Banaras: ಚಿತ್ರರಂಗಕ್ಕೆ ಬರುವುದು ತಂದೆಗೆ ಇಷ್ಟಇರಲಿಲ್ಲ: ಝೈದ್‌ ಖಾನ್‌

By Govindaraj SFirst Published Sep 28, 2022, 6:38 AM IST
Highlights

ಜಯತೀರ್ಥ ನಿರ್ದೇಶನದ, ತಿಲಕ್‌ರಾಜ್‌ ಬಲ್ಲಾಳ್‌ ನಿರ್ಮಾಣದ, ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಪುತ್ರ ಝೈದ್‌ ಖಾನ್‌ ನಟಿಸಿರುವ ‘ಬನಾರಸ್‌’ ಸಿನಿಮಾದ ಟ್ರೇಲರ್‌ ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ. 

ಜಯತೀರ್ಥ ನಿರ್ದೇಶನದ, ತಿಲಕ್‌ ರಾಜ್‌ ಬಲ್ಲಾಳ್‌ ನಿರ್ಮಾಣದ, ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಪುತ್ರ ಝೈದ್‌ ಖಾನ್‌ ನಟಿಸಿರುವ ‘ಬನಾರಸ್‌’ ಸಿನಿಮಾದ ಟ್ರೇಲರ್‌ ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಟ್ರೇಲರನ್ನು ರವಿಚಂದ್ರನ್‌ ಬಿಡುಗಡೆಗೊಳಿಸಿದರೆ ಹಿಂದಿ ಟ್ರೇಲರ್‌ ಅನ್ನು ಸಲ್ಮಾನ್‌ ಖಾನ್‌ ಸಹೋದರ, ನಟ ಅರ್ಬಾಜ್‌ ಖಾನ್‌ ರಿಲೀಸ್‌ ಮಾಡಿದರು. ಈ ಕಾರ್ಯಕ್ರಮಕ್ಕೆ ಕನ್ನಡ ಪತ್ರರ್ಕರ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯ ಪತ್ರಕರ್ತರೂ ಬೆಂಗಳೂರಿಗೆ ಆಗಮಿಸಿದ್ದರು. 

ಮೊದಲ ಸಿನಿಮಾ ಬಿಡುಗಡೆ ಸನ್ನಿಹಿತವಾಗಿರುವ ಸಂಭ್ರಮದಲ್ಲಿದ್ದ ಝೈದ್‌ ಖಾನ್‌, ‘ಒಂದು ವಿಭಿನ್ನ ಕತೆಯಲ್ಲಿ ನಟಿಸುವ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ಸಿನಿಮಾದಲ್ಲಿ ನಟಿಸಬೇಕೆಂದು ಬಹಳ ವರ್ಷಗಳ ಕಾಲ ಒಬ್ಬ ಹುಡುಗ ನಡೆಸಿದ ಒದ್ದಾಟ ಈ ಸಿನಿಮಾದ ಹಿಂದೆ ಇದೆ. ನಾನು ಚಿತ್ರರಂಗಕ್ಕೆ ಬರುವುದು ಕುಟುಂಬಕ್ಕೆ ಇಷ್ಟವಿರಲಿಲ್ಲ. ತಂದೆಗೆ ನಾನು ರಾಜಕಾರಣಕ್ಕೆ ಬರುವುದೂ ಇಷ್ಟಇರಲಿಲ್ಲ. ನಿರ್ಮಾಪಕ, ಹಿತೈಷಿ ತಿಲಕ್‌ರಾಜ್‌ ಅವರಿಂದಾಗಿ ನಾನು ನಟಿಸುವಂತಾಯಿತು. ಜನರು ಪ್ರೀತಿ ತೋರಿಸುತ್ತಾರೆಂದು ನಂಬಿದ್ದೇನೆ’ ಎಂದರು.

Puneeth Rajkumar ಸಮಾಧಿ ಬಳಿ 'ಬನಾರಸ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ನಿರ್ಮಾಪಕ ತಿಲಕ್‌ ರಾಜ್‌ ಬಲ್ಲಾಳ್‌, ‘ಝೈದ್‌ ಮೇಲಿನ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದೇನೆ, ಈ ಸಿನಿಮಾ ಬಂದ ನಂತರ ಝೈದ್‌ ಬೇರೆ ಹಂತಕ್ಕೆ ಹೋಗುತ್ತಾನೆ’ ಎಂದರು. ನಿರ್ದೇಶಕ ಜಯತೀರ್ಥ, ‘ಪ್ರೇಮಕತೆಯೊಂದಿಗೆ ಬೇರೆಯದೇನನ್ನೋ ಹೇಳುವ ಆಸೆ ಇತ್ತು. ಹಾಗಾಗಿ ಪ್ರೇಮದ ಜೊತೆ ಟೈಮ್‌ ಟ್ರಾವೆಲ್‌, ಟೈಮ್‌ ಲೂಪ್‌ ಕಾನ್ಸೆಪ್ಟ್‌ ತಂದಿದ್ದೇನೆ. ಅದು ಟ್ರೇಲರ್‌ ನೋಡಿದರೆ ತಿಳಿಯುತ್ತದೆ. ಬನಾರಸ್‌ನ ಚಂದವನ್ನು ತೆರೆ ಮೇಲೆ ತರುವ ಆಸೆ ಪೂರೈಸಿದೆ. ಹೊಸ ಹುಡುಗನ ಜೊತೆ ಹೊಸ ಕತೆ ಹೇಳಿದ್ದೇನೆ’ ಎಂದರು.

ಝೈದ್‌ ಖಾನ್‌ ಪ್ರೀತಿಯ ಕೋರಿಕೆಗೆ ಮಣಿದು ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಬಂದಿದ್ದ ರವಿಚಂದ್ರನ್‌, ‘ಟ್ರೇಲರ್‌ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ. ಝೈದ್‌ ತುಂಬಾ ಕ್ಯೂಟ್‌ ಆಗಿ ಕಾಣಿಸುತ್ತಿದ್ದಾರೆ. ಈ ಸಿನಿಮಾ ನೋಡಬೇಕು ಅನ್ನುವ ಕುತೂಹಲ ಹುಟ್ಟಿದೆ’ ಎಂದರು. ಬಾಲಿವುಡ್‌ ನಟ ಅರ್ಬಾಜ್‌ ಖಾನ್‌, ‘ದೊಡ್ಡ ಪ್ರಯಾಣದ ಆರಂಭದ ಹೆಜ್ಜೆ ಇದು. ದೂರ ಪ್ರಯಾಣ ಎಂದಾಗ ಎತ್ತರ, ತಗ್ಗು ಇದ್ದಿದ್ದೇ. ನಮ್ಮನ್ನು ನಾವು ಇಂಪ್ರೂವ್‌ ಮಾಡಿಕೊಂಡು ಸಾಗುವುದರ ಕಡೆಗೆ ಗಮನ ಕೊಡಬೇಕು’ ಎಂದರು. ನಾಯಕ ನಟಿ ಸೋನಲ್‌ ಮೊಂತೆರೋ, ಅಚ್ಯುತ್‌ ಕುಮಾರ್‌, ಸುಜಯ್‌ ಶಾಸ್ತ್ರಿ, ತೆಲುಗು ನಿರ್ಮಾಪಕ ಸತೀಶ್‌ ವರ್ಮಾ, ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ, ನಟಿ ಸಪ್ನ ಇದ್ದರು.

ನಾಯಕನಾಗಬೇಕೆಂಬ ಕನಸಿಗೆ ಝೈದ್ ಖಾನ್ ತಯಾರಿ ಹೇಗಿತ್ತು ಗೊತ್ತಾ?

ಝೈದ್‌ ಖಾನ್‌ ಎರಡನೇ ಚಿತ್ರಕ್ಕೆ ತರುಣ್‌ ಸುಧೀರ್‌ ನಿರ್ದೇಶನ!: ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಪುತ್ರ ಝೈದ್‌ ಖಾನ್‌ ನಟನೆಯ ಮೊದಲ ಸಿನಿಮಾ ‘ಬನಾರಸ್‌’ ಬಿಡುಗಡೆ ಮೊದಲೇ ಎರಡನೇ ಚಿತ್ರದ ತಯಾರಿ ನಡೆದಿದೆ. ಝೈದ್‌ ಖಾನ್‌ ನಟನೆಯ ಎರಡನೇ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ‘ಬನಾರಸ್‌’ ಚಿತ್ರದ ಕೆಲ ದೃಶ್ಯಗಳನ್ನು ನೋಡಿ ಅದರ ಪ್ರಮೋಷನ್‌ಗೆ ತರುಣ್‌ ಸುಧೀರ್‌ ಚಿತ್ರತಂಡಕ್ಕೆ ಕೆಲ ಸಲಹೆಗಳನ್ನು ಕೊಟ್ಟಿದ್ದಾರೆ. ಈ ಹೊತ್ತಿನಲ್ಲಿ ಝೈದ್‌ ಖಾನ್‌ಗೆ ಸಿನಿಮಾ ಮಾಡುವ ಪ್ಲಾನ್‌ ಕೂಡ ಮಾಡಿದ್ದಾರೆ ಎನ್ನುವುದು ಸದ್ಯದ ಸುದ್ದಿ.
 

click me!