆ ನಡೆದಿದೆ. ಇನ್ನು ಕಂಬಳದ ಗ್ಯಾಲರಿಯಲ್ಲಿ ಸುಮಾರು 8 ಸಾವಿರ ವಿಐಪಿ ಆಸನಗಳ ವ್ಯವಸ್ಥೆ ಇದ್ದು, ಜನಸಾಮಾನ್ಯರಿಗೆ ಪ್ರತೇಕ ವ್ಯವಸ್ಥೆ ಮಾಡಲಾಗಿದೆ. ಕಂಬಳದ ಭಾಗವಹಿಸುವ ಕೋಣಗಳ ಆರೋಗ್ಯದತ್ತಲ್ಲೂ ವಿಶೇಷ ಕಾಳಜಿ ವಹಿಸಲಾಗಿದೆ. ಕೋಣಗಳ ಆರೋಗ್ಯದಲ್ಲಿ ವ್ಯತ್ಯಯ ಆಗದಂತೆ ಮಂಗಳೂರಿನಿಂದಲೇ ತಂದಿರುವ ನೀರು,ಆಹಾರ  ನೀಡಲಾಗುತ್ತಿದೆ. 

ಇದನ್ನೂ ವೀಕ್ಷಿಸಿ:  ತವರಿಗೆ ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ: ಸಿಎಂ, ಗವರ್ನರ್ ಸೇರಿ ಗಣ್ಯರಿಂದ ಅಂತಿಮ ಗೌರವ