ಎಡಮಂಗಲ: ದೈವ ನರ್ತನದ ವೇಳೆ ಕುಸಿದು ಬಿದ್ದು ಹಿರಿಯ ದೈವನರ್ತಕ‌ ಸಾವು

Mar 30, 2023, 5:58 PM IST

ಕಡಬ: ದೈವದ ನರ್ತನ ಸೇವೆ ಮಾಡುತ್ತಿದ್ದಾಗಲೇ ದೈವ ನರ್ತಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ.  ದೈವ ನರ್ತನಕ್ಕೆ ಖ್ಯಾತಿ ಗಳಿಸಿದ್ದ 55 ವರ್ಷ ಪ್ರಾಯದ ಕಾಂತು ಅಜಿಲ ಹೀಗೆ ದೈವದ ಆರಾಧನೆಯಲ್ಲಿರುವಾಗಲೇ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದವರು. ಇವರು ಎಡಮಂಗಲ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಗ್ರಾಮ ದೈವಗಳ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಇವರು ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ. ಗ್ರಾಮದ ಇಡ್ಯಡ್ಕದಲ್ಲಿ  ನೇಮೋತ್ಸವದ ವೇಳೆ ದೈವ ನರ್ತನ ಮಾಡುತ್ತಿದ್ದಾಗ ಘಟನೆ ನಡೆದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ. ಘಟನೆ ನಡೆಯುವ ವೇಳೆ ಅವರು ಶಿರಾಡಿ ದೈವದ ನರ್ತನ ಸೇವೆ ನಡೆಸಿಕೊಡುತ್ತಿದ್ದರು. ಇವರ ಜೊತೆಗೆ ಕಲ್ಕುಡ ದೈವದ ಪಾತ್ರಿಯೂ ನರ್ತಿಸುತ್ತಿದ್ದರು.  ಹೃದಯಾಘಾತಕ್ಕೊಳಗಾಗಿ ಕಾಂತು ಅಜಿಲ ಸಾವನ್ನಪ್ಪಿದ್ದಾರೆ ಎಂದು ಅವರನ್ನು ತಪಾಸಣೆ ನಡೆಸಿದ ವೈದ್ಯರು ಹೇಳಿದ್ದಾರೆ.