
ಧಾರಾವಾಹಿ ಎನ್ನುವುದು ಜನರ ಜೀವನದ ಒಂದು ಭಾಗವೇ ಆಗಿ 2-3 ದಶಕಗಳೇ ಕಳೆದು ಹೋಗಿವೆ. ಇದೇ ಕಾರಣಕ್ಕೆ ಬೇರೆ ಬೇರೆ ವಾಹಿನಿಗಳ ನಡುವೆ ಸೀರಿಯಲ್ಗಳಲ್ಲಿ ಇಂದು ಭಾರಿ ಪೈಪೋಟಿಯೇ ಏರ್ಪಟ್ಟಿದೆ. ಸಾಮಾನ್ಯವಾಗಿ ಎಲ್ಲವೂ ಒಂದೇ ಟೈಮಿಂಗ್ಸ್ನಲ್ಲಿ ಬರುವ ಕಾರಣಕ್ಕೆ, ತಮ್ಮದೇ ವಾಹಿನಿಯ ಸೀರಿಯಲ್ ನೋಡುವಂತೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ವೀಕ್ಷಕರ ಮನಕ್ಕೆ ತಟ್ಟುವಂತೆ, ನಾವು ಈ ಸೀರಿಯಲ್ ಏನೇ ಆದರೂ ನೋಡಲೇಬೇಕು ಎಂದು ಎನ್ನಿಸುವುದಕ್ಕೆ ಮುಖ್ಯ ಕಾರಣವಾಗುವುದು ಆ ಸೀರಿಯಲ್ಗಳ ಪ್ರೊಮೋ (Serials Promo) ಅದರಲ್ಲಿಯೂ ಸೋಷಿಯಲ್ ಮೀಡಿಯಾದ ಜಮಾನಾ ಆಗಿರುವ ಈ ದಿನಗಳಲ್ಲಿ ಪ್ರೊಮೋಗಳಿಗೇ ಹೆಚ್ಚು ಡಿಮಾಂಡ್. ಅದರಲ್ಲಿ ಪೋಸ್ಟ್ ಮಾಡುವ ಪ್ರೊಮೋಗಳನ್ನು ನೋಡಿಯೇ ನಾವು ಇಂದು ಈ ಸೀರಿಯಲ್ ನೋಡಲೇಬೇಕು ಎಂದು ಎಷ್ಟೋ ಮಂದಿ ಅಂದುಕೊಳ್ಳುವುದು ಇದೆ. ಇದಕ್ಕೆ ಜೀವ ತುಂಬುವುದೇ ಪ್ರೊಮೋಗಳ ಆ ದನಿ.
ಇಂದು ಈ ಸೀರಿಯಲ್ ಸ್ಟೋರಿ ಹೀಗಿದೆ ಎಂದು ರೋಚಕವಾಗಿ ಹೇಳುವ, ಇವತ್ತು ಏನೇ ಆದರೂ ಇದನ್ನು ನೋಡಿಯೇ ತೀರಬೇಕು ಎಂದು ಆ ಪ್ರೊಮೋ ನೋಡಿದ ಜನರ ಮನಸ್ಸಿನಲ್ಲಿ ಬೇರೂರುವಂತೆ ಮಾಡುವ ಜೀ ಕನ್ನಡದ ಬಹುತೇಕ ಎಲ್ಲಾ ಸೀರಿಯಲ್ಗಳ ಪ್ರೊಮೋಗಳ ದನಿಯಾಗಿರುವುದು ವಾಯ್ಸ್ ಓವರ್ ಆರ್ಟಿಸ್ಟ್ ಚೇತನ್ ಸೊಲಗಿ (Chetan Solagi). ಕಳೆದ ಏಳು ವರ್ಷಗಳಿಂದ ಇವರು ಜೀ ಕನ್ನಡದ ಎಲ್ಲಾ ಸೀರಿಯಲ್ಗಳ ಪ್ರೊಮೋಗಳಿಗೆ ಹಿನ್ನೆಲೆ ದನಿ ನೀಡಿ, ಆ ದನಿಯ ಮೂಲಕವೇ ಸೀರಿಯಲ್ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ.
ಜೀ ಕನ್ನಡದಲ್ಲಿ ಬರುವ ಅಮೃತಧಾರೆ, ಕರ್ಣ, ಶ್ರಾವಣಿ ಸುಬ್ರಮಣ್ಯ, ಪುಟ್ಟಕ್ಕನ ಮಕ್ಕಳು, ನಾ ನಿನ್ನ ಬಿಡಲಾರೆ ಕೆಲ ತಿಂಗಳ ಹಿಂದೆ ಮುಗಿದ ಸೀತಾರಾಮ ಸೇರಿದಂತೆ ಎಲ್ಲಾ ಸೀರಿಯಲ್ಗಳ ಪ್ರೊಮೋದಲ್ಲಿ ಇವರದ್ದೇ ದನಿ ಇದೆ. ಮಾತ್ರವಲ್ಲದೇ ಪುನೀತ್ ರಾಜ್ಕುಮಾರ್ ಅವರು ತಯಾರಿಸಿದ ಕಿರುಚಿತ್ರದ ಪ್ರಸಾರದ ಕುರಿತು, ನಟ ರಿಷಬ್ ಶೆಟ್ಟಿ ಅವರು ಜೀ ಕನ್ನಡ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ... ಎಲ್ಲ ಪ್ರೊಮೋಗಳೂ ಇವರ ದನಿಯಲ್ಲಿಯೇ ಬಂದಿರುವುದು.
ಇದೀಗ ಜೀ ಕನ್ನಡ ಕುಟುಂಬಕ್ಕೆ ಸೇರಿ ಏಳು ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ಚಿಕ್ಕದೊಂದು ವಿಡಿಯೋ ಮಾಡುವ ಮೂಲಕ ತಮ್ಮ ಪಯಣದ ಕುರಿತು ಚೇತನ್ ಅವರು ಬರೆದುಕೊಂಡಿದ್ದಾರೆ. ಹೆಮ್ಮೆಯ ವಾಹಿನಿ ಜೀ಼ ಕನ್ನಡಕ್ಕೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ 7 ವರ್ಷಗಳಾಗುತ್ತಾ ಬಂತು. ಧ್ವನಿ ಹೆಂಗೆಂಗೋ ಮಾಡ್ತಾನೆ ಅಂತ ಬೈಸಿಕೊಂಡದ್ದು ಇದೆ. ನಿಮ್ಮ ಸ್ಪಷ್ಟ ಕನ್ನಡ... ಚೆಂದದ ಧ್ವನಿಯನ್ನ ದಿನ ಕೇಳೋದೆ ಖುಷಿ ಅನ್ನುವ ಮೆಚ್ಚುಗೆ ಮಾತು ಕೇಳಿದ್ದೂ ಇದೆ! ಚಿಕ್ಕಂದಿನಲ್ಲಿ ಟಿವಿ ವಾಲ್ಯೂಂ ಒಂದೆರಡು ಪಾಯಿಂಟ್ ಜಾಸ್ತಿ ಕೊಟ್ಟರೂ, ಅಡುಗೆ ಮನೆಯಿಂದಲೇ ಬೈಕೊಂಡು ಬರುತ್ತಿದ್ದ ಅಮ್ಮ.. ಮುಂದೆ ಆ್ಯಡ್ ಬಂದಾಗಲೂ ಮಗನ ಧ್ವನಿ ಕೇಳಬೇಕೆಂದು ಮ್ಯೂಟ್ ಕೂಡ ಮಾಡದೇ ಟಿವಿ ಕಡೆ ಗಮನ ಕೊಡುತ್ತಿದ್ದುದು 'ವಾಯ್ಸ್ ಓವರ್' ನನಗೆ ಕೊಟ್ಟ ಬಹು ದೊಡ್ಡ ಕೊಡುಗೆ. ಚಿಕ್ಕಂದಿನಲ್ಲಿ ಟಿವಿ ವಾಲ್ಯೂಂ ಒಂದೆರಡು ಪಾಯಿಂಟ್ ಜಾಸ್ತಿ ಕೊಟ್ಟರೂ, ಅಡುಗೆ ಮನೆಯಿಂದಲೇ ಬೈಕೊಂಡು ಬರುತ್ತಿದ್ದ ಅಮ್ಮ.. ಮುಂದೆ ಆ್ಯಡ್ ಬಂದಾಗಲೂ ಮಗನ ಧ್ವನಿ ಕೇಳಬೇಕೆಂದು ಮ್ಯೂಟ್ ಕೂಡ ಮಾಡದೇ ಟಿವಿ ಕಡೆ ಗಮನ ಕೊಡುತ್ತಿದ್ದುದು 'ವಾಯ್ಸ್ ಓವರ್' ನನಗೆ ಕೊಟ್ಟ ಬಹು ದೊಡ್ಡ ಕೊಡುಗೆ. ಟಿವಿಲಿ ಧ್ವನಿ ಕೇಳಿ 'ನೆಗಡಿ ಆಗೇತಿ ಹೇಳೇ ಇಲ್ಲ' ಅಂತ ಅಮ್ಮ-ಅಪ್ಪಾಜಿ ಗುರುತಿಸಿ ಕೇಳಿದ್ದೂ ಇದೆ! ಇದೊಂಥರ ಖುಷಿ ಕೊಡುವ ಕೆಲಸ ಎಂದು ಅವರು ಬರೆದುಕೊಂಡಿದ್ದಾರೆ.
ಅಂದಹಾಗೆ ಚೇತನ್ ಸೊಲಗಿ ಅವರದ್ದು ಸಾಹಿತ್ಯ ಕುಟುಂಬ. ಚೇತನ್ ಅವರು ಗದಗ ಜಿಲ್ಲೆಯ ಮುಂಡರಗಿಯವರು. ಚಿಕ್ಕಂದಿನಿಂದ ಹಾಡು, ನಾಟಕದಲ್ಲಿ ಆಸಕ್ತಿ. ಧರ್ಮಸ್ಥಳದ ಉಜಿರೆ ಕಾಲೇಜಿನಲ್ಲಿ ಮಾಸ್ ಕಮ್ಯುನಿಕೇಷನ್ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಅವರು, ಕಾಲೇಜು ದಿನಗಳಲ್ಲಿಯೇ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. ಆಗಲೇ ಕಿರುಚಿತ್ರಗಳಿಗೆ ಹಿನ್ನೆಲೆ ದನಿಯಾದವರು ಜೊತೆಗೆ ಎಫ್ಎಂನಲ್ಲೂ ಧ್ವನಿ ನೀಡಿದ್ದರು. ಕೊನೆಗೆ ಬೆಂಗಳೂರಿಗೆ ಬಂದ ಅವರು ಜೀ ಕನ್ನಡದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿ ಸದ್ಯ ವಾಯ್ಸ್ ಆರ್ಟಿಸ್ಟ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.