
ವೃತ್ತಿವೈಷಮ್ಯ ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಾಮೂಲು. ಅದೇ ರೀತಿ ನೀನು ಮಾಡಿದ್ದು ಸರಿಯಲ್ಲ, ನಾನು ಮಾಡಿದ್ದು ಸರಿ ಎಂದೋ, ಅದು ಹೀಗಲ್ಲ, ಇದು ಹೀಗೆ ಎಂದೋ, ನಿನಗಿಂತ ಚೆನ್ನಾಗಿ ನನಗೇ ಗೊತ್ತು ಎಂದೋ, ಏನೂ ಮಾಡದಿದ್ದರೂ ಅವರಿಗೆ ಕ್ರೆಡಿಟ್ ಸಿಕ್ತಾ ಇದೆಯಲ್ಲಾ ಎಂದೋ... ಹೀಗೆ ಒಂದೇ ವೃತ್ತಿಯಲ್ಲಿ ಇರುವಾಗ ಇವೆಲ್ಲವೂ ಮಾಮೂಲು. ಅದರಲ್ಲಿಯೂ ಕಲಾಕ್ಷೇತ್ರಗಳಲ್ಲಿ ವೃತ್ತಿ ವೈಷಮ್ಯ ಎನ್ನುವುದು ಇದ್ದೇ ಇದೆ. ಕೆಲವೊಮ್ಮೆ ಕಲಾವಿದರು ನಿಜ ನುಡಿದರೂ, ಅದನ್ನು ಸಹಿಸದ ವರ್ಗವಿದ್ದರೆ, ಇನ್ನು ಕೆಲವು ಬಾರಿ ಇನ್ನೊಬ್ಬರ ಮೇಲೆ ವಿನಾ ಕಾರಣ ಗೂಬೆ ಕೂರಿಸುವುದು ಇದೆ. ಅದೇ ಇನ್ನೊಂದೆಡೆ ಅಭಿಮಾನ ಎನ್ನುವ ವರ್ಗ ಬಂದರೆ, ಅವರ ವಿರುದ್ಧ ಏನು ಹೇಳಿದರೂ, ಅವರು ತಪ್ಪು ಮಾಡಿದ್ದರೂ ಅದನ್ನು ಸಹಿಸದ ದೊಡ್ಡ ವರ್ಗವೇ ಇದೆ.
ಇದೀಗ ಇಂಥದ್ದೇ ಒಂದು ಸುಳಿಯಲ್ಲಿ ಸಿಲುಕಿ ನೋವು ಅನುಭವಿಸಿ, ಕೊನೆಗೆ ತಾವು ಸಕ್ಸಸ್ ಕಂಡ ಬಗೆಯನ್ನು ವಿವರಿಸಿದ್ದಾರೆ ರ್ಯಾಪರ್ ರಾಹುಲ್ ಡಿಟೊ. ರ್ಯಾಪಿಡ್ ರಶ್ಮಿ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಹಲವಾರು ವಿಷಯಗಳನ್ನು ಇವರು ಮಾತನಾಡಿದ್ದಾರೆ. ನಡೆದುಬಂದ ಬಗೆ, ಸಂಗೀತ ಕ್ಷೇತ್ರದಲ್ಲಿ ಅನುಭವಿಸಿದ ನೋವು, ನಲಿವು, ಸಕ್ಸಸ್, ಹಣಕಾಸಿನ ಸಮಸ್ಯೆ, ಲೈಫ್ನಲ್ಲಿ ಸಿಕ್ಕ ಬ್ರೇಕ್ ಹೀಗೆ ಹಲವಾರು ವಿಷಯಗಳ ಕುರಿತು ಅವರು ರಶ್ಮಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಕನ್ನಡದಲ್ಲಿ ರ್ಯಾಪ್ ಕ್ಷೇತ್ರ ವಿಸ್ತಾರವಾಗಿ ಹಲವು ದಶಕ ಕಳೆದಿದೆ. ಈ ಹಿಂದಿನ ಬಿಗ್ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ ಹಾಗೂ ತಂಡ ಕನ್ನಡದಲ್ಲಿ ರ್ಯಾಪ್ ಶುರು ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಹೊಸ ದಿಕ್ಕನ್ನು ತೋರಿಸಿಕೊಟ್ಟಿತ್ತು. ಅರ್ಬನ್ ಲ್ಯಾಡ್ಸ್ ಹೆಸರಿನ ಈ ರ್ಯಾಪ್ ಆಲ್ಬಂ ದೊಡ್ಡ ಹಿಟ್ ಆಗಿತ್ತು. ಆ ಬಳಿಕ ಚಂದನ್ ಶೆಟ್ಟಿ, ರಾಹುಲ್ ಡಿಟೊ, ಆಲ್ ಓಕೆ, ಎಂಸಿ ಬಿಚ್ಚು... ಹೀಗೆ ಹಲವಾರು ರ್ಯಾಪರ್ಗಳು ಪ್ರಸಿದ್ಧಿಗೆ ಬಂದರು.
ಆ ಹುಡುಗಿ ನನ್ನ ಹೋಮ್ವರ್ಕ್ ಮಾಡ್ತಿದ್ಲು... ಕಾಲೇಜ್ನ ಕ್ರಷ್ ಒಂದಾ, ಎರಡಾ... ಚಂದನ್ ಶೆಟ್ಟಿ ಓಪನ್ ಮಾತು
ಹೀಗೆ ಕ್ಷೇತ್ರ ದೊಡ್ಡದಾಗುತ್ತಿದ್ದಂತೆಯೇ ಯಾವುದೇ ಕ್ಷೇತ್ರವಾಗಲಿ ಅಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡಲೇಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಸಿಲುಕಿದ್ದರು ರಾಹುಲ್ ಡಿಟೊ. ಬಿಗ್ಬಾಸ್ನಲ್ಲಿ ಚಂದನ್ ಶೆಟ್ಟಿಯವರು ಭಾಗವಹಿಸಿದ್ದ ಸಂದರ್ಭದಲ್ಲಿ ನಡೆದ ಘಟನೆಯನ್ನು ಈ ಸಂದರ್ಭದಲ್ಲಿ ಅವರು ಮೆಲುಕು ಹಾಕಿದ್ದಾರೆ. ಚಂದನ್ ಶೆಟ್ಟಿಯವರು ಒಂದು ಪಾಪ್ ಹಾಡು ಮಾಡಿದ್ದರು. ಅದು ರ್ಯಾಪ್ ಎಂದು ಹೇಳಲಾಗಿತ್ತು. ಆದರೆ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿ ಇದು ರ್ಯಾಪ್ ಅಲ್ಲ ಎಂದು ಹೇಳಿದೆ. ಅದೇ ಸಂದರ್ಭದಲ್ಲಿ ನಾನು ರ್ಯಾಪ್ ಹಾಡೊಂದನ್ನು ಹೊರತಂದೆ. ಅಷ್ಟೊತ್ತಿಗಾಗಲೇ ಚಂದನ್ ಶೆಟ್ಟಿಯವರು ಬಿಗ್ಬಾಸ್ನಲ್ಲಿ ವಿನ್ ಆಗುವ ಮೂಲಕ ಸಾಕಷ್ಟು ಹೆಸರು ಗಳಿಕೆ ಮಾಡಿದ್ದರು. ಅದೇ ಹೊತ್ತಿಗೆ ಅವರ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಮೇಲೆ ಇನ್ನಿಲ್ಲದ ಟೀಕೆಗಳು ಕೇಳಿ ಬಂದವು ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ ರಾಹುಲ್.
ನಮ್ಮ ಕ್ಷೇತ್ರದಲ್ಲಿ ಇವೆಲ್ಲಾ ಮಾಮೂಲು. ಅದೇ ರೀತಿ ನಾನು ಚಂದನ್ ಕುರಿತು ಮಾತನಾಡಿದ್ದೆ. ಆದರೆ ಅವರು ಬಿಗ್ಬಾಸ್ ಮೂಲಕ ಅಸಂಖ್ಯ ಅಭಿಮಾನಿಗಳು ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ನಾನಾಡಿದ ಮಾತುಗಳನ್ನು ಅವರ ಅಭಿಮಾನಿಗಳು ಸಹಿಸಲೇ ಇಲ್ಲ. ಜೀವ ಬೆದರಿಕೆಯೊಂದು ಬಿಟ್ಟು ಎಲ್ಲವೂ ನನಗೆ ಬಂದಿದ್ದವು. ಸಾಕು ಸಾಕಾಗಿ ಹೋಯಿತು. ಎಲ್ಲಾ ಕಡೆಗಳಿಂದಲೂ ನನ್ನ ಮಾತಿಗೆ ಟೀಕೆಗಳು ಕೇಳಿ ಬರತೊಡಗಿದವು ಎನ್ನುತ್ತಲೇ ಆ ಟ್ರೋಲ್ಗಳೇ ತಮ್ಮ ಜೀವನ ಹೇಗೆ ಬದಲಿಸಿತು, ಹೇಗೆ ಬ್ರೇಕ್ ಕೊಟ್ಟಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ನಾನು ರ್ಯಾಪ್ ಮಾಡಿದಾಗ ಅದು ಒಂದಷ್ಟು ಜನಕ್ಕೆ ರೀಚ್ ಆಗ್ತಿತ್ತೋ ಏನೋ, ಆದರೆ ಚಂದನ್ ಶೆಟ್ಟಿಯವರ ವಿರುದ್ಧ ಮಾತನಾಡಿದಾಗ ಟ್ರೋಲ್ ಆದ ಕಾರಣ, ಜನರು ನನ್ನ ರ್ಯಾಪ್ ವೈರಲ್ ಆಯಿತು. ಹಲವರು ಅದನ್ನು ಮೆಚ್ಚಿಕೊಂಡರು. ನನಗೆ ಒಳ್ಳೆಯ ಆಫರ್ಗಳೂ ಸಿಕ್ಕವು. ನನ್ನ ಬದುಕಿಗೆ ಬ್ರೇಕ್ ಕೊಟ್ಟಿದ್ದೇ ಆ ವಿವಾದ ಎಂದು ಹೇಳಿದ್ದಾರೆ.
ಡಿವೋರ್ಸ್ಗೆ ಕಾರಣ ಆ 3ನೇ ವ್ಯಕ್ತಿಯೇ... ಅವ್ರು... ತಿಂಗಳ ಬಳಿಕ ಮನದಾಳದ ಮಾತು ತೆರೆದಿಟ್ಟ ಚಂದನ್ ಶೆಟ್ಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.