
ದೃಶ್ಯ ಕನ್ನಡದ ಕ್ರೈಂ ಥ್ರಿಲ್ಲರ್ ಚಿತ್ರ. ಈ ಚಿತ್ರವನ್ನೇ ನೆನಪಿಸೋ ಕೊಲೆವೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ. ತಂದೆ ಮಗನನ್ನ ಕೊಂದು ಹೂತು ಹಾಕಿದ್ದಾನೆ. ಆತನ ಸಾವಿನ ಬಳಿಕ ಈ ಮರ್ಡರ್ ಮಿಸ್ಟ್ರಿ ಬಯಲಾಗಿದೆ. ಮೃತ ಗಂಗಾಧರ್ ಹತ್ತು ದಿನಗಳ ಹಿಂದೆ ಮೃತಪಡುತ್ತಿದ್ದಂತೆ ಸಂಬಂಧಿಕರು ಹಿರಿಯ ಮಗ ರಘುನನ್ನ ಅಂತ್ಯಸಂಸ್ಕಾರಕ್ಕೆ ಕರೆಸುವಂತೆ ಸಂಬಂಧಿಕರು ಒತ್ತಾಯಿಸಿದ್ರು. ತಮ್ಮ ರೂಪೇಶ್ ಅಣ್ಣನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಅಂತ ಹೇಳಿ ಬೇರೆ ನಂಬರ್ ಕೊಟ್ಟಿದ್ದ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಸಂಬಂಧಿಕರು ಹಾಲು ಬಿಡೋ 3ನೇ ದಿನಕ್ಕಾದ್ರೂ ರಘನನ್ನು ಕರೆಸಲೇಬೇಕೆಂದು ರೂಪೇಶ್ಗೆ ಒತ್ತಡ ಹಾಕಿದ್ದಾರೆ. ಆಗ ರೂಪೇಶ್ ಬೇರೆ ದಾರಿಯಿಲ್ಲದೇ ಸತ್ಯ ಬಾಯ್ಬಿಟ್ಟಿದ್ದಾನೆ. ರಘು ನಾಪತ್ತೆ ಆಗಿಲ್ಲ. ಆಗಸ್ಟ್ 14, 2023 ರಂದು ತಂದೆನೇ ಅಣ್ಣನನ್ನ ಕೊಲೆ ಮಾಡಿದ್ದಾರೆ ಎಂದು ರೂಪೇಶ್ ಹೇಳಿದ್ದಾನೆ. 32 ವರ್ಷದ ಮೃತ ರಘುಗೆ ಮದುವೆ ಆಗಿದ್ದು 5 ವರ್ಷದ ಮಗುವಿದೆ. ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ. ಕುಡಿತದ ಚಟಕ್ಕೆ ಬಿದ್ದ ರಘು ತಂದೆಗೆ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ತಂದೆ ಮಗನನ್ನ ಕೊಲೆ ಮಾಡಿದ್ದಾರೆ. ಈ ಸುದ್ದಿ ಯಾರಿಗೂ ಗೊತ್ತಾಗಬಾರದು ಅಂತ ತನ್ನ ಮನೆಯ ಹಿಂಭಾಗದಲ್ಲಿ ಇರುವ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದಾನೆ. ಕಿರಿಯ ಮಗ ರೂಪೇಶ್ಗೆ ಈ ವಿಚಾರ ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈ ಸುದ್ದಿಯನ್ನ ಯಾರ ಬಳಿಯೂ ಹೇಳಿಲ್ಲ ಅಂತ ಸ್ವಲ್ಪ ಬುದ್ಧಿಮಾಂದ್ಯನಾದ ರೂಪೇಶ್ ಸಂಬಂಧಿಕರ ಬಳಿ ಹೇಳಿಕೊಂಡಿದ್ದಾನೆ.