Latest Videos

ತುಳಸಿಯ ಮನಮೋಹಕ ನೃತ್ಯಕ್ಕೆ ಮನಸೋತ ಫ್ಯಾನ್ಸ್​: ಸೊಸೆಯ ಕಾಲಿಗೇ ಬಿದ್ದ ಕ್ಷಣಕ್ಕೆ ನೆಟ್ಟಿಗರು ಭಾವುಕ

By Suchethana DFirst Published Jun 15, 2024, 1:24 PM IST
Highlights

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ತುಳಸಿಯ ಭರತನಾಟ್ಯ ನೋಡಿ ನೆಟ್ಟಿಗರು ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಅವರು ಹೇಳ್ತಿರೋದೇನು?
 

ಗುರು ಎಂದರೆ ಅವರು ಗುರುವಷ್ಟೇ. ವಯಸ್ಸಿನ ಭೇದವಿಲ್ಲ. ಗುರುಗಳು ಎನ್ನಿಸಿಕೊಂಡವರು ಚಿಕ್ಕವರಾದರೂ ಅವರ ಸ್ಥಾನಕ್ಕೆ ಮರ್ಯಾದೆ ಕೊಡುವುದು ನಮ್ಮ ಪರಂಪರೆ.  ಸ್ವಾಮಿಗಳಲ್ಲಿಯೂ ಇಂಥದ್ದೊಂದು ಸಂಪ್ರದಾಯ ನೋಡಬಹುದು. ಖುದ್ದು ಅಪ್ಪನೇ ಮಗನ ಕಾಲಿಗೆ ಬೀಳುತ್ತಾರೆ. ಇದೀಗ ಇದೇ ಗುರುಪರಂಪರೆಯ ಭಾವುಕ ಕ್ಷಣಕ್ಕೆ ಶ್ರೀರಸ್ತು ಶುಭಮಸ್ತು ಸೀರಿಯಲ್​ ಸಾಕ್ಷಿಯಾಗಿದೆ. ಇಲ್ಲಿ ನಾಯಕಿ ತುಳಸಿ. ಮನೆಯಲ್ಲಿ ಎಲ್ಲರನ್ನೂ ಪ್ರೀತಿ ಮಾಡುತ್ತಿದ್ದರೂ ಕೆಲವರಿಗೆ ಇವಳನ್ನು ಕಂಡರೆ ತಾತ್ಸಾರ. ಆದರೆ ಎಲ್ಲರ ಪ್ರೀತಿ ಗಳಿಸಲು ಅದರಲ್ಲಿಯೂ ಮುಖ್ಯವಾಗಿ ಪತಿ ಮಾಧವ್​ಗೆ ಮೊದಲ ಪತ್ನಿಯಿಂದ ಹುಟ್ಟಿದ ಮಗ ಅಭಿಯ ಪ್ರೀತಿ ಗಳಿಸಲು ವಾಹನ ಚಲಾಯಿಸುವುದನ್ನು ಕಲಿತಳು, ಸಾಲದು ಎನ್ನುವುದಕ್ಕೆ ಭರತನಾಟ್ಯವನ್ನೂ ಕಲಿತಳು. ಇವರ ಕಂಪೆನಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಲ್ಲರ ಊಹೆಗೂ ನಿಲುಕದಂತೆ ನೃತ್ಯ ಪ್ರದರ್ಶನ ಮಾಡುವ ಮೂಲಕ ಖುದ್ದು ಅಭಿಯ ಕಣ್ಣಲ್ಲೂ ನೀರು ತರಿಸಿದಳು.

ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಎರಡು ಕಾರಣಕ್ಕೆ ನೆಟ್ಟಿಗರು ಭಾವುಕರಾಗಿದ್ದಾರೆ. ಮೊದಲನೆಯದಾಗಿ ತುಳಸಿಯ ನೃತ್ಯ ನೋಡಿ. ಇನ್ನೊಂದು ಇಲ್ಲಿ ತುಳಸಿ ತನ್ನ ಸೊಸೆ ಅಂದರೆ ಪೂರ್ಣಿಯ ಕಾಲಿಗೆ ಬಿದ್ದ ಕ್ಷಣಕ್ಕಾಗಿ ನೆಟ್ಟಿಗರು ಭಾವುಕರಾಗಿದ್ದಾರೆ. ಏಕೆಂದರೆ ತುಳಸಿಗೆ ಇಲ್ಲಿ ನೃತ್ಯಗುರು ಸೊಸೆ ಪೂರ್ಣಿ. ಆಕೆಯ ಕಾಲಿಗೆ ಬಿದ್ದಾಗ ಅಮ್ಮಾ ಇದೇನಿದು ಎಂದು ಕೇಳುತ್ತಾಳೆ ಪೂರ್ಣಿ. ಆಗ ನೀನು ನನ್ನ ಗುರು ಎಂಬ ಮಾತಿಗೆ ಎಲ್ಲರೂ ತಲೆದೂಗಿದ್ದಾರೆ. ಪೂರ್ಣಿ ಮತ್ತು ತುಳಸಿಯ ನೃತ್ಯಕ್ಕೂ ಭೇಷ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ತುಳಸಿ ನೃತ್ಯ ಕಲಿಯಲು ಕಾರಣ ಅಭಿಯ ಮಾತು. ಅಭಿ ತನ್ನ ಹೆತ್ತಮ್ಮ ಸುಮತಿ ಬಗ್ಗೆ ಮಾತನಾಡುತ್ತಾ, ಅವರು ಡ್ರೈವಿಂಗ್​ ಮಾಡುತ್ತಿದ್ದರು, ನೃತ್ಯ ಮಾಡುತ್ತಿದ್ದರು ನಿಮಗೇನು ಬರುತ್ತದೆ ಎಂದು ಹೀಯಾಳಿಸಿರುತ್ತಾನೆ. ಅದಕ್ಕಾಗಿ ಆತನ ಪ್ರೀತಿ ಪಡೆಯಲು ತುಳಸಿ ಎಲ್ಲವನ್ನೂ ಮಾಡುತ್ತಾಳೆ. ಕೊನೆಗೆ ತಾನು ನೃತ್ಯ ಕಲಿಯಲು ಸುಮತಿಯೇ ಪ್ರೇರಣೆ ಎನ್ನುತ್ತಾಳೆ. ಇದನ್ನು ನೋಡಿಯಾದರೂ ಅಭಿ ಬದಲಾಗಲಿ ಎನ್ನುವುದು ಸೀರಿಯಲ್​ ಪ್ರೇಮಿಗಳ ಮಾತು. 

ನಾನು ಮಾಡುವ ಡ್ಯಾನ್ಸ್​ ಯಾವುದು ಅಂತ ಗೆಸ್​ ಮಾಡ್ತೀರಾ? ಚಾಲೆಂಜ್​ ಕೊಟ್ಟ ಸೀತಾರಾಮ ಸಿಹಿ

ಅಷ್ಟಕ್ಕೂ ತುಳಸಿ ಪಾತ್ರಧಾರಿ ಸುಧಾರಾಣಿ ಅವರು ಖುದ್ದು ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆಯೂ ಹೌದು.    54 ವರ್ಷದ ಸುಧಾರಾಣಿ  ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ.   'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿರುವ ಇವರು  ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ. ತಮ್ಮ 13ನೇ ವಯಸ್ಸಿನಲ್ಲೇ  ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ  ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ  'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.

ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು.   2001ರಲ್ಲಿ ಜನಿಸಿದ ಪುತ್ರಿ  ನಿಧಿ ಜನಿಸಿದ್ದು, ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ಸಂಗೀತ, ನೃತ್ಯದಲ್ಲಿ ಪ್ರವೀಣೇಯಾಗಿದ್ದಾರೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಸುಧಾರಾಣಿಯವರ ನೃತ್ಯವನ್ನು ನೋಡುವ ಕಾತರದಲ್ಲಿದ್ದರು ಪ್ರೇಕ್ಷಕರು. ಇದೀಗ ನೃತ್ಯದ ಸುಧೆಯನ್ನು ಹರಿಸಿದ್ದಾರೆ.  

ರೇಪಿಸ್ಟ್ ಎನ್‌ಕೌಂಟರ್‌ಗೆ ಮುಂದಾದ 'ಸತ್ಯ', ಕಿಲ್ಲಿಂಗ್ ಸ್ಟಾರ್ ಕೇಸೂ ಇವ್ಳಿಗೇ ಕೊಡಿ ಅಂತಿರೋ ವೀಕ್ಷಕರು!

click me!