'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕಲಾವಿದರು ಒಟ್ಟಿಗೆ ಸೇರಿದ್ದು, ಡಿನ್ನರ್ ಮಾಡಿರೋದು ಸಾಕಷ್ಟು ಪ್ರಶ್ನೆ ಸೃಷ್ಟಿಸಿದೆ.
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮುಕ್ತಾಯ ಆಗುತ್ತಿದೆ, ಸದ್ಯ ಅಂತಿಮ ಸಂಚಿಕೆಗಳು ಪ್ರಸಾರ ಆಗುತ್ತಿವೆ ಎನ್ನುವ ಗಾಸಿಪ್ ಮಧ್ಯೆಯೇ ಈ ಸೀರಿಯಲ್ ತಂಡ ಒಟ್ಟಿಗೆ ಸೇರಿದೆ. ಈ ಮೂಲಕ ವದಂತಿಗೆ ಇನ್ನಷ್ಟು ಪುಷ್ಠಿ ಸಿಕ್ಕಿದ ಹಾಗಿದೆ. ಹೌದು, ಈ ಧಾರಾವಾಹಿಯ ಕಲಾವಿದರು ಒಟ್ಟಿಗೆ ಸೇರಿ ಡಿನ್ನರ್ ಮಾಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಒನ್ಡೇ ಟ್ರಿಪ್ ಮಾಡಿದ್ದರು!
ಈ ಹಿಂದೆ ʼಲಕ್ಷ್ಮೀ ಬಾರಮ್ಮʼ ಹಾಗೂ ʼಭಾಗ್ಯಲಕ್ಷ್ಮೀʼ ಧಾರಾವಾಹಿ ನಟಿಮಣಿಯರು ಒನ್ಡೇ ಟ್ರಿಪ್ ಮಾಡಿದ್ದರು. ಅದಾದ ಬಳಿಕ ಲಾವಣ್ಯಾ ಹೀರೆಮಠ ಮದುವೆಯಲ್ಲಿ ಕೆಲವರು ಭಾಗಿಯಾಗಿದ್ದರು. ಇದನ್ನು ಬಿಟ್ಟರೆ ಬೇರೆಲ್ಲೂ ಅಷ್ಟಾಗಿ ಗೆಟ್ ಟು ಗೆದರ್ ಮಾಡಿರಲಿಲ್ಲ. ಈಗ ಇವರು ಒಟ್ಟಿಗೆ ಸೇರಿ ಡಿನ್ನರ್ ಮಾಡಿರೋದು ಸಾಕಷ್ಟು ಅನುಮಾನ ಮೂಡಿಸಿದೆ.
ಈಗ ಡಿನ್ನರ್ ಮಾಡಿರುವ ಕಲಾವಿದರು!
ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಲಾವಿದರಾದ ಸುಷ್ಮಾ ನಾಣಯ್ಯ, ಭೂಮಿಕಾ ರಮೇಶ್, ರಜನಿ ಪ್ರವೀಣ್, ಲಾವಣ್ಯಾ ಹೀರೆಮಠ ಮುಂತಾದವರು ಒಟ್ಟಿಗೆ ಡಿನ್ನರ್ ಮಾಡಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಶಮಂತ್ ಬ್ರೋ ಗೌಡ, ನಟಿ ಚಂದನಾ ಮಹಾಲಿಂಗಯ್ಯ ಅವರು ಗೈರು ಹಾಕಿದ್ದರು.
ನಿಜಕ್ಕೂ ಸೀರಿಯಲ್ ಅಂತ್ಯ ಆಗ್ತಿದ್ಯಾ?
ಒಳ್ಳೆಯ ಟಿಆರ್ಪಿ ಪಡೆಯುತ್ತಿದ್ದ ʼಲಕ್ಷ್ಮೀ ಬಾರಮ್ಮʼ ( Lakshmi Baramma kannada Serial ) ಹೇಗೆ ಇಷ್ಟು ಬೇಗ ಅಂತ್ಯ ಆಗತ್ತೆ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ. ಇನ್ನು ʼಭಾಗ್ಯಲಕ್ಷ್ಮೀʼ ಧಾರಾವಾಹಿ ಕಥೆ ಜೊತೆ ಮತ್ತೆ ಸೇರ್ಪಡೆಯಾಗತ್ತಾ ಎನ್ನುವ ಪ್ರಶ್ನ ಎದ್ದಿದೆ. ವೈಷ್ಣವ್ ಪಾತ್ರಧಾರಿ ಶಮಂತ್ ಬ್ರೊ ಗೌಡ ಅವರು ಸಿನಿಮಾ ಮಾಡುತ್ತಿದ್ದಾರೆ. ಲಕ್ಷ್ಮೀ ಪಾತ್ರಧಾರಿ ಭೂಮಿಕಾ ರಮೇಶ್ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಲಾವಿದರು ಬ್ಯು ಇರೋದರಿಂದ ಸೀರಿಯಲ್ ಅಂತ್ಯ ಮಾಡ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಪಾತ್ರಧಾರಿಗಳನ್ನು ಬದಲಿಸಿದ್ರೆ ವೀಕ್ಷಕರು ಒಪ್ಪೋದಿಲ್ಲ. ಈ ಬಗ್ಗೆ ವಾಹಿನಿಯಾಗಲೀ, ಕಲಾವಿದರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಧಾರಾವಾಹಿ ಕಥೆ ಏನು?
ಕಾವೇರಿಯಂಥ ತಾಯಿ ಸಿಗೋದು ಬಹಳ ಅಪರೂಪ ಬಿಡಿ. ಕಾವೇರಿಯ ಮಮತೆ, ವಾತ್ಸಲ್ಯ ಅತಿಯಾಗಿದೆ, ತುಂಬ ಪೊಸೆಸ್ಸಿವ್ ಅವಳು. ಮಗ ವೈಷ್ಣವ್ ನನಗೆ ಮಾತ್ರ ಟೈಮ್ ಕೊಡಬೇಕು, ಅವನು ನನ್ನ ಬಗ್ಗೆ ಯೋಚಿಸಬೇಕು, ನನಗೆ ಮಾತ್ರ ಆದ್ಯತೆ ಕೊಡಬೇಕು ಅಂತ ಅವಳು ಬಯಸುತ್ತಾಳೆ. ಇದಕ್ಕಾಗಿ ಅವಳು ಏನು ಬೇಕಿದ್ರೂ ಮಾಡ್ತಾಳೆ. ಈಗಾಗಲೇ ಗಂಡನ ತಾಯಿಯನ್ನು ಕೊಂದಿರುವ ಅವಳು ವೈಷ್ಣವ್ ಪ್ರೀತಿಸಿದ್ದ ಹುಡುಗಿ ಕೀರ್ತಿಯನ್ನು ಕೊಲ್ಲಲು ಮುಂದಾಗಿದ್ದಳು. ನನ್ನ ಮಗ ನನ್ನ ಮಾತು ಕೇಳಲ್ಲ ಅಂತ ವೈಷ್ಣವ್, ಕೀರ್ತಿ ದೂರ ಆಗುವ ಹಾಗೆ ಮಾಡಿದಳು. ವೈಷ್ಣವ್, ಲಕ್ಷ್ಮೀ ಮದುವೆ ಆಗುವ ಹಾಗೆ ಮಾಡಿದಳು. ಕಾವೇರಿ ದುಷ್ಟಬುದ್ಧಿ ಲಕ್ಷ್ಮೀಗೆ ಗೊತ್ತಾಯ್ತು, ಅದನ್ನು ಪ್ರಶ್ನೆ ಮಾಡಿ, ಎಲ್ಲರ ಮುಂದೆ ತೆರೆದಿಟ್ಟಳು. ಹೀಗಾಗಿ ಮಗನಿಗೆ ಇನ್ನೊಂದು ಮದುವೆ ಮಾಡಲು ಕಾವೇರಿ ಪ್ಲ್ಯಾನ್ ಮಾಡಿದ್ದಾಳೆ. ವೈಷ್ಣವ್ಗೆ ತನ್ನ ತಾಯಿಯ ನಿಜವಾದ ಮುಖವಾಡ ಗೊತ್ತಾಗತ್ತೋ ಇಲ್ಲವೋ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ವೈಷ್ಣವ್ ಪಾತ್ರದಲ್ಲಿ ನಟ ಶಮಂತ್ ಬ್ರೋ ಗೌಡ, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್, ಕೀರ್ತಿ ಪಾತ್ರದಲ್ಲಿ ತನ್ವಿ ರಾವ್, ಕಾವೇರಿ ಪಾತ್ರದಲ್ಲಿ ನಟಿ ಸುಷ್ಮಾ ನಾಣಯ್ಯ, ಸುಪ್ರೀತಾ ಪಾತ್ರದಲ್ಲಿ ರಜನಿ ಪ್ರವೀಣ್ ಅವರು ನಟಿಸುತ್ತಿದ್ದಾರೆ.