ಪ್ರವೀಣ್ ಕೊಲೆ ಪ್ರಕರಣ: ತನಿಖೆ ಮತ್ತಷ್ಟು ಚುರುಕು, ದೊಡ್ಡ ದೊಡ್ಡ ಕುಳಗಳಿಗೆ ಎನ್‌ಐಎ ಖೆಡ್ಡಾ!

Aug 12, 2022, 10:07 AM IST

ಬೆಂಗಳೂರು (ಆ.12): ಹಿಂದೂ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ತನಿಖೆಯನ್ನು ಇನ್ನಷ್ಟು ಚುರುಕು ಮಾಡಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಕೆಲವವರ ಮೇಲೆ ಎನ್‌ಐಎ ಕೆಂಗಣ್ಣು ಬಿಟ್ಟಿದೆ. ಪ್ರವೀಣ್‌ ಹತ್ಯೆ ಹಿಂದೆ ದೊಡ್ಡ ಕೈಗಳಿರುವ ಬಗ್ಗೆ ಸಾಕ್ಷಿ ಸಂಗ್ರಹ ಮಾಡಲಾಗುತ್ತಿದೆ.

ಪ್ರವೀಣ್‌ ಹಂತಕರಿಗೆ ಹಣ ಎಲ್ಲಿಂದ ಬಂತು ಎನ್ನುವ ಮಾಹಿತಿಯನ್ನು ಎನ್‌ಐಎ  ಕಲೆಹಾಕುತ್ತಿದೆ. ದೊಡ್ಡ ದೊಡ್ಡ ಕುಳಗಳನ್ನು ಖೆಡ್ಡಾಗೆ ಕೆಡವೋದಕ್ಕೆ ಸಜ್ಜಾಗಿದೆ. ಈಗ ಸಿಕ್ಕಿರೋದು ಪ್ರವೀಣ್‌ ಹತ್ಯೆ ಮಾಡಿದ್ದ ನೇರ ಆರೋಪಿಗಳು. ಆದರೆ, ಇವರಿಗೆ ಬೆಂಬಲ ನೀಡಿದ ದೊಡ್ಡ ದೊಡ್ಡ ಕುಳಗಳ ಮೇಲೆ ಎನ್‌ಐಎ ಕಣ್ಣಿಟ್ಟಿದೆ. ಎಸ್‌ಡಿಪಿಐ ಹಾಗೂ ಪಿಎಫ್‌ಐನ ನಾಯಕರ ಮೇಲೆ ಎನ್‌ಐಎ ಅನುಮಾನ ಆರಂಭವಾಗಿದ್ದು, ಈ ಹತ್ಯೆಗೂ ಹಾಗೂ ಅವರಿಗೂ ಇರುವ ಲಿಂಕ್‌ನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಜಂಟಿ ಆಕ್ಷನ್‌ ಟೀಮ್‌ ರಚನೆ, ವಿಧಾನಸಭೆ ಚುನಾವಣೆಗೂ ಮುನ್ನ ಪಿಎಫ್‌ಐ ಬ್ಯಾನ್‌?

ಕರ್ನಾಟಕ ಪೊಲೀಸರ ಕೆಲಸ ಮುಗಿಯುತ್ತಿದ್ದಂತೆ, ಎನ್‌ಐಎ ಕೆಲಸ ಆರಂಭವಾಗಿದೆ. ಪ್ರವೀಣ್‌ ಹತ್ಯೆಯಾದ ಮೂರೇ ದಿನಕ್ಕೆ ಬೆಳ್ಳಾರೆಗೆ ಎನ್‌ಐಎ ಪ್ರವೇಶ ಪಡೆದಿತ್ತು. ರಾಜ್ಯ ಪೊಲೀಸರ ಮಾಹಿತಿಯ ಜೊತೆಗೆ ಸ್ವತಂತ್ರ ತನಿಖೆಯನ್ನೂ ನಡೆಸಿದ್ದು, ದೊಡ್ಡ ದೊಡ್ಡ ನಾಯಕರ ಲಿಂಕ್‌ಅನ್ನು ಪರಿಶೀಲಿಸಲು ಆರಂಭಿಸಿದೆ.