
ಬೆಂಗಳೂರು (ಜು.30): ರಾಜ್ಯದಲ್ಲಿ ಐದೂವರೆ ತಿಂಗಳ ಬಳಿಕ ಕೊರೋನಾ ಹೊಸ ಪ್ರಕರಣಗಳು ಎರಡು ಸಾವಿರ ಗಡಿದಾಟಿದ್ದು, ಸೋಂಕಿತರ ಸಾವು ಕೂಡ ನಾಲ್ಕೂವರೆ ತಿಂಗಳ ಬಳಿಕ ನಾಲ್ಕಕ್ಕೆ ಏರಿಕೆಯಾಗಿವೆ. ಈ ನಡುವೆ ನಿರಂತರ ಹೊಸ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಸಕ್ರಿಯ ಸೋಂಕು ಪ್ರಕರಣಗಳು 10 ಸಾವಿರ ಗಡಿಗೆ ತಲುಪಿವೆ.
ಶುಕ್ರವಾರ 2130 ಹೊಸ ಪ್ರಕರಣ ಪತ್ತೆಯಾಗಿದ್ದು, 1395 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರು ನಗರದದಲ್ಲಿ 69 ವರ್ಷದ ವೃದ್ಧೆ, ರಾಯಚೂರಿನಲ್ಲಿ 45 ವರ್ಷದ ಪುರುಷ, ಕೊಪ್ಪಳದಲ್ಲಿ 55 ವರ್ಷದ ಪುರುಷ, ಕಲಬುರಗಿಯಲ್ಲಿ 66 ವರ್ಷದ ವೃದ್ಧೆ ಸೇರಿ ನಾಲ್ಕು ಸೋಂಕಿತರು ಸಾವಿಗೀಡಾಗಿದ್ದಾರೆ. 32 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6.5 ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಒಂದು ಸಾವಿರ ಹೆಚ್ಚು ನಡೆದಿವೆ. ಹೀಗಾಗಿ, ಹೊಸ ಪ್ರಕರಣಗಳು 241 ಹೆಚ್ಚಳವಾಗಿವೆ (ಗುರುವಾರ 1889 ಕೇಸ್, ಸಾವು ಮೂರು).
ಕರ್ನಾಟಕದಲ್ಲಿ 2000 ಸನಿಹಕ್ಕೆ ಕೋವಿಡ್ ಸೋಂಕು ಏರಿಕೆ: 3 ಸಾವು
ಕಳೆದ ಫೆಬ್ರವರಿ 13ರಂದು 2372 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ 164 ದಿನಗಳ ಬಳಿಕ ಎರಡು ಸಾವಿರಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಮಾರ್ಚ್ 18ರಂದು ನಾಲ್ವರು ಸೋಂಕಿತರ ಸಾವಾಗಿತ್ತು. ಆ ಬಳಿಕ ಬಹುತೇಕ ದಿನ ಶೂನ್ಯಕ್ಕೆ ತಗ್ಗಿತ್ತು. ಸದ್ಯ ನಾಲ್ಕೂವರೆ ತಿಂಗಳ ಬಳಿಕ ನಾಲ್ವರು ಸಾವಿಗೀಡಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಹೊಸ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆ ಸಕ್ರಿಯ ಸೋಂಕಿತರು ಕೂಡ 10 ಸಾವಿರ ಗಡಿ ತಲುಪಿದ್ದಾರೆ. ಸದ್ಯ 9,866 ಸಕ್ರಿಯ ಸೋಂಕಿತರ ಪೈಕಿ 66 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿ ಐಸಿಯು, 9 ಮಂದಿ ಆಕ್ಸಿಜನ್, 47 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 9,800 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
ಉಡುಪಿಯಲ್ಲಿ 7 ಮಂದಿಗೆ ಕೋವಿಡ್: ಜಿಲ್ಲೆಯಲ್ಲಿ ಶುಕ್ರವಾರ 476 ಮಂದಿಯ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ಉಡುಪಿ ತಾಲೂಕಿನ 2 ಮತ್ತು ಕುಂದಾಪುರ ತಾಲೂಕಿನ 5 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ದಿನ 7 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 24 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 540 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ಕೊಡಗಿನಲ್ಲಿ 44 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಶುಕ್ರವಾರ 44 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ 25, ವೀರಾಜಪೇಟೆ ತಾಲೂಕಿನಲ್ಲಿ 16, ಸೋಮವಾರಪೇಟೆ ತಾಲೂಕಿನಲ್ಲಿ 3 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 47,800 ಆಗಿದ್ದು, ಒಟ್ಟು 47,259 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 451 ಮರಣ ಪ್ರಕರಣಗಳು ವರದಿಯಾಗಿದೆ. 90 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಕಂಟೈನ್ಮೆಂಟ್ ವಲಯಗಳ ಸಂಖ್ಯೆ 26 ಆಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.6.54 ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.
ಅಮೆರಿಕದಲ್ಲಿ ಮಂಕಿಪಾಕ್ಸ್ ಆತಂಕ, ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ ಸ್ಯಾನ್ ಫ್ರಾನ್ಸಿಸ್ಕೋ!
ಎಲ್ಲಿ, ಎಷ್ಟು ಪ್ರಕರಣ?: ಬೆಂಗಳೂರಿನಲ್ಲಿ 1615 ಪತ್ತೆಯಾಗಿವೆ. ಉಳಿದಂತೆ ಧಾರವಾಡ 70, ಮೈಸೂರು 51, ಕೊಡಗು 47, ತುಮಕೂರು 41, ಹಾಸನ 40, ಬೆಳಗಾವಿ 34, ಕಲಬುರಗಿ 33, ಬಳ್ಳಾರಿ 27, ಮಂಡ್ಯ 22, ದಕ್ಷಿಣ ಕನ್ನಡ 20 ಮಂದಿಗೆ ಸೋಂಕು ತಗುಲಿದೆ. ಐದು ಜಿಲ್ಲೆಗಳಲ್ಲಿ 20ಕ್ಕಿಂತ ಕಡಿಮೆ, 13 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟುಮಂದಿಗೆ ಸೋಂಕು ತಗುಲಿದೆ. ಯಾದಗಿರಿಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ