ಭುವಿ ಅಪ್ಪನ ಚಿತೆಗೆ ಬೆಂಕಿ ಕೊಡಬೇಕೋ, ಬೇಡ್ವೋ?

By Suvarna NewsFirst Published Jan 2, 2021, 12:00 PM IST
Highlights

ಕನ್ನಡತಿ ಸೀರಿಯಲ್ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಸದ್ಯಕ್ಕೀಗ ಎಲ್ಲೆಲ್ಲೂ ಚರ್ಚೆ ಆಗ್ತಿರೋದು ಭುವಿ ತನ್ನಪ್ಪನ ಚಿತೆಗೆ ಬೆಂಕಿ ಕೊಡ್ತಾಳಾ ಇಲ್ವಾ ಅನ್ನೋದು. ಇದಕ್ಕೆ ವೀಕ್ಷಕರಿಂದ ಎಂಥೆಂಥಾ ಪ್ರತಿಕ್ರಿಯೆ ಬಂದಿದೆ ಗೊತ್ತಾ?

 ಕನ್ನಡತಿ ಸೀರಿಯಲ್ ಇದೀಗ ಕುತೂಹಲಕರ ಘಟ್ಟಕ್ಕೆ ಬಂದು ನಿಂತಿದೆ. ಭುವಿಗೆ ಅಪ್ಪನ ಸಾವಿಗೂ ಕೆಲವು ದಿನ ಮೊದಲೇ ಕೆಟ್ಟ ಕನಸುಗಳು ಬೀಳುತ್ತಿರುತ್ತವೆ. ಅವೆಲ್ಲ ಅವಳಿಗೆ ಅವಳಪ್ಪನ ಸಾವನ್ನೇ ಸೂಚಿಸುತ್ತಿರುತ್ತವೆ. ಎರಡೆರಡು ಬಾರಿ ಇಂಥಾ ಕನಸು ಬಿದ್ದಾಗ ಭುವಿ ಭಯಬೀತಳಾಗಿ ಅಪ್ಪನಿಗೆ ಫೋನ್ ಮಾಡುತ್ತಾಳೆ. ಅಪ್ಪ ಮಾತ್ರ ಅದನ್ನೆಲ್ಲ ತಮಾಷೆಯಾಗಿ ನೋಡಿ ತನಗೆ ಏನೂ ಆಗೋದಿಲ್ಲ ಅಂತ ಮಗಳಿಗೆ ಧೈರ್ಯ ತುಂಬುತ್ತಾರೆ. ಈ ನಡುವೆ ಭುವಿ ಹಸಿರು ಪೇಟೆಯತ್ತ ಪ್ರಯಾಣಿಸುವಾಗ ಏನೇನೋ ವಿಘ್ನಗಳು ಎದುರಾಗುತ್ತವೆ. ಆದರೆ ಹರ್ಷನ ಎಂಟ್ರಿಯಿಂದ ಅದೆಲ್ಲ ಸರಿಹೋಗುತ್ತದೆ. ಕೊನೆಗೂ ಭುವಿಗೆ ಆ ಆಘಾತಕಾರಿ ಸುದ್ದಿ, ತನ್ನ ಅಪ್ಪನ ಸಾವಿನ ಸುದ್ದಿ ಕಿವಿಗೆ ಬಂದು ಅಪ್ಪಳಿಸುತ್ತದೆ. ತನ್ನ ಕನಸಿನಲ್ಲಾದಂತೆ ಅಪ್ಪ ಹಾವು ಕಚ್ಚಿ ಸತ್ತಿರುವುದನ್ನು ಹೇಗೆ ಅರ್ಥೈಸಬೇಕೋ ಗೊತ್ತಾಗದೇ ಭುವಿ ಭೂಮಿಯೇ ಬಾಯ್ಬಿಟ್ಟ ಸ್ಥಿತಿಯಲ್ಲಿರುತ್ತಾಳೆ. ಇನ್ನೊಂದೆಡೆ ಘಟವಾಣಿ ಅಜ್ಜಿ ಇದೇ ಸಂದರ್ಭ ನೋಡಿಕೊಂಡು ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಾ ಸಾವಿನ ಮನೆಯಲ್ಲಿ  ಒಂದು ಹಂತದ ಬಳಿಕ ಭುವಿಯ ಅಪ್ಪನ ಅಂತ್ಯ ಸಂಸ್ಕಾರದ ಮಾತು ಬರುತ್ತದೆ. ಇದಕ್ಕಾಗಿ ಭುವಿ ಮಾವನನ್ನು ಕರೆಸುವ ಮಾತಾಡುತ್ತಾಳೆ ಅಜ್ಜಿ. ಆದರೆ ಈ ಸನ್ನಿವೇಶದಲ್ಲಿ ಭುವಿಯದು ದಿಟ್ಟ ನಿಲುವು. ತನ್ನ ಅಪ್ಪನ ಅಂತ್ಯ ಸಂಸ್ಕಾರವನ್ನುತಾನೇ ಯಾಕೆ ಮಾಡಬಾರದು, ಮನೆಯಲ್ಲಿ ಮೂವರು ಮಕ್ಕಳಿರುವಾಗ ಯಾರೋ ಹೊರಗಿನವರು ಬಂದು ಯಾಕೆ ಮಾಡಬೇಕು ಅನ್ನುವ ನಿಲುವು. ಆದರೆ ಅಜ್ಜಿ ಭುವಿಯ ನಿರ್ಧಾರವನ್ನು ಕಟುವಾಗಿ ಟೀಕಿಸುತ್ತಾಳೆ, ಭುವಿ ವಿನಯದಲ್ಲಿ ತನ್ನ ನಿಲುವು ಸಮರ್ಥಿಸಿಕೊಂಡರೆ, ಅಜ್ಜಿ ಕೆಟ್ಟ ನಡೆಯಿಂದ ತನ್ನ ಮಾತೇ ನಡೆಯಬೇಕು ಅಂತ ಜಿದ್ದಿಗೆ ಬಿದ್ದಿದ್ದಾಳೆ. 

ಸೀರಿಯಲ್ ಸತ್ಯಾಳ ರಿಯಲ್ ಗಂಡ ಯಾರು ಗೊತ್ತಾ! ...

 ಇಂಥದ್ದೊಂದು ನಿರ್ಣಾಯಕ ಹಂತದಲ್ಲೇ ವೀಕ್ಷಕರಲ್ಲಿ ತೀವ್ರ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲೆಲ್ಲ ಎಲ್ಲಿ ನೋಡಿದರೂ ಇದೇ ಮಾತು. ಆ ಚರ್ಚೆಯೂ ಸ್ವಾರಸ್ಯಕರವಾಗಿದೆ. ವಿಭಿನ್ನವಾದ ಸಾವಿರಾರು ಪ್ರತಿಕ್ರಿಯೆಗಳು ವೀಕ್ಷಕರಿಂದ ಬಂದಿದೆ. ಶೇ.೯೦ ರಷ್ಟು ಜನ ಭುವಿಯೇ ಅಪ್ಪನ ಚಿತೆಗೆ ಬೆಂಕಿ ಇಡಬೇಕು, ಅದು ಅವಳಿಗಿರುವ ಅಧಿಕಾರ. ಮಕ್ಕಳಲ್ಲಿ ಗಂಡು ಹೆಣ್ಣಿನ ಭೇದವಿರಬಾರದು, ಈ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಅಧಿಕಾರ ಇದೆ ಎಂದೆಲ್ಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಬ್ಬ ದಿಟ್ಟ ಹೆಣ್ಣುಮಗಳು ತಾನು ಅಮ್ಮನ ಚಿತೆಗೆ ಬೆಂಕಿಕೊಟ್ಟ ಘಟನೆಯನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ. 

ದೀಪಿಕಾ, ಪ್ರಿಯಾಂಕ, ಶಾರುಕ್- ಹೊಸ ವರ್ಷಕ್ಕೆ ಇವರ ರೆಸಲ್ಯೂಶನ್ ಏನು ಗೊತ್ತಾ? ...

'ನಾನು ಒಬ್ಬಳೇ ಮಗಳು. ನನ್ನ ಅಮ್ಮನ ಚಿತೆಗೆ ಬೆಂಕಿ ಕೊಟ್ಟಿದ್ದೇನೆ. ಆದರೆ ಅಮ್ಮನ ಋಣ ತೀರಿಸಲಾಗದ್ದು. ಒಬ್ಬ ತಾಯಿಗೆ ಪುತ್ರ/ಪುತ್ರಿ ಶೋಕ ಹೇಗೆ ನಿರಂತರವೋ ಹಾಗೇ ಮಗಳಿಗೂ ತಾಯಿ/ತಂದೆ ಶೋಕ ನಿರಂತರ. ಹೆತ್ತವರ ರಕ್ತ ಮಾಂಸದಿಂದ ಹುಟ್ಟಿದ ಮಗಳು ಅವರ ಸಂಸ್ಕಾರ ಮಾಡುವುದು ತಪ್ಪಲ್ಲವೇ ಅಲ್ಲ' ಎಂದು ನಿರ್ಮಲಾ ರಾವ್ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು, 'ಈ ಸಮಾಜ ಕಾರ್ಯ ಮಾಡೋಕೆ ಗಂಡುಮಕ್ಕಳು ಮಾತ್ರ ಬೇಕು ಅಂತ ಯಾಕಂತಾರೋ ಗೊತ್ತಿಲ್ಲ. ಎಷ್ಟೋ ಕುಟುಂಬದಲ್ಲಿ ಗಂಡು ಬೇಜವಾಬ್ದಾರಿಯಿಂದಿರುತ್ತಾರೆ. ಹೆಣ್ಣುಮಗಳೇ ಇಡೀ ಜವಾಬ್ದಾರಿ ನಿಭಾಯಿಸುತ್ತಾಳೆ. ಹಾಗಿರುವಾಗ ಗಂಡುಮಕ್ಕಳೇ ಅಂತ್ಯ ಸಂಸ್ಕಾರ ಮಾಡಬೇಕು ಎಂದಿರುವುದು ತಪ್ಪು' ಎಂದಿದ್ದಾರೆ. ಕೆಲವರಂತೂ ಈ ಭುವಿ ತಮ್ಮ ಮನೆ ಮಗಳೇನೋ ಎಂಬಂತೆ, ದಯಮಾಡಿ ಭುವಿಗೆ ಅಂತ್ಯ ಸಂಸ್ಕಾರ ಮಾಡಲು ಅನುಮತಿ ನೀಡಿ ಅಂತ ಭಾವುಕವಾಗಿ ನುಡಿದಿದ್ದಾರೆ. ಕೆಲವರು ಹೆಣ್ಣು ಚಿತೆಗೆ ಬೆಂಕಿ ಕೊಡಬಾರದು ಅನ್ನೋದನ್ನು ಯಾವ ಶಾಸ್ತ್ರವೂ ಹೇಳಿಲ್ಲ. ಇದೆಲ್ಲ ಸಮಾಜವೇ ಮಾಡಿಕೊಂಡಿದ್ದು ಎಂದಿದ್ದಾರೆ. ಜೊತೆಗೆ ಮಹಾ ನಂಜಿನ ಹೆಣ್ಮಗಳು ಮಂಗಳಜ್ಜಿಗೆ ಎಲ್ಲರೂ ಚೆನ್ನಾಗಿ ಮಂಗಳಾರತಿ ಮಾಡಿದ್ದಾರೆ. ಇನ್ನೂ ಕೆಲವರು ಹರ್ಷನೇ ಅಂತ್ಯ ಸಂಸ್ಕಾರ ಮಾಡಲಿ, ಈ ಮೂಲಕವಾದರೂ ಹರ್ಷ ಭುವಿ ಒಂದಾಗಲಿ ಅಂತ ಹಾರೈಸಿದ್ದಾರೆ. 

ಒಟ್ಟಿನಲ್ಲೀಗ ಕನ್ನಡತಿ ಸಖತ್ ಸುದ್ದಿಯಲ್ಲಿದ್ದಾಳೆ. ಜನರ ಪ್ರತಿಕ್ರಿಯೆ ನೋಡಿದ್ರೇ ಅವರು ಈ ಸೀರಿಯಲ್ ನ ಯಾವ ಮಟ್ಟಿಗೆ ಹಚ್ಚಿಕೊಂಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ಬಹುಜನರ ಬೇಡಿಕೆಯನ್ನು ಕನ್ನಡತಿ ಈಡೇರಿಸುತ್ತಾಳಾ ಅನ್ನೋದನ್ನು ಕಾದು ನೋಡಬೇಕು. 

ಅಯ್ಯಯ್ಯೋ, ಭುವಿಗೆ ಇದೇನು ಸಂಕಟ ಬಂತು? ...
 

click me!